ಬಿ.ಕೆ.ಗುಡದಿನ್ನಿ

ಬಿ.ಕೆ. ಗುಡದಿನ್ನಿ (ಬಸಗೊಂಡಪ್ಪ ಕಾಡಪ್ಪ ಗುಡದಿನ್ನಿ)ಯವರು ವಿಜಯಪುರ ಜಿಲ್ಲೆಯ ಮಾಜಿ ಶಾಸಕ, ಸಂಸದ ಹಾಗೂ ಹಿರಿಯ ರಾಜಕಾರಣಿ.

ಬಿ.ಕೆ.ಗುಡದಿನ್ನಿ
ವೈಯಕ್ತಿಕ ಮಾಹಿತಿ
ಜನನ 8ನೇ ಏಪ್ರಿಲ್ 1930
ಸಾರವಾಡ, ವಿಜಯಪುರ ತಾಲ್ಲೂಕು, ವಿಜಯಪುರ ಜಿಲ್ಲೆ, ಕರ್ನಾಟಕ
ರಾಷ್ಟ್ರೀಯತೆ ಭಾರತೀಯ
ಮಕ್ಕಳು 2
ವೃತ್ತಿ ರಾಜಕೀಯ

ಪರಿಚಯ

ಗುಡದಿನ್ನಿಯವರು 8ನೇ ಏಪ್ರಿಲ್ 1930 ರಂದು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಸಾರವಾಡ ಗ್ರಾಮದಲ್ಲಿ ಜನಿಸಿದರು.

ಶಿಕ್ಷಕ ವೃತ್ತಿ

ಬಿ.ಕೆ. ಗುಡದಿನ್ನಿಯವರು 3 ಬಾರಿ ಬಿಜಾಪುರ (ಲೋಕ ಸಭೆ ಚುನಾವಣಾ ಕ್ಷೇತ್ರ)ದಿಂದ ಸಂಸತ್‌ ಸದಸ್ಯರಾಗಿದ್ದರು.

ರಾಜಕೀಯ

1967ರಲ್ಲಿ ಸ್ವತಂತ್ರ ಪಕ್ಷದಿಂದ 4ನೇ ಲೋಕಸಭೆಗೆ ಜೆ.ಡಿ. ಪಾಟೀಲ ಆಯ್ಕೆಯಾಗಿದ್ದರು. ಆದರೆ ಜೆ.ಡಿ. ಪಾಟೀಲರ ಅಕಾಲಿಕ ಮರಣದಿಂದ ಅದೇ ವರ್ಷ ನಡೆದ ಉಪಚುನಾವಣೆಗೆ ಬಿ.ಕೆ. ಗುಡದಿನ್ನಿ ಅವರು ಕಾಂಗ್ರೆಸ್‌ನಿಂದ ಲೋಕಸಭೆ ಚುನಾವಣೆಯಲ್ಲಿ 1,07,997 ಮತ ಪಡೆಯುವ ಮೂಲಕ ಗೆಲುವಿನ ನಗೆ ಬೀರಿ ಮೊದಲ ಬಾರಿಗೆ ಸಂಸತ್‌ ಪ್ರವೇಶಿಸಿದರು.

ಬಳಿಕ 1971ರಲ್ಲಿ 5ನೇ ಲೋಕಸಭೆಗೆ ನಡೆದ ಚುನಾವಣೆಗೂ ಬಿ.ಕೆ. ಗುಡದಿನ್ನಿ ಸ್ಪರ್ಧಿಸಿ ಪರಾಭವಗೊಂಡರು.

ಸುದೀರ್ಘ 12 ವರ್ಷಗಳ ಬಳಿಕ 1989ರಲ್ಲಿ 9ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ 3,06,050 ಮತಗಳನ್ನು ಗಳಿಸುವ ಮೂಲಕ 2ನೇ ಅವಧಿಗೆ ಲೋಕಸಭೆ ಸದಸ್ಯರಾಗಿ ಆಯ್ಕೆಯಾದರು.

ನಂತರ 1991ರಲ್ಲಿ 10ನೇ ಲೋಕಸಭೆಗೆ ನಡೆದ ಚುನಾವಣೆಗೆ ಪುನಃ ಕಾಂಗ್ರೆಸ್‌ನಿಂದ ಸ್ಪರ್ಧಿಸಿ 2,07,887 ಮತಗಳನ್ನು ಪಡೆಯುವ ಮೂಲಕ 3ನೇ ಅವಧಿಗೂ ಸಂಸತ್‌ ಪ್ರವೇಶಿಸಿದ್ದರು.

ರಾಜ್ಯ ರಾಜಕಾರಣ

ಬಳಿಕ ಅವರು ರಾಜ್ಯ ರಾಜಕಾರಣದಲ್ಲಿ ಗುರುತಿಸಿಕೊಂಡರು. 1974ರಿಂದ 1980 ಹಾಗೂ 1980-1986ರವರೆಗೆ 12 ವರ್ಷಗಳ(ಎರಡು ಅವಧಿ) ಕರ್ನಾಟಕ ವಿಧಾನ ಪರಿಷತ್‌ ಸದಸ್ಯರಾಗಿದ್ದರು.

1977ರ ತುರ್ತು ಪರಿಸ್ಥಿತಿಯಲ್ಲಿ 9 ತಿಂಗಳ ಬೆಳಗಾವಿಯ ಹಿಂಡಲಗಾದಲ್ಲಿ ಜೈಲು ವಾಸ ಅನುಭವಿಸಿದ್ದರು. 1989-91ರಲ್ಲಿ ವಿರೇಂದ್ರ ಪಾಟೀಲ ಕಾಂಗ್ರೆಸ್‌ ರಾಜ್ಯಾಧ್ಯಕ್ಷರಾಗಿದ್ದರೆ, ಬಿ.ಕೆ. ಗುಡದಿನ್ನಿಯವರು ಕಾಂಗ್ರೆಸ್‌ ಜಿಲ್ಲಾಧ್ಯಕ್ಷರಾಗಿದ್ದರು. ಆ ಸಂದರ್ಭದಲ್ಲಿ ವಿಧಾನಸಭೆಗೆ ನಡೆದ ಚುನಾವಣೆಗೆ 8ಕ್ಕೆ 8 ಮತಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸುವಂತೆ ನೋಡಿಕೊಂಡಿದ್ದರು.

ಕಲಾವಿದ ಮತ್ತು ಪತ್ರಕರ್ತ

3 ಬಾರಿ ಸಂಸದ, 2 ಬಾರಿ ಎಂಎಲ್ಸಿಯಾಗಿದ್ದ ಬಿ.ಕೆ. ಗುಡಿದಿನ್ನಿ ಅವರದ್ದು ಬಹುಮುಖ ವ್ಯಕ್ತಿತ್ವ. ನಾಟಕ ಅಭಿಯನವೆಂದರೆ ಇವರಿಗೆ ಪಂಚಪ್ರಾಣವಾಗಿತ್ತು. ನೀಡಿದ ಪಾತ್ರವನ್ನು ಮನೋಜ್ಞವಾಗಿ ಅಭಿನಯಿಸುತ್ತಿದ್ದರಂತೆ. ಪ್ರಾಥಮಿಕ ಶಾಲೆಯಲ್ಲಿದ್ದಾಗಲೇ ಅಕ್ಷಯಾಂಬರ ನಾಟಕದಲ್ಲಿ ವಿಕರ್ಣನಾಗಿ ಅಭಿನಯಿಸಿದ್ದನ್ನು ಗ್ರಾಮದ ಹಿರಿಯರು ಇಂದಿಗೂ ಸ್ಮರಿಸುತ್ತಾರೆ.ಜತೆಗೆ ಸಹಕಾರ ಕ್ಷೇತ್ರದಲ್ಲೂ ಛಾಪು ಮೂಡಿಸಿದ್ದ ಇವರು, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಹಾಗೂ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ.

ಸಾಮಾಜಿಕ ಕೇಂದ್ರೀಕೃತವಾಗಿ ಕೆಲಸ ಮಾಡುತ್ತಿದ್ದ ಬಿ.ಕೆ. ಗುಡದಿನ್ನಿಯವರ ವಿರುದ್ಧ ಪೀತ-ಪತ್ರಿಕೆಗಳು ತೇಜೋವಧೆಗೆ ಮುಂದಾದವು. ಜನತೆಯಲ್ಲಿ ತಮ್ಮ ಬಗ್ಗೆ ಮೂಡಿದ ತಪ್ಪು ಸಂದೇಶಗಳನ್ನು ಮೂಲೋತ್ಪಾಟನೆ ಮಾಡುವ ಪ್ರಯತ್ನವಾಗಿ ಕರ್ನಾಟಕ ಸಂದೇಶ ವಾರ ಪತ್ರಿಕೆ ಆರಂಭಿಸುವ ಮೂಲಕ ಪೀತ ಪತ್ರಿಕೆಗಳ ಬಣ್ಣ ಬಯಲುಗೊಳಿಸಿದರು. ಅಂದಿನಿಂದ ನಿಷ್ಠುರ ಪತ್ರಕರ್ತರಾಗಿಯೂ ಹೊರಹೊಮ್ಮಿದ ಗುಡದಿನ್ನಿ ಅವರು, ಜಿಲ್ಲೆಯ ಅಜಾತ ಶತ್ರು ಹಾಗೂ ನಾಯಕರತ್ನವಾಗಿ ಹೊರಹೊಮ್ಮಿದ್ದರು.[1]

ನಿರ್ವಹಿಸಿದ ಖಾತೆಗಳು

  • 1967ರಲ್ಲಿ 4ನೇ ಲೋಕಸಭೆಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ವಿಜಯಪುರ ಲೋಕಸಭಾ ಕ್ಷೇತ್ರದ ಸಂಸದರಾಗಿ ಮೊದಲ ಬಾರಿ ಸಂಸತ್ ಪ್ರವೇಶಿಸಿದರು. [2]
  • 1974-1980 ಹಾಗೂ 1980-1986ರವರೆಗೆ 12 ವರ್ಷಗಳ ಕರ್ನಾಟಕ ವಿಧಾನ ಪರಿಷತ್‌ ಸದಸ್ಯರಾಗಿದ್ದರು. [3]
  • 1971ರಲ್ಲಿ 5ನೇ ಲೋಕಸಭೆಗೆ ನಡೆದ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡರು.
  • 1989ರಲ್ಲಿ 9ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಲೋಕಸಭೆಗೆ ಸದಸ್ಯರಾಗಿ ಆಯ್ಕೆಯಾದರು.
  • 1991ರಲ್ಲಿ 10ನೇ ಲೋಕಸಭೆಗೆ ನಡೆದ ಚುನಾವಣೆಗೆ ಪುನಃ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸಂಸತ್ ಪ್ರವೇಶಿಸಿದ್ದರು.
  • ಕರ್ನಾಟಕ ವಿಧಾನ ಪರಿಷತನಲ್ಲಿ ಶಾಸಕಾಂಗದ ಸೌಲಭ್ಯಗಳ ಸಮಿತಿಯ ಅಧ್ಯಕ್ಷರಾಗಿದ್ದರು.
  • ವಿಜಯಪುರ ಜಿಲ್ಲಾ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷರಾಗಿದ್ದರು.
  • ವಿಜಯಪುರ ಬಿ.ಎಲ್.ಡಿ.ಈ.ಸಂಸ್ಥೆಯ ಉಪಾಧ್ಯಕ್ಷರಾಗಿದ್ದರು.[4]

ನಿಧನ

ಬಿ.ಕೆ.ಗುಡದಿನ್ನಿಯವರು 4ನೇ ಡಿಸೆಂಬರ್ 1995ರಲ್ಲಿ ನಿಧನರಾದರು. [5]

ಉಲ್ಲೇಖಗಳು

ಇದನ್ನೂ ನೋಡಿ

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.