ಮದನ ಮೋಹನ ಮಾಳವೀಯ
ಮದನ ಮೋಹನ ಮಾಳವೀಯ | |
---|---|
![]() | |
ಜನನ | ಜನನ :1861 ಡಿಸೆಂಬರ್ 25 ಅಲಹಾಬಾದ್, ಭಾರತ |
ವಾಸಿಸುವ ಸ್ಥಳ | ಅಲಹಾಬಾದ್, ಭಾರತ |
ವೃತ್ತಿ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಲ್ಲಿ 4 ಬಾರಿ ಅಧ್ಯಕ್ಷರಾಗಿದ್ದರು |
ಜನನ/ಬದುಕು
ಅಲಹಾಬಾದ್ ನ 'ಪ್ರಯಾಗ್' ನಲ್ಲಿ ಡಿಸೆಂಬರ್ ೨೫ ೧೮೬೧ರಂದು ಜನಿಸಿದರು. ಓದು : ಅಲಹಾಬಾದ್ ವಿಶ್ವವಿದ್ಯಾಲಯ ಮತ್ತು ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ, ಉದ್ಯೋಗ: ಶಿಕ್ಷಣ, ಪತ್ರಕರ್ತ ಮತ್ತು ಸ್ವಾತಂತ್ರ್ಯಚಳುವಳಿ ಕಾರ್ಯಕರ್ತ, ಉಪಕುಲಪತಿಗಳು:1919-1938 ರಿಂದ- ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ.
ಪೀಠಿಕೆ
ಮದನ ಮೋಹನ ಮಾಳವೀಯ(೧೮೬೧-೧೯೪೬) ಭಾರತ ಸ್ವಾತಂತ್ರ ಚಳುವಳಿಯಲ್ಲಿ ರಾಷ್ಟ್ರೀಯ ನಾಯಕರಾಗಿದ್ದರು. ಇವರು ಬನಾರಸ್ ಹಿಂದೂ ವಿಶ್ವವಿದ್ಯಾಲಯವನ್ನು ಸಂಸ್ಥಾಪಿಸಿದರು. ಅದರ ಉಪಕುಲಪತಿಗಳಾಗಿದ್ದರು. ಮಾಲವೀಯ ಭಾರತದಲ್ಲಿ 'ಸ್ಕೌಟಿಂಗ್ ಸ್ಥಾಪಕ'ರಲ್ಲಿ ಒಬ್ಬರು. ಇವರನ್ನು ಭಾರತದ ಜನತೆ ಮಹಾತ್ಮ ಎಂದು ಕರೆದರು.
ಭಾರತರತ್ನ ಗೌರವ ಪ್ರದಾನ
ದಿ.25-12-2014 ರಂದು ಹಿಂದೂ ರಾಷ್ಟ್ರೀಯತೆಯ ಪ್ರತಿಪಾದಕರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಮದನ ಮೋಹನ ಮಾಳವೀಯರು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಶಿಕ್ಷಣ ತಜ್ಞರೂ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಸ್ಥಾಪನೆಮಾಡಿದವರೂ ಆದ ಶ್ರೀ ಮದನ ಮೋಹನ ಮಾಳವೀಯರ ೧೫೩ ನೇ ಜನ್ಮ ವರ್ಷ (1861ರ ಡಿ.25ರಂದು ಜನನ) ಅವರಿಗೆ ಮರಣೋತ್ತರವಾಗಿ ೨೦೧೫ ರ ಮಾರ್ಚ್,೩೧ ರಂದು ಪ್ರದಾನಮಾಡಲಾಯಿತು. [1]
ಜೀವನ ವಿವರ
ಸ್ವಾತಂತ್ರ್ಯ ಹೋರಾಟಗಾರ, ಶಿಕ್ಷಣತಜ್ಞ, ಬಹುಮುಖ ವ್ಯಕ್ತಿತ್ವದ ಪ್ರತಿಭೆ ಮದನ ಮೋಹನ ಮಾಳವೀಯ. ಸ್ವಾತಂತ್ರ್ಯ ಹೋರಾಟದ ವೇಳೆ ಸೌಮ್ಯವಾದಿಗಳು ಮತ್ತು ತೀವ್ರವಾದಿಗಳ ನಡುವಿನ ಸೇತುವೆಯಂತೆ ಕಾರ್ಯನಿರ್ವಹಿಸಿದವರು. ಮಾಳವೀಯರ ಕಾರ್ಯ ಬಹುವಾಗಿ ನೆನಪಾಗುವುದು 'ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸ್ಥಾಪನೆ'ಯ ಮೂಲಕ. ಹಿಂದೂ ರಾಷ್ಟ್ರೀಯವಾದದ ಅನುಯಾಯಿಯಾಗಿ, ಸ್ವತಃ 'ಹಿಂದೂ ಮಹಾಸಭಾ'ವನ್ನು ಕಟ್ಟಿದ ಮಾಳವೀಯರು, ಸಮಾಜ ಸುಧಾರಣೆಗೂ ಅಪಾರವಾಗಿ ಶ್ರಮಿಸಿದವರು.
ಹಿನ್ನೆಲೆ
- ಮಾಲವೀಯರು ೧೮೬೧ ನೇ ಡಿಸೆಂಬರ್ ೨೫ ರಂದು ಭಾರತ, ಅಲಹಾಬಾದ್, ಉತ್ತರ-ಪಶ್ಚಿಮ ಪ್ರಾಂತ್ಯದಲ್ಲಿ 'ಶ್ರೀ ಗೌಡ್ ಬ್ರಾಹ್ಮಣ ಕುಟುಂಬ'ದಲ್ಲಿ ಜನಿಸಿದರು. ಅವರ ತಂದೆ, 'ಪಂಡಿತ್ ಬ್ರಿಜ್ ನಾಥ್', ಮತ್ತು ತಾಯಿ, 'ಮೂನಾ ದೇವಿ'. ಮೂಲತಃ ಅವರು ಮಧ್ಯಪ್ರದೇಶದ 'ಮಾಲ್ವಾ'ದವರು. ಅವರ ಪೂರ್ವಜರು ಸಂಸ್ಕೃತ ಪಾಂಡಿತ್ಯದಲ್ಲಿ ಹೆಸರುವಾಸಿಯಾದವರು.
- ಅವರ ಪೂರ್ವಜರು ಮಾಲ್ವದವರಾದ್ದರಿಂದ, 'ಮಾಲ್ವಿಯರು' ಎಂದು ಹೆಸರಾಯಿತು. ಅವರ ನೈಜ 'ಉಪನಾಮ ವ್ಯಾಸ್' ಎಂದು ಇದ್ದಿತ್ತು. ಅದು 'ಮಾಲ್ವಿವ್ಯಾಸ' ಎಂದಿತ್ತು. ಈ ಮಾಲ್ವಿವ್ಯಾಸ ಮನೆತನದವರು 'ಬನಾರಸ್ ಅಗರ್ವಾಲ್ ವ್ಯಾಪಾರಿ'ಗಳಿಗೆ ಮನೆ ಪುರೋಹಿತರಾಗಿದ್ದರು. ಮಾಲವೀಯ ಅವರ ತಂದೆ ಸಹ ಸಂಸ್ಕೃತ ಗ್ರಂಥಗಳ ವಿದ್ವಾಂಸರು. ಜೀವನೋಪಾಯಕ್ಕೆ 'ಭಾಗವತ ಕಥಾ ಪಠಣ' ಮಾಡುತ್ತಿದ್ದರು.
ಶಿಕ್ಷಣ
- ಮಾಲವೀಯ ಸಾಂಪ್ರದಾಯಿಕವಾಗಿ ಎರಡು ಸಂಸ್ಕೃತ ಪಾಠಶಾಲೆಯಲ್ಲಿ ವ್ಯಾಸಂಗ ಮಾಡಿದರು. ನಂತರ ಒಂದು ಇಂಗ್ಲೀಷ್ ಶಾಲೆಯಲ್ಲಿ ಶಿಕ್ಷಣ ಮುಂದುವರಿಸಿದರು. [11] ಮಾಲವೀಯ ತಮ್ಮ ಪ್ರಾಥಮಿಕ ಶಿಕ್ಷಣವನ್ನು 'ಹರದೇವ ಧರ್ಮ ಜ್ಞಾನೋಪದೇಶ ಪಾಠಶಾಲೆ'ಯಲ್ಲಿ ಪ್ರಾಥಮಿಕ ವದ್ಯಾಭ್ಯಾಸ ಮುಗಿಸಿದರು. ನಂತರ ಮತ್ತೊಂದು 'ವಿದ್ಯಾವರ್ಧಿನಿ ಸಭಾ ಶಾಲೆ'ಯಲ್ಲಿ ಓದು ಪೂರೈಸಿದರು. ಅನಂತರ ಅಲಹಾಬಾದ್ ಜಿಲ್ಲಾ ಶಾಲೆಗೆ ಸೇರಿದರು. ಅಲ್ಲಿದ್ದಾಗ. ಮಕರಂದ್ ಕಾವ್ಯನಾಮದ ಅಡಿಯಲ್ಲಿ ಕವನಗಳನ್ನು ಬರೆಯಲು ಪ್ರಾರಂಭಿಸಿದರು.
- ಅವು ನಂತರದಲ್ಲಿ ಪತ್ರಿಕೆಗಳಲ್ಲಿ ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡವು. ಅಲಹಾಬಾದ್ ಜಿಲ್ಲಾ ಸ್ಕೂಲ್ (ಅಲಹಾಬಾದ್ ಜಿಲ್ಲಾ ಸ್ಕೂಲ್) ಸೇರಿದರು. ಮಾಲವೀಯರು ಅಲಹಾಬಾದ್ ವಿಶ್ವವಿದ್ಯಾಲಯದ, 'ಮುಯಿರ್ ಸೆಂಟ್ರಲ್ ಕಾಲೇಜ್'ನಲ್ಲಿ, ೧೮೭೯ ರಲ್ಲಿ ಮೆಟ್ರಿಕ್ಯುಲೇಶನ್ ಮುಗಿಸಿದರು. ಆಗ 'ಹ್ಯಾರಿಸನ್ ಕಾಲೇಜ್`ನ ಪ್ರಾಂಶುಪಾಲ'ರು, ಅವರ ಕುಟುಂಬದ ಆರ್ಥಿಕ ಕಷ್ಟಗಳನ್ನು ಎದುರಿಸುತ್ತಿರುವುದನ್ನು ನೋಡಿ, ಮಾಳವೀಯರಿಗೆ ಒಂದು 'ಮಾಸಿಕ ವಿದ್ಯಾರ್ಥಿವೇತನ' ಒದಗಿಸಿದರು.
- ಅವರು ತಮ್ಮ 'ಬಿಎ ಪದವಿ'ಯನ್ನು ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಪೂರ್ಣಗೊಳಿಸಿದರು. ಅವರಿಗೆ ಸಂಸ್ಕೃತ ಎಂ.ಎ. ಮಾಡುವ ಆಸೆ ಇತ್ತು, ಆದಾಗ್ಯೂ, ತನ್ನ ಕುಟುಂಬ ಪರಿಸ್ಥಿತಿಗಳು ಮತ್ತು ತನ್ನ ತಂದೆ ಅವರ ಕುಟುಂಬ ನಿರ್ವಹಣೆಗೆ ಭಾಗವತ ಕಥಾ ನಿರೂಪಣೆಯ ವೃತ್ತಿ ಪಡೆಯಲು ಬಯಸಿದರು. ಅದರಿಂದ ೧೮೮೪ 1884 ರಲ್ಲಿ ಮದನ್ ಮೋಹನ್ ಮಾಲವೀಯ ಅವರು ಅಲಹಾಬಾದ್ನಲ್ಲಿ ಸರ್ಕಾರದ ಪ್ರೌಢಶಾಲೆಯಲ್ಲಿ ಓರ್ವ ಸಹಾಯಕ ಶಿಕ್ಷಕನಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು [11]
- ೧೮೬೧, ಡಿ.೨೫ ರಂದು ಅಲಹಾಬಾದ್ನ ಸಾಂಪ್ರದಾಯಿಕ ಹಿಂದೂ ಮನೆತನದಲ್ಲಿ ಜನಿಸಿದ ಮಾಳವೀಯರು, ೧೮೮೪ ರಲ್ಲಿ ಅಲಹಾಬಾದ್ ಜಿಲ್ಲಾ ಶಾಲೆಯಲ್ಲಿ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದ್ದರು; ಆದರೆ ಬಳಿಕ ವಿದ್ಯಾಭ್ಯಾಸ ಮುಂದುವರಿಸುವ ದೃಷ್ಟಿಯಿಂದಾಗಿ ಅವರು ವೃತ್ತಿ ಯನ್ನು ತೊರೆದರು. ಬಳಿಕ ಕಾನೂನು ಕಲಿತ ಮಾಳವೀಯರು ಜಿಲ್ಲಾ ನ್ಯಾಯಾಲಯದಲ್ಲಿ ವಕೀಲಿ ವೃತ್ತಿಯನ್ನೂ ನಡೆಸಿದರು.
ಭಾರತೀಯ ಕಾಂಗ್ರೆಸ್ಸಿನಲ್ಲಿ
- ೫೦ ವರ್ಷಗಳ ಕಾಲ ಭಾರತೀಯ ಕಾಂಗ್ರೆಸ್ಸಿನ ಸದಸ್ಯರಾಗಿ ಸ್ವಾತಂತ್ರ್ಯ ಹೋರಾಟಕ್ಕೆ ದಿಗ್ದರ್ಶಕರಾಗಿದ್ದವರು. 1909(ಲಾಹೋರ್),೧೯೧೮ (ದೆಹಲಿ), ೧೯೩೦ (ದೆಹಲಿ), ೧೯೩೨ (ಕೋಲ್ಕತಾ) ಕಾಂಗ್ರೆಸ್ ಅಧಿವೇಶನಗಳಲ್ಲಿ ಮಾಳವೀಯರು ಅಧ್ಯಕ್ಷರಾಗಿದ್ದರು. ಸ್ವಾತಂತ್ರ್ಯ ಹೋರಾಟ ಗಾರರಾದ ಗೋಪಾಲ ಕೃಷ್ಣ ಗೋಖಲೆ, ಮತ್ತು ಸಮಾಜ ಸುಧಾರಕರೂ ಆದ 'ಬಾಲಗಂಗಾಧರ ತಿಲಕ'ರ ಅನುಯಾಯಿಯಾಗಿದ್ದವರು ಮಾಳವೀಯರು.
- ೧೯೩೦ ರಲ್ಲಿ ಮಹಾತ್ಮಾ ಗಾಂಧಿಯವರು ಉಪ್ಪಿನ ಸತ್ಯಾಗ್ರಹ ಮತ್ತು ಕಾನೂನು ಭಂಗ ಚಳವಳಿಗೆ ಕರೆ ನೀಡಿದ್ದು, ಮಾಳವೀಯರು ಸಕ್ರಿಯವಾಗಿ ಭಾಗಿಯಾಗಿದ್ದರು. ಪರಿಣಾಮ ಅವರನ್ನು ಬ್ರಿಟಿಷರು ಬಂಧಿಸಿ ಜೈಲಿಗಟ್ಟಿದರು. ಸ್ವಾತಂತ್ರ್ಯ ಹೋರಾಟಕ್ಕೆ ಮಾಳವೀಯರ ಕೊಡುಗೆಯನ್ನು ಗೋಖಲೆಯವರು ಒಂದೆಡೆ ಹೀಗೆ ನೆನೆಯುತ್ತಾರೆ-'ಮಾಳವೀಯರು ನಿಜವಾದ ತ್ಯಾಗ ಜೀವಿ. ಕೈತುಂಬ ಸಂಬಳ, ಐಷಾರಾಮದ ಜೀವನ ನಡೆಸಬಹುದಾಗಿದ್ದ ಅವರು ದೇಶದ ಕಷ್ಟನಿವಾರಣೆಗೆ ಜೀವನ ಮುಡುಪಿಟ್ಟವರು. ಆದರೆ ಹೋರಾಟದ ಜೀವನ ಅವರನ್ನು ಬಡತನಕ್ಕೆ ನೂಕಿತು.
- ಮಾಳವೀಯರು ಪತ್ರಕರ್ತರೂ ಆಗಿದ್ದರು. ೧೯೦೯ ರಲ್ಲಿ ಅಲಹಾಬಾದ್ನಲ್ಲಿ ಇಂಗ್ಲಿಷ್ ಪತ್ರಿಕೆ 'ದಿ ಲೀಡರ್' ಆರಂಭಿಸಿದರು. ಸಮಾಜಪರ, ಸ್ವಾತಂತ್ರ್ಯ ಹೋರಾಟಕ್ಕೆ ಪ್ರೋತ್ಸಾಹಕರವಾದ ವಿಚಾರಗಳನ್ನು ಈ ಪತ್ರಿಕೆಯಲ್ಲಿ ಬರೆಯುತ್ತಿದ್ದರು. ಮಾಳವೀಯರು ೧೯೦೩ ರಿಂದ ೧೯೧೮ ರವರೆಗೆ ಅಲಹಾಬಾದ್ ನಗರ ಪಾಲಿಕೆಯ ಸದಸ್ಯರಾಗಿ, ಪ್ರಾದೇಶಿಕ ಶಾಸಕಾಂಗ ಸಮಿತಿಯ ಸದಸ್ಯರಾಗಿ ಮಾಳವೀಯರು ಸೇವೆ ಸಲ್ಲಿಸಿದ್ದರು.
- ಕೇಂದ್ರೀಯ ಸಮಿತಿಯ ಸದಸ್ಯರಾಗಿ ೧೯೧೦ ರಿಂದ ೧೯೨೦ ರವರೆಗೆ, ಭಾರತೀಯ ಶಾಸನ ಸಭೆಯ ಸದಸ್ಯರಾಗಿ ೧೯೧೬ ರಿಂದ ೧೯೧೮ ರವರೆಗೆ ಸೇವೆ ಸಲ್ಲಿಸಿದ್ದರು. ೧೯೩೧ ರಲ್ಲಿ ದುಂಡು ಮೇಜಿನ ಸಭೆಗೂ ಹಾಜರಾಗಿದ್ದರು. ೧೯೩೭ ರಲ್ಲಿ ಸಕ್ರಿಯ ರಾಜಕೀಯವರನ್ನು ತೊರೆದ ಅವರು ಬಳಿಕ ಸಮಾಜ ಸುಧಾರಣೆಯತ್ತ ಗಮನ ಕೇಂದ್ರೀಕರಿಸಿದರು. ಮಹಿಳೆಯರ ಶಿಕ್ಷಣ, ವಿಧವಾ ವಿವಾಹ, ಬಾಲ್ಯವಿವಾಹ, ಡಾಂಭಿಕ ಆಚರಣೆಗಳ ವಿರುದ್ಧ ದನಿ ಎತ್ತಿದರು.
ನಿಧನ
ಮಾಳವೀಯರು ೧೯೪೬ ನ.೧೨ ರಂದು ನಿಧನ ಹೊಂದಿದರು.
ಗಾಂಧೀಜಿ ಅಭಿಪ್ರಾಯ

- ಗಾಂಧೀಜಿಗೆ ಅಚ್ಚುಮೆಚ್ಚು
- ಮಹಾತ್ಮ ಗಾಂಧಿಯವರು ಅತಿ ಹೆಚ್ಚು ಗೌರವ ಹೊಂದಿದ್ದ ಮೂವರಲ್ಲಿ ಮಾಳವೀಯ ಒಬ್ಬರು. ತಿಲಕ್ ಮತ್ತು ಗೋಖಲೆ ಇತರ ಇಬ್ಬರು. ಲಂಡನ್ನಲ್ಲಿ ನಡೆದ ಎರಡನೇ ದುಂಡು ಮೇಜಿನ ಪರಿಷತ್ತಿನಲ್ಲಿ ಗಾಂಧೀಜಿ ಅವರೊಂದಿಗೆ ಭಾಗವಹಿಸಿದ್ದರು. ಖುದ್ದು ಸಂಸ್ಕೃತ ವಿದ್ವಾಂಸರು, ಆದರೆ, ಇಂಗ್ಲಿಷ್ ಮೇಲೆ ಅಷ್ಟೇ ಪ್ರಭುತ್ವ ಹೊಂದಿದವರು. ಅಲ್ಲಿ ನೀಡಿದ ಭಾಷಣದೊಂದಿಗೆ ಬ್ರಿಟಿಷರನ್ನು ಅಚ್ಚರಿಗೊಳಿಸಿದರು. ಆಕ್ಸ್ಫರ್ಡ್, ಕೇಂಬ್ರಿಜ್ನಲ್ಲಿ ಓದದಿದ್ದರೂ ಇಂಗ್ಲಿಷ್ ಮೇಲೆ ಹೊಂದಿರುವ ಹಿಡಿತದ ಬಗ್ಗೆ ಬಹಿರಂಗವಾಗಿ ಪ್ರಶಂಸೆ ವ್ಯಕ್ತಪಡಿಸಿದರಂತೆ ಬ್ರಿಟನ್ನ ರಾಜಕಾರಣಿ ಗಳು. ಭಾರತೀಯ ಶಾಸನಸಭೆಯ ಸದಸ್ಯರಾಗಿದ್ದ ಮಾಳವೀಯ ಅವರು ಜಲಿಯನ್ವಾಲಾಭಾಗ್ ಹತ್ಯಾಕಾಂಡವನ್ನು ಅತ್ಯುಗ್ರವಾಗಿ ಖಂಡಿಸಿದರು. ಅವರನ್ನು ಹಿಂದೂ ರಾಷ್ಟ್ರೀಯವಾದಿ ಎಂದು ಗುರುತಿಸಿದರೂ ಸಂಪ್ರದಾಯಸ್ಥ ಹಿಂದು ಎನಿಸಿಕೊಂಡರೂ ಬದಲಾವಣೆಗೆ ಸದಾ ತೆರೆದು ಕೊಂಡಿದ್ದರು. ಇದರಿಂದಾಗಿಯೇ ಮಹಾಮನ ಎಂದು ಕರೆಸಿಕೊಂಡಿದ್ದರು. ಅಸ್ಪೃಶ್ಯತೆ ನಿವಾರಣೆಗೂ ಶ್ರಮಿಸಿದರು. ಇತರ ಧರ್ಮೀಯರ ಜತೆಗೂಡಿ ಹೋರಾಡಿದರೆ ಮಾತ್ರ ಸ್ವಾತಂತ್ರ ಸಿದ್ಧಿಸಲಿದೆ ಎನ್ನುವ ನಂಬಿಕೆ ಹೊಂದಿದ್ದರು.[2]
ಪ್ರಶಸ್ತಿ
- ಪ್ರಶಸ್ತಿಗಳು: ಭಾರತ ರತ್ನ 2014 (ಮರಣೋತ್ತರ)
ಉಲ್ಲೇಖ
External links
- Mahamana Madan Mohan Malaviya, Biography at BHU website
- Madan Mohan Malaviya University of Technology, Gorakhpur
- Malaviya National Institute of Technology
- Madan Mohan Malaviya at varanasi.org.in