ಛತ್ರಪತಿ ಶಿವಾಜಿ
ಛತ್ರಪತಿ ಶಿವಾಜಿ ಮಹಾರಾಜ ಅಥವಾ ಶಿವಾಜಿರಾಜೆ ಶಹಾಜಿರಾಜೆ ಭೋಂಸ್ಲೆ (ಫೆಬ್ರುವರಿ ೧೯, ೧೬೩೦/ಫೆಬ್ರುವರಿ ೧೯, ೧೬೨೭ - ಏಪ್ರಿಲ್ ೩, ೧೬೮೦) ಮರಾಠಾ ರಾಜ್ಯದ ಸ್ಥಾಪಕರು. ಇವರು ೧೬೩೦ರಲ್ಲಿ ಮಹಾರಾಷ್ಟ್ರ ರಾಜ್ಯದ ಪುಣೆಯ ಹತ್ತಿರವಿರುವ ಶಿವನೇರಿಎಂಬಲ್ಲಿ ಜನಿಸಿದರು. ಇವರು ೧೬೭೪ ರಲ್ಲಿ ಸ್ಥಾಪಿಸಿದ ಮರಾಠಾ ರಾಜ್ಯವು ೧೮೧೮ರ ವರೆಗೂ ರಾರಾಜಿಸಿತು.
ಛತ್ರಪತಿ ಶಿವಾಜಿ | |
---|---|
ರಾಜ/ಅಧಿಪತಿ | |
ರಾಜ್ಯಭಾರ | ಕ್ರಿ.ಶ.೧೬೭೪ - ೧೬೮೦ |
ಪಟ್ಟಧಾರಣೆ | ೬ ಜೂನ್ ೧೬೭೪ |
ಪೂರ್ಣ ಹೆಸರು | ಶಿವಾಜಿರಾಜೆ ಶಹಾಜಿರಾಜೆ ಭೋಸ್ಲೆ |
ಬಿರುದುಗಳು | ಛತ್ರಪತಿ |
ಹುಟ್ಟು | ಕ್ರಿ.ಶ.೧೬೨೭ ಅಥವಾ ೧೯ ಫೆಬ್ರವರಿ ೧೬೩೦ |
ಹುಟ್ಟುಸ್ಥಳ | ಶಿವನೇರಿದುರ್ಗ, ಶಿವನೇರಿ, ಅಹ್ಮದ್ ನಗರ ಸುಲ್ತಾನ್ ಪ್ರಾಂತ್ಯ (ಈಗ ಮಹಾರಾಷ್ಟ್ರ ರಾಜ್ಯ, ಭಾರತ) |
ಸಾವು | ೩ ಏಪ್ರಿಲ್ ೧೬೮೦ (ತೀರಿದಾಗ ವಯಸ್ಸು ೫೦-೫೩) |
ಸಾವಿನ ಸ್ಥಳ | ರಾಯಗಡ ಕೋಟೆ |
ಸಮಾಧಿ ಸ್ಥಳ | ರಾಯಗಡ |
ಉತ್ತರಾಧಿಕಾರಿ | ಛತ್ರಪತಿ ಸಂಭಾಜಿ ಮಹಾರಾಜ್ ಭೋಸ್ಲೆ |
Consort to | ಸಯಿಬಾಯಿ |
ಸಂತತಿ | ಸಂಭಾಜಿ |
ವಂಶ | ಮರಾಠ ವಂಶ |
ತಂದೆ | ಶಹಾಜಿ ಭೋಂಸ್ಲೆ |
ತಾಯಿ | ಜೀಜಾಬಾಯಿ |
ಸ್ವಾಭಿಮಾನಿ ರಾಷ್ಟ್ರನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು ಹಿಂದೂಸ್ಥಾನವನ್ನು ಒಗ್ಗೂಡಿಸಲು ಬಹುವಾಗಿ ಶ್ರಮಿಸಿದರು. ಕೊಂಕಣ ಭಾಗದಲ್ಲಿದ್ದ ಅನೇಕ ಕೋಟೆಗಳನ್ನು ಗೆದ್ದು ಕ್ರಮೇಣ ಇಡೀ ಪಶ್ಚಿಮಭಾರತವನ್ನು ತಮ್ಮ ಆಳ್ವಿಕೆಗೆ ತಂದರು. ಶಿವಾಜಿಯ ಶೌರ್ಯ, ಸಾಹಸ ರಾಷ್ಟ್ರಭಕ್ತ ಆಡಳಿತಗಾರರಿಗೆ ಎಂದೆಂದಿಗೂ ಪ್ರೇರಣಾದಾಯಿ.
ಛತ್ರಪತಿ ಶಿವಾಜಿ ಮಹಾರಾಜರ ಹೆಸರು ಭಾರತದ ಚರಿತ್ರೆಯಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವಂತದ್ದು. ಅಪ್ರತಿಮ ಯೋಧರೆನ್ನಿಸಿಕೊಂಡು ಹದಿಹರೆಯದಲ್ಲಿಯೇ ಯುದ್ಧಭೂಮಿಯಲ್ಲಿ ಪರಾಕ್ರಮ ಪ್ರದರ್ಶಿಸಿ ಮರಾಠ ರಾಜ್ಯ ಸ್ಥಾಪಿಸಿದ ಶಿವಾಜಿ ಮಹಾರಾಜ ಸ್ವಾಭಿಮಾನಿ ರಾಷ್ಟ್ರ ನಿರ್ವಣದ ಕನಸು ಕಂಡವರು.
ಮಹಾರಾಷ್ಟ್ರದ ಅಸ್ಮಿತೆ ಶಿವಾಜಿ ಭೋಂಸ್ಲೆ ಅವರ ಕುಟುಂಬದ ತಾಯಿಬೇರು ಕನ್ನಡನಾಡಿನಲ್ಲಿದೆ. ಇದರ ವಾಸ್ತವಾಂಶಗಳೇನೇ ಇದ್ದರೂ ಶಿವಾಜಿಗೆ ಕನ್ನಡ ಭೂಮಿ ಪ್ರೇರಣಾ ಸ್ಥಳವಾಗಿತ್ತೆಂಬುದು ನಿಜ. ಕರ್ನಾಟಕಕ್ಕೂ ಮರಾಠರಿಗೂ ರಾಜಕೀಯ ಒಡನಾಟ ಆರಂಭವಾಗಿದ್ದು 17ನೇ ಶತಮಾನದ ಮೊದಲರ್ಧದಲ್ಲಿ. ರಾಜ್ಯ ವಿಸ್ತರಣೆಯಲ್ಲಿ ಮೊಗಲರಿಗೂ ವಿಜಾಪುರದ ಆದಿಲ್ ಶಾಹಿಗಳಿಗೂ ಕರಾರು ಏರ್ಪಟ್ಟು(1636) ಕರ್ನಾಟಕದ ದಕ್ಷಿಣ ಭಾಗ ಹಾಗೂ ತಮಿಳುನಾಡಿನ ಕೆಲವು ಭಾಗಗಳ ಮೇಲೆ ಹಿಡಿತ ಸಾಧಿಸಲು ಹವಣಿಸುತ್ತಿದ್ದರು. ಇದರಿಂದಾಗಿ ವಿಜಾಪುರದ ಸುಲ್ತಾನರು ಈ ಪ್ರದೇಶಗಳಲ್ಲಿ ಆಗಿಂದ್ದಾಗ್ಗೆ ದಂಡಯಾತ್ರೆಗಳನ್ನು ನಡೆಸುತ್ತಲೇ ಇದ್ದರು. ಇಂತಹ ದಂಡಯಾತ್ರೆಗಳಲ್ಲಿ ಮರಾಠಿ ಸರದಾರರು ಮುಂಚೂಣಿಯಲ್ಲಿದ್ದು ಬಹುತೇಕ ಗೆಲುವುಗಳಿಗೆ ಕಾರಣರಾಗಿದ್ದರು. ಇಂತಹ ಧೈರ್ಯಶಾಲಿ ಮರಾಠಿ ಸರದಾರರದಲ್ಲಿ ಮಾಲೋಜಿ ಭೋಂಸ್ಲೆಯ ಮಗ ಶಹಾಜಿ ಭೋಂಸ್ಲೆ ಅವರೂ ಒಬ್ಬರು. ವಿಜಾಪುರದ ಅಣತಿಯಂತೆ ಸೈನ್ಯ ಮುನ್ನಡೆಸುತ್ತಿದ್ದ ಶಹಾಜಿ ಹಾಗೂ ರಣದುಲ್ಲಾ ಖಾನ್ರು ಬೆಂಗಳೂರು ಕೆಂಪೇಗೌಡರ ಸೈನ್ಯದೊಡನೆ ಮುಖಾಮುಖಿಯಾಗಿದ್ದು 1638ರ ಡಿಸೆಂಬರ್ ಮಾಹೆಯಲ್ಲಿ. ಜೋರು ಕಾಳಗದ ಬಳಿಕ ಸಂಧಿ ಏರ್ಪಟ್ಟು ಕೆಂಪೇಗೌಡ ತನ್ನ ರಾಜಧಾನಿಯನ್ನು ಮಾಗಡಿಗೆ ಸ್ಥಳಾಂತರಿಸಿದಾಗ ಬೆಂಗಳೂರು ಕೋಟೆ ವಿಜಾಪುರ ಸುಲ್ತಾನರ ಕೈವಶವಾಯಿತು. ಆಗ ಬೆಂಗಳೂರನ್ನು ಮಹಮ್ಮದ್ ಆದಿಲ್ ಷಾನಿಂದ ಜಹಗೀರು ಪಡೆದರು ಶಹಾಜಿ ಭೋಂಸ್ಲೆ.
ಬಾಲ್ಯ
ಬಹುಪಾಲು ಸಮಯವನ್ನು ಯುದ್ಧಗಳಲ್ಲಿಯೇ ಕಳೆಯುತ್ತಿದ್ದ ಶಹಾಜಿ ಅವರು ಜೀಜಾಬಾಯಿಯ ಲಗ್ನವಾಗಿದ್ದರು. ಇವರ ಮಗನಾಗಿ ಶಿವಾಜಿ ಹುಟ್ಟಿದ್ದು ಪುಣೆಯ ಸಮೀಪದ ಶಿವನೇರಿ ದುರ್ಗದಲ್ಲಿ. ಬೆಂಗಳೂರನ್ನು ಜಹಗೀರಾಗಿ ಪಡೆದು ಅದನ್ನು ಮುಖ್ಯ ಸೇನಾನೆಲೆಯನ್ನಾಗಿ ಮಾಡಿಕೊಂಡು ದ್ವಿತೀಯ ಪತ್ನಿ ಸುಧಾಬಾಯಿಯೊಡನೆ ವಾಸಿಸುತ್ತಿದ್ದರು. ಇಲ್ಲಿ ಶಹಾಜಿ ಜಾಗೀರುದಾರರಾಗಿದ್ದರೂ ಸ್ವತಂತ್ರ ರಾಜರಂತೆಯೇ ಆಡಳಿತ ನಡೆಸುತ್ತಿದ್ದರು. ತಮ್ಮದೇ ಆದ ನಾಣ್ಯಗಳನ್ನು ಠಂಕಿಸುತ್ತಿದ್ದರು. ಕೋಟೆ ಪ್ರದೇಶದಲ್ಲಿ ಗೌರಿ ಮಹಲ್ ಎಂಬ ಸುಸಜ್ಜಿತ ಮನೆಯನ್ನು ನಿರ್ವಿುಸಿದ್ದರು. ನಂದಿಬೆಟ್ಟ ಆಗಲೇ ಶಹಾಜಿ ಬೇಸಿಗೆ ರಾಜಧಾನಿಯಾಗಿತ್ತು. ಶಿವಾಜಿಯ ಅಣ್ಣ ಸಂಬಾಜಿ ಕೋಲಾರ- ದೊಡ್ಡಬಳ್ಳಾಪುರ ಪ್ರದೇಶಗಳ ಆಡಳಿತ ವ್ಯವಸ್ಥೆ ನೋಡಿಕೊಳ್ಳುತ್ತಿದ್ದರು.
ಯುದ್ಧಕಲೆ
ತನ್ನ 12ನೇ ವಯಸ್ಸಿನವರೆಗೆ ಬೆಂಗಳೂರಿನಲ್ಲೇ ವಾಸವಿದ್ದ ಶಿವಾಜಿಗೆ ಆರಂಭಿಕ ಶಿಕ್ಷಣವನ್ನು ಕೊಟ್ಟವರು ಅಣ್ಣ ಸಂಬಾಜಿ. ನಂತರ ಶಿವನೇರಿ ದುರ್ಗಕ್ಕೆ ಹಿಂತಿರುಗಿದ ಶಿವಾಜಿಗೆ ಪೂರ್ಣಪ್ರಮಾಣದ ಯುದ್ಧ ಕೌಶಲವನ್ನು ಧಾರೆ ಎರೆದವರು ದಾದಾಜಿ ಕೊಂಡದೇವ. ಕತ್ತಿವರಸೆ, ಕುದುರೆ ಸವಾರಿ, ಯುದ್ಧಕಲೆಗಳನ್ನು ಕರಗತ ಮಾಡಿಕೊಂಡ ಶಿವಾಜಿ 19ನೇ ವಯಸ್ಸಿಗೆ ತೋರಣದುರ್ಗ ವಶಪಡಿಸಿಕೊಂಡು ಮಹತ್ವಾಕಾಂಕ್ಷೆಯ ಹೆಜ್ಜೆಗಳನ್ನು ಇಡಲು ಆರಂಭಿಸಿದ್ದರು. ಎಳೆಯ ವಯಸ್ಸಿನಿಂದಲೇ ತಾಯಿ ಜೀಜಾಬಾಯಿಯಿಂದ ಜೀವನ ಮೌಲ್ಯಗಳ ಶಿಕ್ಷಣ ಪಡೆದಿದ್ದ ಶಿವಾಜಿ ಸಂತ ರಾಮದಾಸರ ಪರಮಭಕ್ತರಾಗಿದ್ದರು..
ಶಹಾಜಿ ಜಾಗೀರು ನೋಡಿಕೊಳ್ಳುತ್ತಿದ್ದ ದಾದಾಜಿ ಕೊಂಡದೇವ ಅವರಿಂದ ಪರಿಪೂರ್ಣ ಸೈನಿಕ ಶಿಕ್ಷಣ ಪಡೆದಿದ್ದ ಶಿವಾಜಿ ಕಾಡುಮೇಡುಗಳಲ್ಲಿ ಸುತ್ತಾಡಿ ಅನುಭವ ಪಡೆದರು. ಪಶ್ಚಿಮ ಘಟ್ಟಗಳ ಮಾವಳರೆಂಬ ಗಿರಿಜನರನ್ನು ಕಂಡ ಶಿವಾಜಿ ಅವರ ಧೈರ್ಯ ಸಾಹಸಗಳನ್ನು ನೋಡಿ ಅವರನ್ನೆಲ್ಲಾ ಸೇರಿಸಿ ಬಲವಾದ ಪಡೆ ಕಟ್ಟಲು ಆರಂಭಿಸಿದರು. ಪ್ರಮುಖ ಮರಾಠ ನಾಯಕರೂ ಇವರೊಡನೆ ಕೈ ಜೋಡಿಸಿದರು. ತಂದೆ ಜಹಗೀರಾದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಸಂದರ್ಭದಲ್ಲೆ ಅದೇ ಪ್ರದೇಶಕ್ಕೆ ಸನಿಹವಿದ್ದ ಮರೆಯಲಾಗದ ಮಹಾಸಾಮ್ರಾಜ್ಯವಾದ ವಿಜಯನಗರವನ್ನು(ಆ ವೇಳೆಗೆ ಪತನವಾಗಿತ್ತು) ಅದರ ಅವಶೇಷಗಳನ್ನು ಕಂಡು ಬಂದಿದ್ದರು ಯುವಕ ಶಿವಾಜಿ.
ವಿವಾಹ
ತಾಯಿ ಜೀಜಾಬಾಯಿ ಹಾಗೂ ಗುರು ಕೊಂಡದೇವರೊಂದಿಗೆ ಬೆಂಗಳೂರಿಗೆ ಬಂದ ಶಿವಾಜಿ ವಿವಾಹ ನೆರವೇರಿದ್ದು 1640-42ರ ಸುಮಾರಿಗೆ. ಆಗ ಬೆಂಗಳೂರು ಕೋಟೆಯೊಳಗೆ ಇದ್ದ ಗೌರಿಮಹಲ್ನಲ್ಲಿ ಶಿವಾಜಿ ಮೊದಲ ವಿವಾಹ ನಿಂಬಾಳ್ಕರ್ ಮನೆತನದ ಸಾಯಿಬಾಯಿ ಜೊತೆಗೆ ವಿಜೃಂಭಣೆಯಿಂದ ಜರುಗಿತು. ಪರದೇಶಿಗಳ ಆಳ್ವಿಕೆಯಿಂದ ನಲುಗಿಹೋಗಿದ್ದ ಹಿಂದೂಸ್ಥಾನವನ್ನು ಒಗ್ಗೂಡಿಸುವ ಮಹತ್ವದ ನಿರ್ಧಾರಕ್ಕೆ ಬಂದ ಶಿವಾಜಿ ಮೊದಲಿಗೆ ಕೊಂಕಣ ಭಾಗದಲ್ಲಿದ್ದ ಅನೇಕ ಕೋಟೆಗಳನ್ನು ಗೆದ್ದರು. ಯುದ್ಧಕೌಶಲದಿಂದ ಹಲವಾರು ಯುದ್ಧಗಳಲ್ಲಿ ವಿಜಯ ಸಾಧಿಸಿ 1674ರಲ್ಲಿ ಮರಾಠ ರಾಜ್ಯಕ್ಕೆ ನಾಂದಿಹಾಡಿದರು.
ಕಿರೀಟಧಾರಣೆ

1674ರಲ್ಲಿ ರಾಯಘಡದಲ್ಲಿ ಕಿರೀಟಧಾರಣೆಯ ಬಳಿಕ ಛತ್ರಪತಿ ಶಿವಾಜಿ ಮಹಾರಾಜ್ ಇಡೀ ಪಶ್ಚಿಮಭಾರತವನ್ನು ತಮ್ಮ ಆಳ್ವಿಕೆಗೆ ತಂದರು. ಸ್ವಾಭಿಮಾನಿ ರಾಷ್ಟ್ರನಿರ್ವಣಕ್ಕೆ ಹೋರಾಡಿದ ಶಿವಾಜಿ 1680ರಲ್ಲಿ ಕಾಲವಾದರೂ ಅವರು ಸ್ಥಾಪಿಸಿದ ಮರಾಠರಾಜ್ಯ 1818ರವರೆಗೆ ಉಜ್ವಲವಾಗಿ ಬೆಳಗಿತು.
ಗೆಲುವಿನ ಮೂಲ

ಒಂದು ಸಲ ಶಿವಾಜಿ ಮಹಾರಾಜರು ಒಂದು ಕೋಟೆಯಿಂದ ಮತ್ತೊಂದು ಕೋಟೆಗೆ ಹೊಗುವಾಗ ದಾರಿ ತಪ್ಪಿದರು. ಆಗ ಅವರು ಒಂದು ಬೆಟ್ಟ ಏರಿ ಯಾವುದಾದರು ಹಳ್ಳಿ ಇದೆಯಾ ಎಂದು ನೋಡಿದರು, ಆದರೆ ಯಾವ ಹಳ್ಳಿಯೂ ಕಾಣಿಸಲಿಲ್ಲ. ರಾತ್ರಿಯಾಗುತ್ತಿತ್ತು. ಅವರು ಬೆಟ್ಟ ಇಳಿದು ಬರುವಾಗ ದೂರದಲ್ಲಿ ದೀಪವೊಂದು ಮಿಣುಕುವುದು ಕಾಣಿಸುತ್ತಿತ್ತು. ಅದೇ ದಾರಿಯಲ್ಲಿ ಹೋದಾಗ ಅವರು ಒಂದು ಗುಡಿಸಲಿನ ಬಳಿ ಬಂದರು.
ಗುಡಿಸಲಿನಲ್ಲಿ ಒಬ್ಬ ವೃದ್ಧ ಮಹಿಳೆ ಇದ್ದಳು. ಅವಳು ಮಹಾರಾಜರನ್ನು ಒಬ್ಬ ಸೈನಿಕನಿರಬೇಕೆಂದು ತಿಳಿದು ಸ್ವಾಗತಿಸಿದಳು. ಅವನು ಹಸಿದಿರುವನೆಂದು ಅರಿತ ಮಹಿಳೆಯು ಕೈ ಕಾಲು ಮುಖ ತೊಳೆಯಲು ನೀರು ನೀಡಿದಳು ಮತ್ತು ವಿಶ್ರಮಿಸಲು ಚಾಪೆಯನ್ನು ಹಾಸಿದಳು. ಅವನು ವಿಶ್ರಮಿಸಿದ ನಂತರ ಮಹಿಳೆಯು ಬಿಸಿ ಬಿಸಿ ಅನ್ನ ಮತ್ತು ಸಾಂಬಾರನ್ನು ತಿನ್ನಲು ನೀಡಿದಳು.
ತುಂಬಾ ಹೊಟ್ಟೆ ಹಸಿದಿದ್ದ ಶಿವಾಜಿಯು ತಕ್ಷಣ ತಿನ್ನಲು ಬಿಸಿ ಅನ್ನಕ್ಕೆ ಕೈ ಹಾಕಿದನು. ಬಿಸಿ ತಡೆಯಲಾರದೆ ಚೀರಿದನು ಮತ್ತು ಸ್ವಲ್ಪ ಅನ್ನವನ್ನು ಚಲ್ಲಿದನು. ಇದನ್ನು ನೋಡಿದ ಮಹಿಳೆಯು ಹೇಳಿದಳು, "ಅರೇ ನೀನು ಸಹ ನಿನ್ನ ಸ್ವಾಮಿ ಶಿವಾಜಿಯಂತೆ ಗಡಿಬಿಡಿ ಮಾಡುತ್ತೀಯ. ಅದಕ್ಕೆ ಕೈ ಸುಟ್ಟುಕೊಂಡೆ ಮತ್ತು ಸ್ವಲ್ಪ ಅನ್ನವನ್ನು ಬೀಳಿಸಿದೆ".
ಶಿವಾಜಿಯು ಆಶ್ಚರ್ಯದಿಂದ, "ನನ್ನ ಸ್ವಾಮಿ ಶಿವಾಜಿಯಲ್ಲಿ ತಾಳ್ಮೆ ಇಲ್ಲ ಎಂದು ನೀನು ಯಾಕೆ ಹೇಳುತ್ತೀಯ?" ಎಂದು ಕೇಳಿದನು.
ಆಗ ಮಹಿಳೆಯು ಹೇಳಿದಳು, "ನೋಡು ಮಗನೆ, ಶಿವಾಜಿಯು ತನ್ನ ಗಡಿಬಿಡಿ ಇಂದಾಗಿ ಶತ್ರುಗಳ ಸಣ್ಣ ಕೋಟೆಯನ್ನು ಗೆಲ್ಲುವ ಬದಲಾಗಿ ದೊಡ್ಡ ದೊಡ್ಡ ಕೋಟೆಗಳನ್ನು ಗೆಲ್ಲಲು ಹೊಗುತ್ತಿದ್ದಾನೆ ಮತ್ತು ಇದರಿಂದಾಗಿ ಅವನು ತನ್ನ ವೀರ ಸೈನಿಕರನ್ನು ಕಳೆದುಕೊಳ್ಳುತ್ತಿದ್ದಾನೆ. ಅದರ ಬದಲಿಗೆ ತಾಳ್ಮೆಯಿಂದ ಮೊದಲು ಸಣ್ಣ ಸಣ್ಣ ಕೋಟೆಗಳನ್ನು ಗೆದ್ದರೆ ಅವನ ಬಲವೂ ಹೆಚ್ಚುತ್ತದೆ ಮತ್ತು ಸೈನಿಕರೂ ಉಳಿಯುತ್ತಾರೆ. ಅದೇ ರೀತಿ ನೀನು ಮೊದಲು ಬದಿಯಲ್ಲಿರುವ ತಣ್ಣಗಿರುವ ಅನ್ನವನ್ನು ಮೊದಲು ತಿನ್ನು".
ಶಿವಾಜಿಯು ಕೂಡಲೇ ವೃದ್ಧ ಮಹಿಳೆಯ ಮಾತಿನ ಹಿಂದಿರುವ ಅರ್ಥವನ್ನು ಅರಿತನು ಮತ್ತು ಯಾವುದೇ ತೀರ್ಮಾನವನ್ನು ಗಡಿಬಿಡಿಯಲ್ಲಿ ಮಾಡಬಾರದೆಂದು ಅರಿತನು.
ಗುರುಕಾಣಿಕೆ
೧೭ನೇ ಶತಮಾನದಲ್ಲಿ, ಶಿವಾಜಿ ಪೂರ್ವ ಭಾರತದಲ್ಲಿ ರಾಜ್ಯಭಾರ ಮಾಡುತ್ತಿದ್ದರು. ಅವರ ತಾಯಿ ಜೀಜಾಮಾತೆಯು ಶಿವಾಜಿಗೆ ಸಣ್ಣ ವಯಸ್ಸಿನಿಂದಲೂ ನಾಮಜಪವನ್ನು ಮಾಡಿಸುತ್ತಿದ್ದಳು. ಒಬ್ಬ ರಾಜನಿಗೆ ಬೇಕಾದ ಎಲ್ಲ ಯುದ್ಧಕಲೆಗಳನ್ನೂ ಜೀಜಾಮಾತೆಯು ಶಿವಾಜಿಗೆ ಕಲಿಸಿದ್ದಳು. ಜೀಜಾಮಾತೆ ಮತ್ತು ಗುರು ರಾಮದಾಸ ಸ್ವಾಮಿಗಳ ಮಾರ್ಗದರ್ಶನದಲ್ಲಿ ಶಿವಾಜಿಯು ಆದರ್ಶ ರಾಜನಾದನು. ಶಿವಾಜಿಯು ಧೈರ್ಯದಿಂದ ಮರಾಠರನ್ನು ಮೊಗಲರ ವಿರುದ್ಧ ಮುನ್ನಡೆಸಿದನು. ಶಿವಾಜಿಯು ಆದರ್ಶ ರಾಜ್ಯವನ್ನು ಸ್ಥಾಪಿಸಿದನು. ಶಿವಾಜಿಯು ರಾಜ್ಯವನ್ನು ಧೈರ್ಯ, ಸಹನೆ ಮುಂತಾದ ಆಧ್ಯಾತ್ಮಿಕ ಗುಣಗಳ ಬಲದಲ್ಲಿ ಸ್ಥಾಪಿಸಿದ್ದನು.
ಮರಣ
ಶಿವಾಜಿ ಮಹಾರಾಜರು 1680 ಏಪ್ರಿಲ್ 14 ಮರಣ ಹೊಂದಿದರು.


N