ನಾಗತಿಹಳ್ಳಿ ಚಂದ್ರಶೇಖರ್
ಚಿತ್ರ ನಿರ್ದೇಶಕ, ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ಬಹುಮುಖ ಪ್ರತಿಭೆ. ಸಾಂಸ್ಕೃತಿಕ ಲೋಕ, ಶಿಕ್ಷಣ, ಬರವಣಿಗೆ, ಪತ್ರಿಕಾ ಅಂಕಣಗಳು, ಸಿನಿಮಾ, ಕಿರುತೆರೆ ಹೀಗೆ ಅವರು ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಂಡು ಹೆಸರು ಮಾಡಿದವರು.
ನಾಗತಿಹಳ್ಳಿ ಚಂದ್ರಶೇಖರ್. | |
---|---|
![]() | |
ಜನನ | ೧೯೫೮ ಆಗಸ್ಟ್ ೧೫ ನಾಗತಿಹಳ್ಳಿ, ಮಂಡ್ಯ ಜಿಲ್ಲೆ, ಕರ್ನಾಟಕ |
ವೃತ್ತಿ | ಸಿನಿಮಾ ನಿರ್ದೇಶಕರು, ನಿರ್ಮಾಪಕರು ಮತ್ತು ಬರಹಗಾರ |
ಸಂಗಾತಿ(ಗಳು) | ಶೋಭ |
ಮಕ್ಕಳು | ಸಿಹಿ, ಕನಸು |
ಜಾಲತಾಣ | http://www.nagathihalli.com/ |
ಜೀವನ
ಮಂಡ್ಯ ಜಿಲ್ಲೆಯ ನಾಗತಿಹಳ್ಳಿ ಎಂಬಲ್ಲಿ ಆಗಸ್ಟ್ ೧೫, ೧೯೫೮ರ ವರ್ಷದಲ್ಲಿ ಚಂದ್ರಶೇಖರ್ ಜನಿಸಿದರು. ತಂದೆ ತಿಮ್ಮಶೆಟ್ಟಿ ಗೌಡರು, ತಾಯಿ ಪಾರ್ವತಮ್ಮ. ಪ್ರಾರಂಭಿಕ ಶಿಕ್ಷಣವನ್ನು ತಮ್ಮ ಊರಾದ ನಾಗತಿಹಳ್ಳಿಯಲ್ಲಿ ಪಡೆದ ಅವರು ಮುಂದೆ ತಮ್ಮ ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿ ನಡೆಸಿದರು. ಸ್ನಾತಕೋತ್ತರ ಪದವಿಯನ್ನು ಹಲವಾರು ಸ್ವರ್ಣಪದಕಗಳೊಂದಿಗೆ ಗಳಿಸಿದ ಚಂದ್ರಶೇಖರ್ ತಮ್ಮ ಗ್ರಾಮವಾದ ನಾಗತಿಹಳ್ಳಿಯಲ್ಲಿ ‘ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ`ಯನ್ನು ಆರಂಭಿಸಿದರು. ಜೊತೆಗೆ ಪ್ರತಿ ಯುಗಾದಿಯ ಸಂದರ್ಭದಲ್ಲಿ `ನಾಗತಿಹಳ್ಳಿ ಸಾಂಸ್ಕೃತಿಕ ಹಬ್ಬ’ಕ್ಕೆ ಸಹಾ ಚಾಲನೆ ನೀಡಿದರು. ಈ ವೇದಿಕೆಯ ಮೂಲಕ ಗ್ರಾಮದಲ್ಲಿ ಸುಸಜ್ಜಿತ ಗ್ರಂಥಾಲಯ, ರಂಗಮಂದಿರ, ಕಂಪ್ಯೂಟರ್ ಕೇಂದ್ರಗಳನ್ನು ತೆರೆಯುವ ಮೂಲಕ ಗ್ರಾಮೀಣ ಜನರ ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಿಗೊಳಿಸುವ ಕೆಲಸವನ್ನು ಆರಂಭಿಸಿದರು. ಈ ವೇದಿಕೆಯು ಗ್ರಾಮೀಣರ ಆರ್ಥಿಕ ಸಮಸ್ಯೆಗಳಿಗೂ ಸ್ಪಂದಿಸುತ್ತಿರುವ ಸಂಗತಿ ನಾಗಮಂಗಲ ತಾಲ್ಲೂಕಿನ ಬಿದರಕೆರೆ, ಯರಗನಹಳ್ಳಿ, ಸಬ್ಬನಕುಪ್ಪೆ ಗ್ರಾಮಸ್ಥರಿಗೂ ಸ್ಫೂರ್ತಿ ನೀಡಿದೆ. ಈ ವೇದಿಕೆಯ ಆಶಯಗಳನ್ನೇ ಸುತ್ತಮುತ್ತಲಿನ ಗ್ರಾಮಸ್ಥರೆಲ್ಲರೂ ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ.
ಪ್ರಾಧ್ಯಾಪಕ ಮತ್ತು ಬರಹಗಾರರಾಗಿ
ಕನ್ನಡ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸತೊಡಗಿದ ನಾಗತಿಹಳ್ಳಿ ಚಂದ್ರಶೇಖರರು ಕಥಾಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದರು. ಇನ್ನೂ ಎಂಟನೆಯ ತರಗತಿಯಲ್ಲಿ ಓದುತ್ತಿರುವಾಗಲೇ ಅವರು ‘ಆವರ್ತ’ ಎಂಬ ಕಥೆ ಬರೆದರು. ಇದುವರೆಗೆ ಕಥೆ, ಕಾದಂಬರಿ, ಪ್ರವಾಸ ಕಥನಗಳನ್ನು ಒಳಗೊಂಡ ಅವರ 21 ಪ್ರಕಟಣೆಗಳು ಬೆಳಕು ಕಂಡಿವೆ. ‘ಹಾಡುಗಳು’, ‘ನನ್ನ ಪ್ರೀತಿಯ ಹುಡುಗನಿಗೆ’, ‘ಮಲೆನಾಡಿನ ಹುಡುಗಿ, ಬಯಲು ಸೀಮೆಯ ಹುಡುಗ’, ‘ಸನ್ನಿಧಿ’, ‘ಪ್ರೇಮ ಕಥಾ ಸಂಪುಟ’, ‘ಅಕಾಲ’, ‘ಛಿದ್ರ’ ನಾಗತಿಹಳ್ಳಿಯವರ ಪ್ರಸಿದ್ಧ ಕಥಾ ಸಂಕಲನ ಗಳು. ‘ಬಾ ನಲ್ಲೆ ಮಧುಚಂದ್ರಕೆ’, ‘ಚುಕ್ಕಿ ಚಂದ್ರಮರ ನಾಡಿನಲ್ಲಿ’, ‘ವಲಸೆ ಹಕ್ಕಿಯ ಹಾಡು’ ಅವರ ಕಾದಂಬರಿಗಳು. ‘ಆಯನ’, ‘ಅಮೆರಿಕ! ಅಮೇರಿಕಾ!!’, ‘ದಕ್ಷಿಣ ಧ್ರುವದಿಂ’, ‘ಹೊಳೆದಂಡೆ’ ಮುಂತಾದವು ಅವರ ಪ್ರವಾಸ ಕಥನಗಳು’. ‘ನನ್ನ ಪ್ರೀತಿಯ ಹುಡುಗಿಗೆ’ ಹಲವು ಸಂಪುಟಗಳಲ್ಲಿ ಮೂಡಿಬಂದಿರುವ ಅವರ ಆತ್ಮಕಥೆಯಾಗಿದೆ. ‘ಶತಮಾನದಂಚಿನಲ್ಲಿ’ ಅವರ ವಿವಿಧ ಲೇಖನಗಳ ಸಂಗ್ರಹ ಸಂಪುಟವಾಗಿದೆ.
ಕೃತಿಗಳು
- ಹದ್ದುಗಳು
- ನನ್ನ ಪ್ರೀತಿಯ ಹುಡುಗನಿಗೆ
- ಮಲೆನಾಡಿನ ಹುಡುಗಿ, ಬಯಲುಸೀಮೆಯ ಹುಡುಗ
- ಬಾ ನಲ್ಲೆ ಮಧುಚಂದ್ರಕೆ
- ಚುಕ್ಕಿ ಚಂದ್ರಮರ ನಾಡಿನಲ್ಲಿ
- ಸನ್ನಿಧಿ
- ಅಕಾಲ
- ಪ್ರೇಮ ಕಥಾ ಸಂಪುಟ
- ವಲಸೆ ಹಕ್ಕಿಯ ಹಾಡು
- ಅಮೇರಿಕ! ಅಮೇರಿಕ!!
- ಶತಮಾನದಂಚಿನಲ್ಲಿ
ದೃಶ್ಯ ಮಾಧ್ಯಮದಲ್ಲಿ
ಹೀಗೆ ಕಥೆ ಹೇಳುವುದರಲ್ಲಿ ಪ್ರೀತಿಯುಳ್ಳ ನಾಗತಿಹಳ್ಳಿ ಚಂದ್ರಶೇಖರರಿಗೆ ಕಥೆ ಹೇಳುವ ದೃಶ್ಯ ಮಾಧ್ಯಮದ ಕಡೆ ಕೂಡಾ ಒಲವು ಹರಿದು ಬಂತು.ಚಂದ್ರಶೇಖರ್ ಸಿನಿಮಾ ಉದ್ಯಮದಲ್ಲಿ ಕಾರ್ಯ ಪ್ರಾರಂಭಿಸಿದ್ದು 'ಕಾಡಿನ ಬೆಂಕಿ' ಚಿತ್ರದ ಸಂಭಾಷಣೆ ಬರೆಯುವುದರ ಮೂಲಕ. ತದನಂತರ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇವರ ಮಾತಾಡ್ ಮಾತಾಡು ಮಲ್ಲಿಗೆ ಚಿತ್ರ ೨೦೦೭ರಲ್ಲಿ ಕ್ಯಾನೆ ಚಿತ್ರೋತ್ಸವದಲ್ಲಿ ತೆರೆ ಕಂಡಿತ್ತು. ಇಂದು ಕನ್ನಡ ಚಿತ್ರರಂಗದಲ್ಲಿ ನಾಗತಿಹಳ್ಳಿ ಚಂದ್ರಶೇಖರರ ಚಿತ್ರಗಳು ವಿಶಿಷ್ಟ ಸ್ಥಾನ ಪಡೆದಿವೆ. ಅವರ ‘ಮಾತಾಡ್ ಮಾತಾಡು ಮಲ್ಲಿಗೆ’ ಸಾಗರಗಳನ್ನು ದಾಟಿ ಕೇನ್ಸ್ ಅಂತಹ ಪ್ರತಿಷ್ಟಿತ ಉತ್ಸವಗಳಲ್ಲಿ ಪ್ರದರ್ಶನ ಕಂಡಿತು. ತಮ್ಮ ಅಧ್ಯಾಪನದ ದಿನಗಳಲ್ಲಿ ಚಿತ್ರಕಥೆ, ಸಂಭಾಷಣೆ, ಗೀತ ರಚನೆಗಳಲ್ಲಿ ಭಾಗಿಯಾಗುತ್ತಿದ್ದ ನಾಗತಿಹಳ್ಳಿ ಚಂದ್ರಶೇಖರ್ ಅವರ ಕಾಯಕಗಳು ‘ಕಾಡಿನ ಬೆಂಕಿ’, ಸಂಕ್ರಾಂತಿ’, ಪ್ರಥಮ ಉಷಾ ಕಿರಣ’, ‘ಉದ್ಭವ’, ‘ಊರ್ವಶಿ’ ಮುಂತಾದ ಪ್ರಸಿದ್ಧ ಚಿತ್ರಗಳಿಗೆ ಮೆರುಗು ನೀಡಿತ್ತು. ೧೯೯೧ರಲ್ಲಿ ಮೂಡಿಬಂದ ‘ಉಂಡು ಹೋದ ಕೊಂಡು ಹೋದ’ ಚಿತ್ರದಿಂದ ಮೊದಲ್ಗೊಂಡಂತೆ, ‘ಬಾ ನಲ್ಲೆ ಮಧು ಚಂದ್ರಕೆ’, ‘ಕೊಟ್ರೇಶಿ ಕನಸು’, ‘ಅಮೆರಿಕ! ಅಮೇರಿಕಾ!!’, ‘ಹೂಮಳೆ’, ‘ನನ್ನ ಪ್ರೀತಿಯ ಹುಡುಗಿ’, ‘ಸೂಪರ್ ಸ್ಟಾರ್’, ‘ಪ್ಯಾರಿಸ್ ಪ್ರಣಯ’, ‘ಅಮೃತಧಾರೆ’, ‘ಮಾತಾಡ್ ಮಾತಾಡು ಮಲ್ಲಿಗೆ’, ‘ಒಲವೆ ಜೀವನ ಲೆಖ್ಖಾಚಾರ’, ‘ನೂರೂ ಜನ್ಮಕು’ ಮುಂತಾದ ಚಿತ್ರಗಳನ್ನು ಅವರು ನಿರ್ದೇಶಿಸಿದ್ದಾರೆ. ಕಲಾತ್ಮಕ ಚಿತ್ರಗಳ ಚಿಂತನಾತ್ಮಕ ಗುಣ, ಸಾಮಾಜಿಕ ಚಿತ್ರಗಳ ಸ್ಪಂದನೆ, ಆಧುನಿಕ ಬದುಕಿನ ವೈವಿಧ್ಯಮಯ ವೈರುಧ್ಯ ಇವುಗಳ ಜೊತೆಗೆ ಹಿತಮಿತದ ಸಂಗೀತ, ದೃಶ್ಯ ವೈಭವ ಇವುಗಳನ್ನೆಲ್ಲ ನಾಗತಿಹಳ್ಳಿ ತಮ್ಮ ಸೃಜನಶೀಲ ಸ್ಪರ್ಶದಲ್ಲಿ ಬೆಳ್ಳಿತೆರೆಯಲ್ಲಿ ಅಭಿವ್ಯಕ್ತಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿನ ಹಲವಾರು ಪ್ರಶಸ್ತಿ, ಗಲ್ಲಾಪೆಟ್ಟಿಗೆಯ ಯಶಸ್ಸುಗಳು ಮತ್ತು ಸೋಲುಗಳನ್ನು ನಾಗತಿಹಳ್ಳಿ ಸಮಭಾವತ್ವದಲ್ಲಿ ಸ್ವೀಕರಿಸಿ ಮುನ್ನಡೆಯುತ್ತಿದ್ದಾರೆ. ಇಂದು ಕನ್ನಡ ಚಿತ್ರರಂಗದಲ್ಲಿ ಪ್ರಸಿದ್ಧ ಚಿತ್ರಸಂಗೀತ ನಿರ್ದೆಶಕರಾಗಿರುವ ಮನೋಮೂರ್ತಿ ಅವರನ್ನು ಅಮೇರಿಕದ ಸಾಫ್ಟ್ವೇರ್ ಕ್ಷೇತ್ರದಿಂದ ಕನ್ನಡ ಚಿತ್ರ ಸಂಗೀತಕ್ಕೆ ಕರೆತಂದ ಕೀರ್ತಿ ಕೂಡಾ ನಾಗತಿಹಳ್ಳಿ ಚಂದ್ರಶೇಖರ್ ಅವರದ್ದು.
ನಿರ್ದೇಶಿಸಿರುವ ಸಿನಿಮಾಗಳು
va | ಚಿತ್ರ | - | - ವರ್ಷ |
---|---|---|---|
1 | ಉಂಡೂ ಹೋದ ಕೊಂಡೂ ಹೋದ | 1991 | - |
2 | ಬಾ ನಲ್ಲೆ ಮಧುಚಂದ್ರಕೆ | 1993 | - |
3 | ಕೊಟ್ರೇಶಿ ಕನಸು | 1994 | - |
4 | ಅಮೇರಿಕ ಅಮೇರಿಕ | 1996 | - |
5 | ಹೂಮಳೆ | 1998 | - |
6 | ನನ್ನ ಪ್ರೀತಿಯ ಹುಡುಗಿ | 2001 | - |
7 | ಸೂಪರ್ ಸ್ಟಾರ್ | 2002 | - |
8 | ಪ್ಯಾರಿಸ್ ಪ್ರಣಯ | 2003 | - |
9 | ಅಮೃತಧಾರೆ | 2005 | ಸಾಹಿತ್ಯ |
10 | ಮಾತಾಡ್ ಮಾತಾಡು ಮಲ್ಲಿಗೆ | 2007 | - |
11 | ಒಲವೆ ಜೀವನ ಲೆಕ್ಕಾಚಾರ | 2009 | |
12 | ನೂರು ಜನ್ಮಕೂ | 2010 | |
13 | ಇಷ್ಟಕಾಮ್ಯ | 2016 |
ಗೀತರಚನೆ
# | ಚಿತ್ರ | ಚಿತ್ರಗೀತೆ | ವರ್ಷ | ಸಂಗೀತ | ಹಾಡಿದವರು |
---|---|---|---|---|---|
1 | ಚೆಲುವೆಯೇ ನಿನ್ನೆ ನೋಡಲು | ಜನುಮದ ಜೋಡಿ ನನ್ ರಾಜಕುಮಾರ ... | ೨೦೦೯ | ವಿ ಹರಿಕೃಷ್ಣ | ಸೋನು ನಿಗಮ್ , ಸುನಿತಾ ಗೊಪರಾಜು |
2 | ಒಲವೆ ಜೀವನ ಲೆಕ್ಕಾಚಾರ | ನನ್ನ ಪ್ರೀತಿಯ ಗೆಳೆಯ ಕೇಳೊ ಒಲವಿನ ಕತೆಯಾ ಕಣ್ಣ ಮುಚ್ಚಿದರೂನು, ಬಿಚ್ಚಿರಲೇನು ಎಲ್ಲಾ ನೀನು.. | ೨೦೦೯ | - | - |
3 | ಸವಿ ಸವಿ ನೆನಪು | ಸವಿಯೊ ಸವಿಯೊ | ೨೦೦೭ | ಆರ್.ಪಿ.ಪಟ್ನಾಯಕ್ | ಸೋನು ನಿಗ೦, ಶ್ರೇಯ ಘೋಶಲ್ |
4 | ಮನಸೆಲ್ಲ ನೀನೆ | ಫಳ ಫಳ ಹೊಳೆಯುವ. | ೨೦೦೨ | ರವಿ ರಾಜ್ | - |
5 | ಪ್ಯಾರಿಸ್ ಪ್ರಣಯ | ಕೃಷ್ಣ ನೀ ಬೇಗನೆ ಬಾರೋ | ೨೦೦೩ | - | - |
6 | ಅಮೃತಧಾರೆ | ಮನೆ ಕಟ್ಟಿ ನೋಡು | ೨೦೦೫ | ಮನೊ ಮೂರ್ತಿ | ರಾಜು ಅನಂತಸ್ವಾಮಿ, ನಂದಿತ |
7 | ಅಮೃತಧಾರೆ | ಹುಡುಗ ಹುಡುಗ ಓ ನನ್ನ ಮುದ್ದಿನ ಹುಡುಗ | ೨೦೦೫ | ಮನೊ ಮೂರ್ತಿ | - |
ಧಾರಾವಾಹಿಗಳು
ಉದಯ ಟಿವಿಯಲ್ಲಿ
# | ಧಾರಾವಾಹಿ | ವರ್ಷ | - | ಕಿರುತೆರೆ ವಾಹಿನಿ |
---|---|---|---|---|
1 | ಪ್ರತಿಬಿಂಬ | - | - | - |
2 | ಕಾವೇರಿ | - | - | - |
3 | ಭಾಗ್ಯನಮ್ಮ | - | - | - |
4 | ಅಪಾರ್ಟ್ಮೆಂಟ್ | - | - | - |
5 | ಒಲವೇ ನಮ್ಮ ಬದುಕು | - | - | - |
6 | ವಟಾರ | - | - | - |
ಪ್ರಶಸ್ತಿ,ಗೌರವಗಳು
- ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ೨೦೧೫ [1]
- ಪುಟ್ಟಣ್ಣ ಕಣಗಾಲ್ ಪ್ರಶಸ್ತಿ (2015)
- ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ನಿಯುಕ್ತರಾದರು. (೨೦೧೮) [2]
ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು
ಅತ್ಯುತ್ತಮ ಚಿತ್ರ
1994-95: ಕೊಟ್ರೇಶಿ ಕನಸು (ಅತ್ಯುತ್ತಮ ಸಾಮಾಜಿಕ ಚಿತ್ರ)
1996-97: ಅಮೆರಿಕಾ ಅಮೆರಿಕಾ (ಪ್ರಥಮ ಅತ್ಯುತ್ತಮ ಚಿತ್ರ)
1998-99: ಹೂಮಳೆ (ದ್ವಿತೀಯ ಅತ್ಯುತ್ತಮ ಚಿತ್ರ)
2005-06: ಅಮೃತಧಾರೆ (ತೃತೀಯ ಅತ್ಯುತ್ತಮ ಚಿತ್ರ)
2007-08: ಮಾತಾಡ್ ಮಾತಾಡು ಮಲ್ಲಿಗೆ (ತೃತೀಯ ಅತ್ಯುತ್ತಮ ಚಿತ್ರ)
ಅತ್ಯುತ್ತಮ ಕಥಾಲೇಖಕ
1988-89: ಸಂಕ್ರಾಂತಿ
1991-92: ಉಂಡೂ ಹೋದ ಕೊಂಡೂ ಹೋದ
1996-97 : ಅಮೆರಿಕಾ ಅಮೆರಿಕಾ
ಅತ್ಯುತ್ತಮ ಗೀತರಚನೆ
2002-03: ಪ್ಯಾರಿಸ್ ಪ್ರಣಯ ೨೦೧೯ : [3]