ಜ್ಯೋತ್ಸ್ನಾ ಕಾಮತ್

ಡಾ.ಜ್ಯೋತ್ಸ್ನಾ ಕಾಮತ್ ಒಬ್ಬ ಹೆಸರಾಂತ ಸಂಶೋಧಕಿ, ದಕ್ಷ ಆಡಳಿತಗಾರ್ತಿ ಮತ್ತು ಕನ್ನಡ ಸಾಹಿತ್ಯಲೋಕದಲ್ಲಿ ಬರಹಗಾರ್ತಿ. ಬೆಂಗಳೂರು ಆಕಾಶವಾಣಿಯಲ್ಲಿ ನಿರ್ದೇಶಕಿಯಾಗಿ ಕೆಲಸ ಮಾಡಿದವರು. ಪತಿ ಡಾ.ಕೃಷ್ಣಾನಂದ ಕಾಮತ, ಕನ್ನಡ ಸಾಹಿತ್ಯಲೋಕದಲ್ಲಿ ಚಿರಪರಿತವಾದ ಹೆಸರು. ಮಗ ವಿಕಾಸ್ ಕಾಮತ್. ಈ ಪರಿವಾರದವರ ಅಂತರ್ಜಾಲ ತಾಣವೊಂದಿದೆ.

ಡಾ.ಜ್ಯೋತ್ಸ್ನಾ ಕಾಮತ್

ಜ್ಯೋತ್ಸ್ನಾ ೧೯೩೭ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಜನಿಸಿದರು. ತಂದೆ ಗಣೇಶರಾವ್, ವೃತ್ತಿಯಲ್ಲಿ ಪೋಸ್ಟ್ ಮಾಸ್ಟರ್ ಮತ್ತು ತಾಯಿ ಶಾರದಾಬಾಯಿ. ಜ್ಯೋತ್ಸ್ನಾ ಅವರ ವಿದ್ಯಾಭ್ಯಾಸವೆಲ್ಲ ಉತ್ತರ ಕನ್ನಡದಲ್ಲಿ ಮತ್ತು ಧಾರವಾಡಜಿಲ್ಲೆಯಲ್ಲಿ ನಡೆಯಿತು. ಕುಮಟಾದ ಕೆನೆರಾ ಕಾಲೇಜಿನಲ್ಲಿ ೧೯೫೭ರಲ್ಲಿ ಬಿ.ಎ. ಪದವಿ ಪಡೆದರು. ಸಂಸ್ಕೃತ ಹಾಗು ಇತಿಹಾಸದಲ್ಲಿ ವಿಶೇಷ ಒಲವಿತ್ತು. ಬಿ.ಎ.ಪದವಿಯ ನಂತರ 'ಡಿಪ್ಲೊಮ ಇನ್ ಎಜುಕೇಷನ್' ನಲ್ಲಿ ಒಂದು ವರ್ಷ ಅಧ್ಯಯನ ಮಾಡಿ ಧಾರವಾಡದ ವನಿತಾ ಹೈಸ್ಕೂಲ್ ನಲ್ಲಿ ಅಧ್ಯಾಪಕಿಯಾಗಿ ಸೇರಿದರು. ಮುಂದೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇತಿಹಾಸದಲ್ಲಿ ಎಂ.ಎ. ಪದವಿ ಗಳಿಸಿದರು.

ಡಾ.ಬಿ.ಎ.ಸಾಲೆತೊರೆ, ಡಾ.ಪಿ.ಬಿ.ದೇಸಾಯಿ ಮತ್ತು ಡಾ. ಜಿ ಎಸ್ ದೀಕ್ಷಿತ್ ರಂತಹ ಇತಿಹಾಸ ವಿದ್ವಾಂಸರ ಪ್ರಭಾವಕ್ಕೆ ಒಳಗಾಗಿದ್ದ ಜ್ಯೋತ್ಸ್ನಾ ಎರಡು ವರ್ಷ ಸಹಾಯಕ ಸಂಶೋಧಕಿಯಾಗಿ ಕೆಲಸ ನಿರ್ವಹಿಸಿದರು.

ಯುಪಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಜ್ಯೋತ್ಸ್ನಾರವರು, ೧೯೬೪ ರಲ್ಲಿ ಧಾರವಾಡ ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕಿಯಾಗಿ ಸೇರಿದರು. ಮುಂದೆ ಕೋಲ್ಕತ, ಜೈಪುರ್, ಮುಂಬಯಿ, ಮೈಸೂರು ಮತ್ತು ಬೆಂಗಳೂರು ನಗರಗಳ ಆಕಾಶವಾಣಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿ ಕೊನೆಗೆ ಬೆಂಗಳೂರು ಆಕಾಶವಾಣಿಯಲ್ಲಿ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಿ ೧೯೯೪ರಲ್ಲಿ ನಿವೃತ್ತಿ ಹೊಂದಿದರು.

ಅವರು ಆಕಾಶವಾಣಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಬಿತ್ತರಗೊಂಡ ಎರಡು ಕಾರ್ಯಕ್ರಮಗಳನ್ನು- 'ಗಾಂಧಿ-ಒಂದು ಪುನರ್ದರ್ಶನ' ಮತ್ತು 'ಹಿರಿಯರ ಯುಗಾದಿ ಮೇಳ'- ಪುಸ್ತಕರೂಪದಲ್ಲೂ ಪ್ರಕಟಿಸಿದರು.

ಕೃತಿಗಳು

  • ಸಂಸಾರದಲ್ಲಿ ಸ್ವಾರಸ್ಯ (ಪ್ರಬಂಧಗಳ ಸಂಕಲನ)
  • ಕರ್ನಾಟಕ ಶಿಕ್ಷಣ ಪರಂಪರೆ (ಶಿಕ್ಷಣ)
  • ಹೀಗಿದ್ದೇವೆ ನಾವು (ಹಾಸ್ಯ)
  • ಮಹಿಳೆ 'ಅಂದು-ಇಂದು'
  • ನೆನಪಿನಲ್ಲಿ ನಿಂತವರು
  • ನಗೆ ಕೇದಿಗೆ
  • ನಗೆ ನವಿಲು


೧೯೯೧ ರಲ್ಲಿ ಕರ್ನಾಟಕ ಸರ್ಕಾರವು ಜ್ಯೋತ್ಸ್ನಾ ಅವರಿಗೆ "ರಾಜ್ಯೋತ್ಸವ ಪ್ರಶಸ್ತಿ" ನೀಡಿ ಗೌರವಿಸಿದೆ. ಅವರ 'ಕರ್ನಾಟಕ ಶಿಕ್ಷಣ ಪರಂಪರೆ' ಕೃತಿಗೆ ಉತ್ತಮ ಸಂಶೋಧನಾ ಗ್ರಂಥವೆಂದು ಪರಿಗಣಿಸಿ ಕರ್ನಾಟಕ ಸಾಹಿತ್ಯ ಅಕೆಡಮಿಯಿಂದ ವಿಶೇಷ ಪುರಸ್ಕಾರ ದೊರೆತಿದೆ. ಕನ್ನಡ ಸಾಹಿತ್ಯ ಸಂಶೋದನೆಗಾಗಿ 'ಕಿಟ್ಟಲ್ ಪುರಸ್ಕಾರ' ದೊರೆತಿದೆ.

ಹೊರಗಿನ ಸಂಪರ್ಕಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.