ಜಿ.ವಿ.ಅಯ್ಯರ್
ಕನ್ನಡ ಚಿತ್ರರ೦ಗದ ಬೀಷ್ಮ ಎಂಬ ಪ್ರಖ್ಯಾತಿಯ ಜಿ ವಿ ಅಯ್ಯರ್ (ಸೆಪ್ಟೆಂಬರ್ ೩, ೧೯೧೭ - ಡಿಸೆಂಬರ್ ೨೧, ೨೦೦೩) ಸ್ವರ್ಣಕಮಲ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ಚಲನಚಿತ್ರ ನಿರ್ದೇಶಕರು ಮತ್ತು ನಿರ್ಮಾಪಕರು.

ಆರಂಭದ ದಿನಗಳು
ಜಿ.ವಿ.ಅಯ್ಯರ್ ಅವರ ಪೂರ್ಣ ಹೆಸರು ಗಣಪತಿ ವೆಂಕಟರಮಣ ಅಯ್ಯರ್. ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಹುಟ್ಟಿದ ಜಿ.ವಿ.ಅಯ್ಯರ್ ತಮ್ಮ ವೃತ್ತಿಜೀವನದ ಆರಂಭದಲ್ಲಿ ಮೈಸೂರಿನ "ಸದಾರಮೆ" ನಾಟಕ ಕಂಪನಿಯಲ್ಲಿ, ಹಾಗೂ ಗುಬ್ಬಿ ನಾಟಕ ಕಂಪನಿಯಲ್ಲಿ ಪರಿಚಾರಕರಾಗಿ, ಪೋಸ್ಟರ್ ಬರೆಯುವವರಾಗಿ ಕೆಲಸ ಮಾಡಿದರು. ನಂತರ ಅವಕಾಶಗಳನ್ನರಸಿ ಪುಣೆಗೆ ಹೋದ ಅಯ್ಯರ್, ಹೋಟೆಲ್ ಮಾಣಿಯಾಗಿದ್ದುಕೊಂಡೇ ಚಿತ್ರರಂಗದಲ್ಲಿನ ಅವಕಾಶಗಳಿಗೆ ಪ್ರಯತ್ನಿಸಿದರು. ಅದು ಫಲಕಾರಿಯಾಗದೇ, ಕರ್ನಾಟಕಕ್ಕೆ ಹಿಂದಿರುಗಿದರು.
ಚಿತ್ರರಂಗ
೧೯೪೩ರಲ್ಲಿ ರಾಧಾರಮಣ ಚಿತ್ರದ ಕೇಶಿದೈತ್ಯನ ಪಾತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
೧೯೫೪ರಲ್ಲಿ ಬಿಡುಗಡೆಯಾದ ಬೇಡರ ಕಣ್ಣಪ್ಪ ಚಿತ್ರದ ಕೈಲಾಸನ ಪಾತ್ರದಲ್ಲಿನ ಅಭಿನಯ ಅಯ್ಯರ್ ಅವರಿಗೆ ಜನಪ್ರಿಯತೆಯನ್ನು ಒದಗಿಸಿತು. ಚಲನಚಿತ್ರಗಳಲ್ಲಿ ನಟಿಸುತ್ತಿದ್ದರೂ, ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು.
೧೯೫೫ರಲ್ಲಿ ತೆರೆಕಂಡ ಸೋದರಿ ಚಿತ್ರದಲ್ಲಿನ ಹಾಡುಗಳು ಮತ್ತು ಸಂಭಾಷಣೆ ಬರೆಯುವುದರೊಂದಿಗೆ ಚಲನಚಿತ್ರ ಸಾಹಿತಿಯಾಗಿ ಕೆಲಸ ನಿರ್ವಹಿಸಲು ಪ್ರಾರಂಭಿಸಿದರು.
ಭೂದಾನ (೧೯೬೨) ಚಿತ್ರವನ್ನು ನಿರ್ದೇಶಿಸುವ ಮೂಲಕ ನಿರ್ದೇಶಕರಾದರು.
ಕನ್ನಡದ ಕಲಾವಿದರು ಸಂಕಷ್ಟದ ಸ್ಥಿತಿಯಲ್ಲಿರುವಾಗ, ರಾಜಕುಮಾರ್, ಬಾಲಕೃಷ್ಣ, ನರಸಿಂಹರಾಜು ಇವರನೊಡಗೂಡಿ ಕನ್ನಡ ಕಲಾವಿದರ ಸಂಘವನ್ನು ಸ್ಥಾಪಿಸಿ, ರಾಜ್ಯಾದ್ಯಂತ ಪ್ರವಾಸ ಮಾಡಿ ಕನ್ನಡ ಚಿತ್ರೋದ್ಯಮ ನೆಲೆ ನಿಲ್ಲಲು, ಕಲಾವಿದರು ಬದುಕಲು ಮಾರ್ಗಗಳನ್ನು ಹುಡುಕಿದರು. ಈ ಸಂಘದ ಗೆಳೆಯರೊಡನೆ ರಣಧೀರ ಕಂಠೀರವ ಚಲನಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದರು.
ಜಿ.ವಿ.ಅಯ್ಯರ್ ಪ್ರಸಿದ್ಧಿ ಪಡೆದಿರುವುದು ಚಿತ್ರ ನಿರ್ದೇಶಕರಾಗಿ. ಒಟ್ಟು ಸುಮಾರು ೬೫ ಚಿತ್ರಗಳಲ್ಲಿ ನಿರ್ದೇಶಕರಾಗಿ ಅಥವಾ ನಿರ್ಮಾಪಕರಾಗಿ ಕೆಲಸ ನಿರ್ವಹಿಸಿದ್ದಾರೆ. ಮೊದಲಿಗೆ ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ ಜಿ.ವಿ.ಅಯ್ಯರ್ ೧೯೭೫ ರಿಂದ ಮುಂದಕ್ಕೆ ಬಾಕ್ಸ್ ಆಫೀಸನ್ನು ಲೆಕ್ಕಿಸದೆ ಕಲಾತ್ಮಕ ಚಿತ್ರಗಳತ್ತ ತಿರುಗಿದರು. ಸಂಸ್ಕೃತ ಭಾಷೆಯಲ್ಲಿ ಅನೇಕ ಪ್ರಸಿದ್ಧ ಚಿತ್ರಗಳನ್ನು ನಿರ್ದೇಶಿಸಿದ್ದಲ್ಲದೆ ಹಿಂದಿ ಭಾಷೆಯಲ್ಲಿಯೂ ನಿರ್ದೇಶನ ಮಾಡಿದರು.
೧೯೫೪ ರಲ್ಲಿ "ಬೇಡರ ಕಣ್ಣಪ್ಪ" ನಾಟಕವನ್ನೂ ನಿರ್ದೇಶಿಸಿದ್ದರು.ಇವರು ನಿರ್ದೇಶಿಸಿದ ಪ್ರಥಮ ಸಂಸ್ಕೃತ ಚಿತ್ರ "ಆದಿ ಶಂಕರಾಚಾರ್ಯ"ಭಾರತದ ಅತ್ಯುತ್ತಮ ಚಿತ್ರವೆನಿಸಿ "ಸ್ವರ್ಣ ಕಮಲ "ಪ್ರಶಸ್ತಿ ಗಳಿಸಿದೆ.ನಮನ
ನಿರ್ದೇಶಿಸಿದ ಚಲನಚಿತ್ರಗಳು
ಕನ್ನಡ
- ಭೂದಾನ (೧೯೬೨)
- ತಾಯಿಕರುಳು (೧೯೬೨)
- ಲಾಯರ್ ಮಗಳು (೧೯೬೩)
- ಬಂಗಾರಿ (೧೯೬೩)
- ಪೋಸ್ಟ್ ಮಾಸ್ಟರ್ (೧೯೬೪)
- ಕಿಲಾಡಿ ರಂಗ (೧೯೬೬)
- ರಾಜಶೇಖರ (೧೯೬೭)
- ಮೈಸೂರು ಟಾಂಗ (೧೯೬೮)
- ಚೌಕದ ದೀಪ (೧೯೬೯)
- ಹಂಸಗೀತೆ (೧೯೭೫)
- ನಾಳೆಗಳನ್ನು ಮಾಡುವವರು (೧೯೭೯)
- ಮಧ್ವಾಚಾರ್ಯ (೧೯೮೬)
- ಚಿತ್ರಕಥೆ: ರಣಧೀರ ಕಂಠೀರವ (೧೯೬೦)
ಸಂಸ್ಕೃತ
- ಭಗವದ್ಗೀತಾ (೧೯೯೩)
- ಆದಿ ಶಂಕರಾಚಾರ್ಯ (೧೯೮೩)
ತಮಿಳು
- ರಾಮಾನುಜಾಚಾರ್ಯ (೧೯೮೯)
ಹಿಂದಿ
- ಆಖ್ರೀ ಗೀತ್ (೧೯೭೫)
- ಸ್ವಾಮಿ ವಿವೇಕಾನಂದ
ಜಿ.ವಿ.ಅಯ್ಯರ್ ನಿರ್ಮಾಣದ ಕನ್ನಡ ಚಲನಚಿತ್ರಗಳು
- ರಣಧೀರ ಕಂಠೀರವ (೧೯೬೦)
- ತಾಯಿಕರುಳು (೧೯೬೨)
- ಲಾಯರ್ ಮಗಳು (೧೯೬೩)
- ವಂಶವೃಕ್ಷ (೧೯೭೨)
- ಹಂಸಗೀತೆ (೧೯೭೫)
- ನಾಳೆಗಳನ್ನು ಮಾಡುವವರು (೧೯೭೯)
ಜಿ.ವಿ.ಅಯ್ಯರ್ ಸಾಹಿತ್ಯದಲ್ಲಿನ ಪ್ರಮುಖ ಚಿತ್ರಗೀತೆಗಳು
- ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನಿ
- ಕನ್ನಡದ ಕುಲದೇವಿ ಕಾಪಾಡು ಬಾ ತಾಯೆ
- ಬಾ ತಾಯೆ ಭಾರತಿಯೇ
ನಿಧನ
೧೯೭೫ರಲ್ಲಿ "ಆಚಾರ್ಯ "ಬಿರುದನ್ನು ಪಡೆದ ಅಯ್ಯರ್ ತಮ್ಮ ಬದುಕಿನ ಶೈಲಿಯನ್ನು ಬದಲಾಯಿಸಿಕೊಂಡರು.ಅದರಲ್ಲಿ ಚಪ್ಪಲಿ ತೊಡುವುದನ್ನು ತ್ಯಜಿಸಿ ಮುಂದೆ ಬರಿಗಾಲಲ್ಲೇ ನಡೆದಾಡಿದರು.
ಜಿ.ವಿ.ಅಯ್ಯರ್ ಬಾಣಭಟ್ಟನ ಸಂಸ್ಕೃತ ಕೃತಿಯಾದ "ಕಾದಂಬರಿ"ಯನ್ನು ಚಿತ್ರೀಕರಿಸುವ, ಹಾಗೂ ರಾಮಾಯಣ ಮಹಾಕಾವ್ಯವನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಚಿತ್ರಿಸುವ ಯೋಚನೆಯಲ್ಲಿದ್ದರು. ಈ ಕುರಿತ ಚರ್ಚೆಗಾಗಿ ಮುಂಬೈಗೆ ತೆರೆಳಿದ್ದಾಗಲೇ ೨೦೦೩ ಡಿಸೆಂಬರ್ ೨೧ರಂದು ಮೂತ್ರ ಪಿಂಡದ ಸೋಂಕಿನಿಂದ ತಮ್ಮ ೮೬ನೇ ವಯಸ್ಸಿನಲ್ಲಿ ನಿಧನರಾದರು.