ನಾಗಾಭರಣ
ಟಿ. ಎಸ್. ನಾಗಾಭರಣ ಕನ್ನಡ ಚಿತ್ರರಂಗದ ಪ್ರಮುಖ ಚಿತ್ರ ನಿರ್ದೇಶಕರಲ್ಲೊಬ್ಬರು. ಇವರು ತಮ್ಮ ೨೬ ವರ್ಷಗಳ ವೃತ್ತಿಜೀವನದಲ್ಲಿ ನಿರ್ದೇಶಿಸಿದ ೩೦ ಕನ್ನಡ ಚಿತ್ರಗಳಲ್ಲಿ ೨೦ ಚಿತ್ರಗಳಿಗೆ ಅಂತಾರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಮಟ್ಟದಲ್ಲಿ ಹಾಗು ಇತರ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ನಾಗಾಭರಣ ಬೆಂಗಳೂರಿನಲ್ಲಿರುವ ಕರ್ನಾಟಕ ಚಲನಚಿತ್ರ ಅಕಾದೆಮಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.(ರಾಜ್ಯ ಚಲನಚಿತ್ರ ಮಂಡಳಿ).[1]
ಟಿ.ಎಸ್.ನಾಗಾಭರಣ | |
---|---|
![]() | |
ಜನನ | ೧೯೫೦-೦೧-೨೩ |
ರಾಷ್ಟ್ರೀಯತೆ | ಭಾರತೀಯ |
ವೃತ್ತಿ | ಚಿತ್ರನಿರ್ದೇಶಕ, ನಟ |
Known for | ನಾಗಮಂಡಲ, ಜನುಮದ ಜೋಡಿ |
ವೈಯಕ್ತಿಕ ಜೀವನ
೧೯೫೩ರ ಜನವರಿ ೨೩ರಂದು ಜನಿಸಿದ ತಲಕಾಡು ಶ್ರೀನಿವಾಸಯ್ಯ ನಾಗಾಭರಣ ಇಂಗ್ಲೀಷ್ ಮತ್ತು ಕನ್ನಡ ಸಾಹಿತ್ಯದಲ್ಲಿ ಅಪಾರ ಆಸಕ್ತಿಯುಳ್ಳವರಾಗಿದ್ದು ವಿಜ್ಞಾನ ಮತ್ತು ಕಾನೂನು ವಿಷಯದಲ್ಲಿ ಪದವೀಧರರೂ ಆಗಿದ್ದಾರೆ.
ನಾಗಿಣಿ, ನಾಗಾಭರಣ ಅವರ ಪತ್ನಿ.
ವೃತ್ತಿಜೀವನ
ನಾಗಾಭರಣರಿಗೆ ತಮ್ಮ ಕಾಲೇಜು ದಿನಗಳಿಂದಲೇ ಚಿತ್ರ ನಿರ್ದೇಶನದ ಬಗ್ಗೆ ಆಸಕ್ತಿ ಮೂಡಿತ್ತು. ರಂಗ ಭೂಮಿಗೆ ಪ್ರವೇಶಿಸಿ ಅವರು ಹಲವು ನಾಟಕಗಳನ್ನು ನಿರ್ದೇಶಿಸಿ ಅಭಿನಯಿಸಿದ್ದಾರೆ. ಇವರಿಗೆ ಭಾರತ ಸರ್ಕಾರ ರಂಗಭೂಮಿಯ ಸಾಧನೆಗಾಗಿ ನೀಡುವ ಚಿನ್ನದ ಪದಕ ನೀಡಿ ಗೌರವಿಸಿದೆ. ಬಿ ವಿ ಕಾರಂತರು ಸ್ಥಾಪಿಸಿದ ಬೆನಕ ರಂಗಸಂಸ್ಥೆಯನ್ನು ಬಿ.ವಿ. ಕಾರಂತರ ನಂತರ ಅವರಷ್ಟೇ ಸಮರ್ಥವಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ. ಆ ಮೂಲಕ ರಂಗಭೂಮಿಯ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆಯನ್ನು ಸಲ್ಲಿಸುತ್ತಿದ್ದಾರೆ.
ನಾಗಾಭರಣ ತಮ್ಮ ಸಂಗ್ಯಾ-ಬಾಳ್ಯಾ, ಕತ್ತಲೆ-ಬೆಳಕು, ಶಕಾರನ ಸಾರೋಟು ಮುಂತಾದ ನಾಟಕಗಳಿಗಾಗಿಯೂ ಪ್ರಸಿದ್ಧರಾದವರು. [2]

೧೯೮೦ರಲ್ಲಿ ಬಂಗಾರದ ಜಿಂಕೆ ನಿರ್ದೇಶಿಸುವ ಮೂಲಕ ಪೂರ್ಣಪ್ರಮಾಣದ ನಿರ್ದೇಶನ ಪ್ರಾರಂಭಿಸಿದ ನಾಗಾಭರಣ, ಇದುವರೆಗೆ ಸುಮಾರು ೩೦ ಕನ್ನಡ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕಿರುತೆರೆ ವಾಹಿನಿಗಳ ಹಲವು ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ. ಇವುಗಳಲ್ಲಿ ಪ್ರಮುಖ ಧಾರಾವಾಹಿಗಳೆಂದರೆ ಬೆಂಗಳೂರು ದೂರದರ್ಶನದ ನಮ್ಮ ನಮ್ಮಲ್ಲಿ, ಶ್ರೀಮಾನ್ ಶ್ರೀ ಸಾಮಾನ್ಯ, ತಿರುಗುಬಾಣ; ದೂರದರ್ಶನ ರಾಷ್ಟ್ರೀಯ ವಾಹಿನಿ ಡಿ.ಡಿ.೧ರಲ್ಲಿ ತೆನಾಲಿ ರಾಮ ಹಾಗು ಉದಯ ಟಿವಿಯ ಸಂಕ್ರಾಂತಿ, ಮಹಾಮಾಯಿ, ಅಪ್ಪ.
ಇವರ ನಿರ್ದೇಶನದ ಚಲನಚಿತ್ರಗಳಲ್ಲಿ ಆಕಸ್ಮಿಕ, ಚಿನ್ನಾರಿಮುತ್ತ, ಜನುಮದ ಜೋಡಿ ಮತ್ತು ಚಿಗುರಿದ ಕನಸು ಮುಖ್ಯವಾದುವು.
ನಾಗಾಭರಣ ನಿರ್ದೇಶನದ ಕನ್ನಡ ಚಲನಚಿತ್ರಗಳು
# | ವರ್ಷ | ಚಿತ್ರ |
---|---|---|
೧ | ೧೯೮೦ | ಬಂಗಾರದ ಜಿಂಕೆ |
೨ | ೧೯೮೧ | ಗ್ರಹಣ |
೩ | ೧೯೮೨ | ಪ್ರಾಯ ಪ್ರಾಯ ಪ್ರಾಯ |
೪ | ೧೯೮೩ | ಅನ್ವೇಷಣೆ |
೫ | ೧೯೮೩ | ಬ್ಯಾಂಕರ್ ಮಾರ್ಗಯ್ಯ |
೬ | ೧೯೮೩ | ಪ್ರೇಮಯುದ್ಧ |
೭ | ೧೯೮೪ | ಒಂಟಿಧ್ವನಿ |
೮ | ೧೯೮೪ | ಮಕ್ಕಳಿರಲವ್ವ ಮನೆತುಂಬ |
೯ | ೧೯೮೫ | ಆಹುತಿ |
೧೦ | ೧೯೮೬ | ನೆನಪಿನ ದೋಣಿ |
೧೧ | ೧೯೮೬ | ಸೇಡಿನ ಸಂಚು |
೧೨ | ೧೯೮೭ | ರಾವಣ ರಾಜ್ಯ |
೧೩ | ೧೯೮೮ | ಆಸ್ಪೋಟ |
೧೪ | ೧೯೮೯ | ಸುರ ಸುಂದರಾಂಗ |
೧೫ | ೧೯೮೯ | ಪ್ರೇಮಾಗ್ನಿ |
೧೬ | ೧೯೯೦ | ಸಂತ ಶಿಶುನಾಳ ಶರೀಫ |
೧೭ | ೧೯೯೨ | ಮೈಸೂರು ಮಲ್ಲಿಗೆ |
೧೮ | ೧೯೯೩ | ಆಕಸ್ಮಿಕ |
೧೯ | ೧೯೯೩ | ಚಿನ್ನಾರಿಮುತ್ತ |
೨೦ | ೧೯೯೪ | ಸಾಗರ ದೀಪ |
೨೧ | ೧೯೯೬ | ಜನುಮದ ಜೋಡಿ |
೨೨ | ೧೯೯೭ | ನಾಗಮಂಡಲ |
೨೩ | ೧೯೯೭ | ವಿಮೋಚನೆ |
೨೪ | ೧೯೯೯ | ಜನುಮದಾತ |
೨೫ | ೨೦೦೧ | ನೀಲ |
೨೬ | ೨೦೦೩ | ಸಿಂಗಾರವ್ವ |
೨೭ | ೨೦೦೩ | ಚಿಗುರಿದ ಕನಸು |
೨೮ | ೨೦೦೬ | ಕಲ್ಲರಳಿ ಹೂವಾಗಿ |
ಪ್ರಶಸ್ತಿಗಳು
ಅವರು ಇಲ್ಲಿಯವರೆಗೆ ನಿರ್ದೇಶಿಸಿದ ೩೦ ಚಲನಚಿತ್ರಗಳಲ್ಲಿ, ೧೪ ಚಿತ್ರಗಳು ರಾಜ್ಯ ಹಾಗು ರಾಷ್ಟ್ರ ಮಟ್ಟದಲ್ಲಿ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗಳಿಸಿದೆ. ಅವರ ನಿರ್ದೇಶನದ ಆರು ಚಿತ್ರಗಳು ಭಾರತೀಯ ಪನೋರಮಾಕ್ಕೆ ಆಯ್ಕೆಯಾಗಿದೆ. ಅವರು ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಪ್ರಾದೇಶಿಕ ನಿರ್ದೇಶಕ ಪ್ರಶಸ್ತಿಯನ್ನು ಏಳು ಬಾರಿ ಗಳಿಸಿದ್ದಾರೆ.
- ಗ್ರಹಣ (೧೯೭೮–೭೯) ರಾಷ್ಟ್ರೀಯ ಸಮನ್ವಯತೆಯನ್ನು ಸಾರುವ ಅತ್ಯುತ್ತಮ ಚಿತ್ರ, ಅತ್ಯುತ್ತಮ ಚಿತ್ರಕಥೆ, ಅತ್ಯುತ್ತಮ ಚಿತ್ರ ಚಿನ್ನದ ಪದಕ
- ಅನ್ವೇಷಣೆ (೧೯೮೨–೮೩) ಕರ್ನಾಟಕ ಸರ್ಕಾರದ ವತಿಯಿಂದ ಮೂರನೇ ಅತ್ಯುತ್ತಮ ಚಿತ್ರ ಪ್ರಶಸ್ತಿ
- ಆಸ್ಫೋಟ (೧೯೮೭–೮೮) ರಾಜ್ಯ ಸರ್ಕಾರದ ವತಿಯಿಂದ ಅತ್ಯುತ್ತಮ ಚಲನಚಿತ್ರವೆಂದು ಚಿನ್ನದ ಪದಕ
- ಬ್ಯಾಂಕರ್ ಮಾರ್ಗಯ್ಯ (೧೯೮೩–೮೪) ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ
- ಸಂತ ಶಿಶುನಾಳ ಶರೀಫಾ (೧೯೮೯–೯೦) ಭಾರತ ಸರ್ಕಾರದ ವತಿಯಿಂದ ನರ್ಗಿಸ್ ದತ್ತ್ ರಾಷ್ಟ್ರೀಯ ಏಕತಾ ಪ್ರಶಸ್ತಿ[3]
- ಕಲ್ಲರಳಿ ಹೂವಾಗಿ (೨೦೦೬) ರಾಷ್ಟ್ರೀಯ ಐಕ್ಯತೆಯನ್ನು ಸಾರುವ ಅತ್ಯುತ್ತಮ ಚಲನಚಿತ್ರ
- ೧೯೭೯ರಲ್ಲಿ ಗ್ರಹಣ ಚಿತ್ರಕ್ಕಾಗಿ ಅತ್ಯುತ್ತಮ ಚಿತ್ರಕಥೆ ರಾಷ್ಟ್ರೀಯ ಪ್ರಶಸ್ತಿ[4]
- ಕಾಡು ಚಿತ್ರದ ವಸ್ತ್ರಾಲಂಕಾರಕ್ಕಾಗಿ ಅತ್ಯುತ್ತಮ ವಸ್ತ್ರವಿನ್ಯಾಸಕಾರ ರಾಷ್ಟ್ರೀಯ ಪ್ರಶಸ್ತಿ