ಡಿ.ವಿ.ಗುಂಡಪ್ಪ
ಡಿ ವಿ ಜಿ(ಮಾರ್ಚ್ ೧೭, ೧೮೮೭ - ಅಕ್ಟೋಬರ್ ೭೧೯೭೫) ಎಂಬ ಹೆಸರಿನಿಂದ ಪ್ರಸಿದ್ಧರಾದ ಡಾ. ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರು ಕರ್ನಾಟಕದ ಪ್ರಸಿದ್ಧ ಸಾಹಿತಿ, ಪತ್ರಕರ್ತರು. ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಇವರು ಕನ್ನಡದ ಆಧುನಿಕ ಸರ್ವಜ್ಞ ಎಂದೇ ಪ್ರಸಿದ್ಧರಾದವರು.[2][3][4]
ಡಿ.ವಿ.ಗುಂಡಪ್ಪ | |
---|---|
![]() ಮಧ್ಯ ವಯಸ್ಸಿನಲ್ಲಿ ಡಿವಿಜಿ | |
ಜನನ | ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ 17 ಮಾರ್ಚ್ 1887 ಮುಳಬಾಗಿಲು,ಕೋಲಾರ ಜಿಲ್ಲೆ, ಕರ್ನಾಟಕ, |
ನಿಧನ | 7 ಅಕ್ಟೋಬರ್ 1975 | (ವಯಸ್ಸು 88)
Other names | ಡಿ ವಿ ಜಿ,[ಕಾವ್ಯನಾಮ] |
ವೃತ್ತಿ | ತತ್ತ್ವಶಾಸ್ತ್ರ ವಿದ್ವಾಂಸ, ಲೇಖಕ, ಕವಿ, ಪತ್ರಕರ್ತ. |
Known for | ಮಂಕುತಿಮ್ಮನ ಕಗ್ಗ |
ಸಂಗಾತಿ(ಗಳು) | ಭಾಗೀರಥಮ್ಮ [1] |
ಶಿಕ್ಷಣ
ಡಿ.ವಿ.ಜಿ ಅವರು ೧೮೮೭, ಮಾರ್ಚ್ ೧೭ರಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ದೇವನಹಳ್ಳಿಯಲ್ಲಿ ಜನಿಸಿದರು. ಅವರ ಪೂರ್ವಿಕರು ತಮಿಳುನಾಡಿನ ತಿರುಚಿನಾಪಳ್ಳಿಯ ಕಡೆಯವರು. ಅವರ ಮುತ್ತಜ್ಜ ಕೋಲಾರ ಜಿಲ್ಲೆಯ ಮುಳಬಾಗಿಲಿಗೆ ವಲಸೆ ಬಂದವರು. ಶೇಕದಾರ ಕುಟುಂಬದ ಗುಂಡಪ್ಪನವರು ೧೮೯೮ ರಲ್ಲಿ ಕನ್ನಡ ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಪಾಸಾದರು. ಆ ಸಂದರ್ಭದಲ್ಲೇ ಸಿಕ್ಕ ಇಂಗ್ಲಿಷ್ ಶಿಕ್ಷಣವನ್ನು ಪಡೆದರು. ಖಾಸಗಿಯಾಗಿ ಸಂಸ್ಕೃತವನ್ನು ಅಭ್ಯಾಸ ಮಾಡಿದರು. ಮುಂದೆ ಸಂಬಂಧಿಕರೊಬ್ಬರ ಸಹಾಯದಿಂದ ಮೈಸೂರಿನ ಮಹಾರಾಜ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದರು. ಆದರೆ ೧೯೦೫ ರಲ್ಲಿ ಮೆಟ್ರಿಕ್ಯುಲೇಷನ್ ನಲ್ಲಿ ತೇರ್ಗಡೆಯಾಗಲಿಲ್ಲ. ಅಲ್ಲಿಗೆ ಶಾಲಾ ಶಿಕ್ಷಣವನ್ನು ನಿಲ್ಲಿಸಿದರು.
ವೃತ್ತಿ ಜೀವನ
ಪ್ರೌಢಶಾಲೆಯಲ್ಲಿ ಓದುವಾಗಲೇ ಗುಂಡಪ್ಪನವರಿಗೆ ಮದುವೆಯಾಯಿತು. ಹೆಂಡತಿ ಭಾಗೀರಥಮ್ಮ. ಮುಂದೆ ಮುಳಬಾಗಿಲಿನ ಒಂದು ಶಾಲೆಯಲ್ಲಿ ಬದಲಿ ಅಧ್ಯಾಪಕರಾಗಿ ಕೆಲ ಕಾಲ ಕೆಲಸ ಮಾಡಿದರು. ಅದೇ ಅವರ ವೃತ್ತಿ ಜೀವನದ ನಾಂದಿ. ಆದರೂ ಅಲ್ಲಿರಲಾಗಲಿಲ್ಲ. ವೃತ್ತಿ ಬಿಟ್ಟು ಮುಂದೆ ಕೋಲಾರದ ಚಿನ್ನದ ಗಣಿಯಲ್ಲಿ, ಸೋಡಾ ಫ್ಯಾಕ್ಟರಿಯಲ್ಲಿ, ಕೆಲಸ ಮಾಡಿದರು. ನಂತರ ಬೆಂಗಳೂರಿಗೆ ಬಂದು ಕೆಲಸಕ್ಕಾಗಿ ಎಲ್ಲೆಂದರಲ್ಲಿ ಅಲೆದರು.

Project
ಪತ್ರಿಕೋದ್ಯಮ ಜೀವನ ನಿರ್ವಹಣೆಗಾಗಿ ಏನಾದರೂ ಮಾಡಬೇಕಿದ್ದ ಗುಂಡಪ್ಪನವರು "ಸೂರ್ಯೋದಯ ಪ್ರಕಾಶಿಕ" ಪತ್ರಿಕೆಯಲ್ಲಿ ಬಾತ್ಮೀದಾರರಾಗಿ ಸೇರಿಕೊಂಡರು. ಹೆಚ್ಚು ಕಾಲ ಈ ಪತ್ರಿಕೆ ನಡೆಯಲಿಲ್ಲ. ಪುನಃ ಮತ್ತೊಂದಕ್ಕೆ ಗುಂಡಪ್ಪನವರ ಹೆಜ್ಜೆ, ಖರ್ಚಿಗಾಗಿ ಏನಾದರೂ ಬರೆಯಬೇಕಿತ್ತು. ಯಾವುದಾದರೂ ಪತ್ರಿಕೆ ಬೇಕಿತ್ತು. ಹಲವಾರು ಇಂಗ್ಲಿಷ್ ಪತ್ರಿಕೆಗಳಿಗೆ ಲೇಖನ ಬರೆದರು. ಕನ್ನಡ ಪತ್ರಿಕೆಗಳಲ್ಲಿ ಅನುಭವ ಪಡೆದರು. "ವೀರಕೇಸರಿ" ಯಲ್ಲಿ ಕಾರ್ಯ ನಿರ್ವಹಿಸಲು ಮದ್ರಾಸ್ ಗೆ ಹೋದಾಗ ಅಲ್ಲಿ "ಹಿಂದೂ" ಪತ್ರಿಕೆಗೆ ಬರೆದರು. ನಂತರ "ಮೈಸೂರು ಟೈಮ್ಸ್" ಇಂಗ್ಲಿಷ್ ಪತ್ರಿಕೆಯ ಸಹಾಯಕ ಸಂಪಾದಕರಾದರು.
ಸಾಹಿತ್ಯ ಕೃಷಿ
ದಿವಾನ್ ರಂಗಾಚಾರ್ಯ ಅವರ ಬಗ್ಗೆ ಇಂಗ್ಲಿಷಿನಲ್ಲಿ ಬರೆದ ಲೇಖನ ಡಿ.ವಿ.ಜಿ ಅವರ ಬದುಕಲ್ಲಿ ಹೊಸ ತಿರುವು ಪಡೆಯಿತು. ಮುಂದೆ ಪುಸ್ತಕ ರೂಪಕ್ಕೆ ತರಲು ಹಲವು ಮಾರ್ಪಾಡು ಮಾಡಿದರು. ಇದು ಪ್ರಕಟವಾಗುತ್ತಿದ್ದಂತೆ ಕೃತಿ ಪ್ರಕಟಣೆ ಮೂಲಕವೂ ಹಣ ಬರುವಂತಾಯಿತು. ಲೇಖನ, ಪರಿಚಯದ ಜೊತೆ ಕಾವ್ಯ ಕೃಷಿ ಪ್ರಧಾನವಾಯಿತು. ಅನುವಾದ ಸಾಹಿತ್ಯದ ಮೂಲಕ ಡಿ ವಿ ಜಿ ಉತ್ತಮ ಹೆಸರು ಪಡೆದರು. ರಾಜಕೀಯ ವಿಶ್ಲೇಷಣೆ, ತತ್ತ್ವಶಾಸ್ತ್ರ, ಧಾರ್ಮಿಕ ವಿಚಾರಗಳು, ಪ್ರಬಂಧ ಬರಹ, ಬೇರೆ ಬೇರೆ ಮಗ್ಗಲುಗಳಾದವು.
ಕನ್ನಡ ಕಾವ್ಯಕ್ಷೇತ್ರದಲ್ಲಿ "ಮಂಕುತಿಮ್ಮನ ಕಗ್ಗ"[5] ಹಾಗೂ "ಮರುಳ ಮುನಿಯನ ಕಗ್ಗ"[6] ದ ಮೂಲಕ ಡಿ ವಿ ಜಿ ಮನೆಮಾತಾದವರು:
"ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು ಮದುವೆಗೋ ಮಸಣಕೋ ಹೋಗೆಂದ ಕಡೆಗೋಗು ಪದ ಕುಸಿಯೆ ನೆಲವಿಹುದು- ಮಂಕುತಿಮ್ಮ ||"
- ಈ ಕೃತಿ ಕನ್ನಡದ ಭಗವದ್ಗೀತೆಯೆಂದೇ ಹಲವರು ಭಾವಿಸುವಂತಹ ಉತ್ಕೃಷ್ಟ ಸಂಕಲನ. "ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು" ಎಂದ ಡಿ ವಿ ಜಿ, ಕವಿ ಪರಂಪರೆ ಹಾಗೂ ವಿಜ್ಞಾನ ನಂಬಿಕೆಗೆ ಕೊಂಡಿ ಬೆಸೆದವರು. ಹಳೆಯದನ್ನು ಬಿಡಲಾರದ ಹೊಸತು ವಿಜ್ಞಾನ ಸೃಷ್ಟೀಕರಿಸಲಾಗದ ಭಾರತೀಯ ಮನಸ್ಸುಗಳನ್ನು ಒಂದಾಗಿಸುವ ವಿಚಾರಲಹರಿಯನ್ನು ಕಾವ್ಯ ಮುಖೇನ ನೀಡಿದ ಡಿ ವಿ ಜಿ ಪತ್ರಕರ್ತರಾಗಿಯೂ ಹೆಸರಾದವರು. ವ್ಯಕ್ತಿ ವಿಚಾರದ ಬರಹಗಳಿಂದ ನಾಲ್ಕು ಕಾಲ ನೆನಪಲ್ಲಿರುವವರು. ಹೀಗಾಗಿ ಅವರ "ಮಹನೀಯರು", "ಜ್ಞಾಪಕ ಚಿತ್ರಶಾಲೆ" ಮಹತ್ವದ ವಿಚಾರಗಳನ್ನು ಹೊರಚೆಲ್ಲಿದ ಕೃತಿಗಳು.
- ಡಿ.ವಿ.ಜಿ ಅವರನ್ನು ಆಧುನಿಕ ಭಾರತೀಯ ಸಾಹಿತ್ಯದ ಒಂದು ಅಶ್ವತ್ಥ ವೃಕ್ಷ ಎಂದು ಕರೆಯುತ್ತಾರೆ. ಡಿ.ವಿ.ಜಿ ಅವರ ವಿದ್ವತ್ತು ಹಾಗೂ ಚಿಂತನೆ ಕಂಡವರು ಒಬ್ಬ ಋಷಿ ಎಂದಿದ್ದಾರೆ. ಅವರ ಸಾಹಿತ್ಯ ಬಾಳಿಗೊಂದು ನಂಬಿಕೆಯನ್ನೂ, ಭರವಸೆಯನ್ನೂ ಕೊಟ್ಟಿದೆ. ಹಾ.ಮಾ.ನಾಯಕ ರು "ಡಿ ವಿ ಜಿ ಅವರದು ಸತ್ಯ ಶಿವ ಸೌಂದರ್ಯಗಳು ಸಮಹಿತವಾದ ಸಾಹಿತ್ಯ" ಎಂದಿದ್ದಾರೆ.
- ಕರ್ನಾಟಕ ಸರ್ಕಾರ ಡಿ.ವಿ.ಜಿ ಅವರ ಶತಮಾನೋತ್ಸವ ಸಂದರ್ಭದಲ್ಲಿ ಅವರ ಸಮಗ್ರ ಸಾಹಿತ್ಯ ಸಂಪುಟ ಹೊರತರುವ ಯೋಜನೆ ಹಮ್ಮಿಕೊಂಡಿದೆ. ಈ ಪ್ರಕಾರ "ಡಿ ವಿ ಜಿ ಕೃತಿ ಶ್ರೇಣಿ"ಯಲ್ಲಿ ವಿಚಾರ, ವಿಮರ್ಶೆ, ನಾಟಕ, ಶಿಶು ಸಾಹಿತ್ಯ, ಜೀವನ ಚರಿತ್ರೆಗಳು, ಕಾವ್ಯ ೧-೨, ನೆನಪಿನ ಚಿತ್ರಗಳು, ಸಂಕೀರ್ಣ ಹೊರತಂದಿದೆ.
- ಕನ್ನಡದ ವಿಜ್ಞಾನ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ಕೊಟ್ಟ ಬಿ ಜಿ ಎಲ್ ಸ್ವಾಮಿ, ಡಿ ವಿ ಜಿ ಅವರ ಪುತ್ರರು. ತಮ್ಮ ಜೀವನ ಅಂತ್ಯದ ವರೆಗೂ ಮದರಾಸಿನಲ್ಲೇ ಕಾಲ ಕಳೆದ ಸ್ವಾಮಿ ಕನ್ನಡ ಸಾಹಿತ್ಯ ಕಂಡ ಅಪರೂಪದ ಬರಹಗಾರರು.
ಗುಂಡಪ್ಪನವರ ಸಮಗ್ರ ಸಾಹಿತ್ಯ[7]
ಸಾಹಿತ್ಯ ಮಾತ್ರವಲ್ಲದೆ ಚರಿತ್ರೆ, ರಾಜನೀತಿ, ತತ್ವಜ್ಞಾನ, ಪ್ರಜಾಪ್ರಭುತ್ವ, ಸಮಾಜ ವಿಜ್ಞಾನ, ಸಾರ್ವಜನಿಕ ಜೀವನ, ಮುಂತಾದ ಹಲವಾರು ವಿಷಯಗಳನ್ನು ಕುರಿತು ಅವರು 66 ಕನ್ನಡ ಕೃತಿಗಳನ್ನು ರಚಿಸಿರುವುದರ ಜೊತೆಗೆ, ಇಂಗ್ಲಿಷ್ – ಕನ್ನಡ ಭಾಷೆಗಳೆರಡರಲ್ಲಿಯೂ ನೂರಾರು ಉಪಯುಕ್ತ ಲೇಖನಗಳನ್ನೂ ಬರೆದಿರುತ್ತಾರೆ. ಇವರ ಇಂಗ್ಲಿಷ್ ಕೃತಿಗಳು ಹಾಗೂ ಲೇಖನಗಳನ್ನು ವಿಶ್ವವಿಖ್ಯಾತ ವಿದ್ವಾಂಸರಾದ ಡಾ. ಎ.ಬಿ. ಕೀತ್ ಹಾಗೂ ಸಿ.ಎಫ್. ಆಂಡ್ರ್ಯೂಸ್ ಮತ್ತು ನಮ್ಮ ದೇಶದ ಅಗ್ರಗಣ್ಯ ವ್ಯಕ್ತಿಗಳಾಗಿದ್ದ ಎಸ್. ಸತ್ಯಮೂರ್ತಿ ಹಾಗೂ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್ ಅವರುಗಳೂ ಅಂದಿನ ಕಾಲಘಟ್ಟದ ನಮ್ಮ ದೇಶದ ಪ್ರಮುಖ ಪತ್ರಿಕೆಗಳಾಗಿದ್ದ ‘ಸರ್ವೆಂಟ್ ಆಫ್ ಇಂಡಿಯ’ ಹಾಗೂ ‘ಬಾಂಬೆ ಕ್ರಾನಿಕಲ್’ ಪತ್ರಿಕೆಗಳು ಮನಸೋಕ್ತವಾಗಿ ಮೆಚ್ಚಿಕೊಂಡಿವೆ.
ಕನ್ನಡದಲ್ಲಿ
ಕವಿತೆ
- ನಿವೇದನ
- ಉಮರನ ಒಸಗೆ
- ಮಂಕುತಿಮ್ಮನ ಕಗ್ಗ - I
- ಮರುಳ ಮುನಿಯನ ಕಗ್ಗ - II
- ಶ್ರೀರಾಮ ಪರೀಕ್ಷಣಂ
- ಅ೦ತಃಪುರಗೀತೆ
- ಗೀತ ಶಾಕುಂತಲಾ
ನಿಬಂಧ
- ಜೀವನ ಸೌಂದರ್ಯ ಮತ್ತು ಸಾಹಿತ್ಯ
- ಸಾಹಿತ್ಯ ಶಕ್ತಿ
- ಸಂಸ್ಕೃತಿ
- ಬಾಳಿಗೊಂದು ನಂಬಿಕೆ
- ಜೀವವನಧರ್ಮ ಯೋಗ (ದೈನಂದಿನ ಜೀವನದ ಯೋಗ)-(ಗೀತೆಯ ಮೇಲೆ ಪ್ರವಚನ ಸಂಗ್ರಹ)
ನಾಟಕ
- ವಿದ್ಯಾರಣ್ಯ ವಿಜಯ
- ಜಾಕ್ ಕೇಡ್
- ಮ್ಯಾಕ್ ಬೆಥ್
ಇಂಗ್ಲಿಷಿನಲ್ಲಿ
- Vedanta and Nationalism (1909)
- The Problems of Indian Native States (1917)
- The Native States in the Empire (1918)
- The Indian Native States and the Montagu-Chelmsford Report (1918)
- The Government of India and the Indian States, The Indian States Committee : A Note on its Terms of Reference and Their Implications (1928)
- All About Mysore (1931)
- The States and their People in the Indian Constitution (1931)
ಸಾಧನೆ
- ೧೯೩೫ ರಲ್ಲಿ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಸ್ಥಾಪಿಸಿದರು.
- ಡಿ.ವಿ.ಜಿ. ಅವರು, ಮೈಸೂರು ವಿಶ್ವವಿದ್ಯಾನಿಲಯ ಪ್ರಕಟಿಸಿದ ‘ಇಂಗ್ಲಿಷ್–ಕನ್ನಡ ನಿಘಂಟು’ ಕೃತಿಯ ಸಂಪಾದಕ ಸಮಿತಿಯಲ್ಲಿದ್ದರು.
- 1939ರಲ್ಲಿ ಮೈಸೂರು ರಾಜ್ಯಾಂಗ ಸುಧಾರಣಾ ಸಮಿತಿ ಸದಸ್ಯರಾಗಿದ್ದರು.
ರಾಜಕೀಯ ದೃಷ್ಟಿಕೋನ
- ಅವರ ಈ ಮಾತುಗಳು: ‘ರಾಜದಂಡ ಹುಟ್ಟಿದ್ದು ಮನುಷ್ಯನಿಗೆ ಮನುಷ್ಯನ ವಿಷಯದಲ್ಲಿರುವ ಹೆದರಿಕೆಯಿಂದ. ರಾಜ್ಯನಿಬಂಧನೆಯಾದದ್ದೂ ಮನುಷ್ಯನಿಗೆ ಮನುಷ್ಯನಲ್ಲಿರುವ ಅಪನಂಬಿಕೆಯಿಂದ. ಮನುಷ್ಯರು ಅನ್ಯೋನ್ಯ ಸಹವಾಸದಲ್ಲಿರಬೇಕಾಗಿಬಂದ ಮೇಲೆ, ಒಬ್ಬನನ್ನೊಬ್ಬನು ನಂಬದಿದ್ದರೆ ಬದುಕು ಸಾಗದು; ಪೂರ್ತಿ ನಂಬುವುದೆಂದರೆ ವಂಚನೆಯ ಶಂಕೆ.
- ಹೀಗೆ ನಂಬಿಕೆ–ಅಪನಂಬಿಕೆಗಳ ಬೆರಕೆಯೇ ರಾಜ್ಯಸಂಬಂಧಗಳ ಒಳತಿರುಳು... ಸಾರ್ವಜನಿಕ ಕಾರ್ಯಕ್ಕೆಂದು ಮುಂದೆ ಬರುವವರ ಮನಸ್ಸುಗಳಲ್ಲಿ ಪ್ರತ್ಯಕ್ಷವಾಗಲ್ಲದಿದ್ದರೆ ಪರೋಕ್ಷವಾಗಿಯಾದರೂ, ಸಮೀಪದಲ್ಲಿ ಅಲ್ಲದಿದ್ದರೆ ದೂರವಾಗಿಯಾದರೂ, ಸ್ವಪ್ರಯೋಜನದ ನಿರೀಕ್ಷೆ ಅಷ್ಟೋ ಇಷ್ಟೋ ಇರುವುದು ಅಸ್ವಾಭಾವಿಕವಲ್ಲ. ಆದರೆ ಎಲ್ಲಿ ಅವರು ನೂರಕ್ಕೆ ನೂರು ಮಂದಿಯೂ ಅಂಥವರೇ ಆಗಿದ್ದಾರೆಯೋ ಆ ದೇಶ ತೀರ ಬಡದೇಶವೆನ್ನಬೇಕು.
- ಸ್ವಾಭಾವಿಕವಾದ ಆಶಾಪ್ರವೃತ್ತಿಯ ಮಟ್ಟದಿಂದ ಮೇಲೇರಿ ನಡೆಯಬಲ್ಲವನು ದೇಶದ ನೂರರಲ್ಲಿ ಹತ್ತು ಮಂದಿಯಾದರೂ ಎಲ್ಲಿ ದೊರೆಯುತ್ತಾರೆಯೋ ಅದೇ ಪ್ರಜಾರಾಜ್ಯವನ್ನು ಅನರ್ಥದಿಂದ ಉಳಿಸಿಕೊಳ್ಳಬಲ್ಲ ದೇಶ’.
- ರಾಜಕೀಯ ಒಂದು ಉದ್ಯಮವಾಗಿ ಪರಿವರ್ತನೆಯಾಗುವುದರ ಅಪಾಯದ ಬಗ್ಗೆಯೂ ಡಿವಿಜಿ ಎಚ್ಚರಿಸಿದ್ದರು. ‘ಅನ್ನ ವಸ್ತು ಸಂಪಾದನೆಗಾಗಿ ಬೇರೆ ವೃತ್ತಿಯನ್ನಿರಿಸಿಕೊಂಡು, ಕೇವಲ ಸಾರ್ವಜನಿಕ ಹಿತದೃಷ್ಟಿಯಿಂದ ರಾಜಕೀಯಕ್ಕೆ ಕೈ ಹಚ್ಚುವವರೆಲ್ಲ ನಿಷ್ಪಾಕ್ಷಿತ ರಾಜ್ಯಸ್ಥರೇ. ಅಂಥವರ ಸ್ವತಂತ್ರ ಪೋಷಣೆಯಿಂದ ಬೆಳೆಯಬೇಕಾದದ್ದು ನಮ್ಮ ರಾಜಕೀಯ’ ಎಂದು ಆಶಿಸಿದರು.[8]
ಗೌರವಗಳು / ಪ್ರಶಸ್ತಿಗಳು
- ಡಿ.ವಿ.ಗುಂಡಪ್ಪನವರು ೧೯೩೨ ರಲ್ಲಿ ಮಡಿಕೇರಿಯಲ್ಲಿ ನಡೆದ ೧೮ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರಾಗಿದ್ದರು.[9]
- ೧೯೬೧ ರಲ್ಲಿ ಡಿ.ವಿ.ಜಿ ಅವರಿಗೆ ಮೈಸೂರು ವಿಶ್ವವಿದ್ಯಾಲಯ ಗೌರವ ಡಿ. ಲಿಟ್. ಪದವಿ ನೀಡಿ ಗೌರವಿಸಿತು. ಇದು ಡಿ.ವಿ.ಜಿ ಅವರು ಪತ್ರಿಕೋದ್ಯಮ ಹಾಗೂ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆಗಾಗಿ ಸಂದ ಪುರಸ್ಕಾರ.
- ೧೯೬೭ ರಲ್ಲಿ ಶ್ರೀಮದ್ಭಗವದ್ಗೀತಾ ತಾತ್ಪರ್ಯ[10] ಎಂಬ ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು.
- ೧೯೭೩ ರಲ್ಲಿ ಡಿ.ವಿ.ಜಿ ಸನ್ಮಾನ ಸಮಿತಿ ಇವರಿಗೆ ಒಂದು ಲಕ್ಷ ರೂಪಾಯಿಗಳ ಗೌರವಧನ ಸಮರ್ಪಿಸಿತು. ಇದನ್ನು ತಾವೇ ಸ್ಥಾಪಿಸಿದ ಗೋಖಲೆ ಸಂಸ್ಥೆಗೆ ದಾನ ಮಾಡಿದರು.
- ೧೯೭೪ರಲ್ಲಿ ಭಾರತ ಸರ್ಕಾರ "ಪದ್ಮಭೂಷಣ ಪ್ರಶಸ್ತಿ" ನೀಡಿ ಗೌರವಿಸಿತು.[11]
- ಭಾರತೀಯ ಅಂಚೆ ಸೇವೆ ಡಿವಿಜಿಯವರ ನೆನಪಿಗಾಗಿ ೧೯೮೮ರಲ್ಲಿ ಅಂಚೆಚೀಟಿ ಬಿಡುಗಡೆ ಮಾಡಿತು.[12]
ಅವರ ಹಾಸ್ಯಪ್ರಜ್ಞೆ
ಜೀವನದಲ್ಲಿ ತೊಂದರೆಗಳಿದ್ದರೂ ಅವರಲ್ಲಿ ಹಾಸ್ಯ ಪ್ರವೃತ್ತಿಯೂ ಇತ್ತು. ಅವರ ವ್ಯಾಕರಣಕಲಿಯಲು ಗರಣಿಕೃಷ್ಣಾಚಾರ್ಯರಲ್ಲಿ ಹೋದಾಗ ಅವರಿಗೆ ಶಬ್ದಶಾಸ್ತ್ರ ಒಲಿಯದೆ ಸೂಪಶಾಸ್ತ್ರದಲ್ಲಿ ಪರಿಣತಿ ಪಡೆದುದಾಗಿ ಒಂದು ಹಾಸ್ಯ ಭರಿತ ಸಂಸ್ಕೃತ ಶ್ಲೋಕದಲ್ಲಿ ಹೇಳುತ್ತಾರೆ:
ನ ವೇದಾಂತೇ ಗಾಢಾ ನಚ ಪರಿಚಿತಂ ಶಬ್ದಶಾಸ್ತ್ರಂ|
ನ ವಾ ತರ್ಕೇ ವೇದೇ ನ ಚ ಸರಸತಾ ಕಾವ್ಯನಿಹವೇ|
ವಯಂ ಶ್ರೀಮದ್ಬ್ಯಾಳೀಹುಳಿ ಪಳದ್ಯ ಕೊಸುಂಂಬ್ರಿತೊವ್ವೀ|
ಹಯಗ್ರೀವಾಂಬೋಡೀ ಕರಿಗಡಬು ದಧ್ಯನ್ನ ರಸಿಕಾಃ||
ಅರ್ಥ: ನಾವು ವೇದಂತದಲ್ಲಿ ನುರಿತವರಲ್ಲ, ವ್ಯಾಕರಣವನ್ನೂ ಅರಿತವರಲ್ಲ, ತರ್ಕವೇದಗಳನ್ನೂ ತಿಳಿದವರಲ್ಲ, ಸಾಹಿತ್ಯದಲ್ಲಿ ಸರಸತೆಇಲ್ಲ, ಆದರೆ ಕೇವಲ ಶ್ರೀಮದ್ ಬೇಳೇಹುಳಿ,ಪಳದ್ಯ, ಕೋಸಂಬರಿ, ತೊವ್ವೆ,ಹಯಗ್ರೀವ, ಅಂಬೊಡೆ, ಕರಿಗಡಬು ಮತ್ತು ಮೊಸರನ್ನದಲ್ಲಿ ರಸಿಕರು.[13]
ಸ್ಮಾರಕ
ನಿಧನ
೧೯೭೫ ರ ಅಕ್ಟೋಬರ್ ೭ ರಂದು ಡಿ ವಿ ಜಿ ನಿಧನರಾದರು.[16][17][18]
ಹೆಚ್ಚಿಗೆ ಓದಲು
- ಬಿ. ಜಿ. ಎಲ್. ಸ್ವಾಮಿ
- ಮಂಕುತಿಮ್ಮನ ಕಗ್ಗ
- ಮರುಳ ಮುನಿಯನ ಕಗ್ಗ
- ಕನ್ನಡ ನೆಲದಲ್ಲಿ ಗಾಂಧಿ ಡಿ.ವಿ.ಜಿ.ಗಾಂಧೀಜಿಯವರನ್ನು ಮೊಟ್ಟಮೊದಲಿಗೆ ಕರ್ನಾಟಕಕ್ಕೆ ಕರೆತಂದಿದ್ದರು.
- ಡಿ.ವಿ. ಗುಂಡಪ್ಪನವರ ಚೊಚ್ಚಿಲ ಕೃತಿ ‘ವೇದಾಂತ ಅಂಡ್ ನ್ಯಾಷನಲಿಸಂ
- ಡಿವಿಜಿ:ಪ್ರಜಾಪ್ರಭುತ್ವದ ಬೆಳಕು;ಎಸ್. ಸೂರ್ಯಪ್ರಕಾಶ ಪಂಡಿತ್;17 Mar, 2017;
ಉಲ್ಲೇಖಗಳು
- G Venkatasubbiah (10 September 1995). D. V. Gundappa. Sahitya Akademi. ISBN 81-260-1386-9.
- Sahitya Akademi (1988), p 1057
- Murthy (1992), pp. 173, 174, 178, 190
- Sahitya Akademi (1988), p. 1437
- "The Wisdom of Kagga - A Modern Classic".
- "Marula muniyana kagga".
- ಈಶೋಪನಿಷತ್. ಕಾವ್ಯಾಲಯ, ಮೈಸೂರು. 1953. p. 53. Unknown parameter
|Author=
ignored (|author=
suggested) (help) - ಡಿವಿಜಿ: ಪ್ರಜಾಪ್ರಭುತ್ವದ ಬೆಳಕು;ಎಸ್. ಸೂರ್ಯಪ್ರಕಾಶ ಪಂಡಿತ್;17 Mar, 2017
- Vikas Kamat. "D.V. Gundappa". kamatdotcom. Retrieved 2013-08-02.
- "The Gita for Every Man". Yabaluri.org. Retrieved 2013-02-12.
- "Padma Bhushan Awardees".
- "Commemorative stamp of Gundappa". Indianpost.com. 1988-03-17. Retrieved 2013-02-12.
- (ಜ್ಞಾಪಕಚಿತ್ರಶಾಲೆ:ಪ್ರಜಾವಾಣಿ:೩೦-೭-೨೦೧೬:)
- "Renovated Bugle Rock Park opens". The Times Of India.
- "A park where legends met".
- "D.V.G ( Dr. D V Gundappa )". Retrieved 2013-08-12.
- "Retaining the old world charm". New Indian Express. Retrieved 2013-08-12.
- "Mulbagal is cold to installation of DVG statue near KEB Circle". Deccan Herald. Retrieved 2013-08-12.