ವಿಕ್ರಮ್ ಸಾರಾಭಾಯಿ
ವಿಕ್ರಮ್ ಸಾರಾಭಾಯಿ (೧೨ ಆಗಸ್ಟ್ ೧೯೧೯ - ೨೬ ಡಿಸೆಂಬರ್ ೧೯೭೧) ಭಾರತದ ವಿಜ್ಞಾನಿ ಮತ್ತು ಬಾಹ್ಯಾಕಾಶ ಸಂಶೋಧಕರು. ಇವರನ್ನು ಭಾರತದ ಬಾಹ್ಯಾಕಾಶ ವಿಜ್ಞಾನದ ಪಿತಾಮಹ ಎಂದು ಕರೆಯುತ್ತಾರೆ. [3]
ವಿಕ್ರಂ ಅಂಬಾಲಾಲ್ ಸಾರಭಾಯಿ | |
---|---|
![]() ಡಾ. ವಿಕ್ರಂ ಸಾರಾಭಾಯಿ | |
ಜನನ | 12 ಆಗಸ್ಟ್ 1919[1][2] ಅಹಮದಾಬಾದ್, ಭಾರತ |
ಮರಣ | 31 ಡಿಸೆಂಬರ್ 1971 ಹ್ಯಾಲಿಕಾನ್ ಕಾಸ್ಲ್, ಕೋವಳಮ್, ತಿರುವನಂತಪುರ, ಕೇರಳ, ಭಾರತ | (ವಯಸ್ಸು 52)
ವಾಸಸ್ಥಳ | ಭಾರತ |
ರಾಷ್ಟ್ರೀಯತೆ | ಭಾರತೀಯ |
ಕಾರ್ಯಕ್ಷೇತ್ರ | ಭೌತಶಾಸ್ತ್ರ |
ಸಂಸ್ಥೆಗಳು | ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ ಭೌತಶಾಸ್ರ ಸಂಶೋಧನಾ ಪ್ರಯೋಗಾಲಯ |
ಅಭ್ಯಸಿಸಿದ ವಿದ್ಯಾಪೀಠ | ಕೆಂಬ್ರಿಡ್ಜ್ ವಿಶ್ವವಿದ್ಯಾಲಯ |
ಡಾಕ್ಟರೇಟ್ ಸಲಹೆಗಾರರು | ಸರ್.ಸಿ.ವಿ.ರಾಮನ್ |
ಪ್ರಸಿದ್ಧಿಗೆ ಕಾರಣ | ಭಾರತೀಯ ಅಂತರಿಕ್ಷ ಕಾರ್ಯಕ್ರಮ ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆ ,ಆಹಮದಾಬಾದ್ |
ಗಮನಾರ್ಹ ಪ್ರಶಸ್ತಿಗಳು | ಪದ್ಮಭೂಷಣ (1966) ಪದ್ಮವಿಭೂಷಣ (ಮರಣೋತ್ತರ) (೧೯೭೨) |
ಸಂಗಾತಿ | ಮೃಣಾಲಿನಿ ಸಾರಾಭಾಯಿ |
ಜನನ
ಇವರ ಜನನ ಗುಜರಾತಿನ ಅಹ್ಮದಾಬಾದ್ನ ಶ್ರೀಮಂತ ಕುಟುಂಬದಲ್ಲಿ. ತಂದೆ ಅಂಬಾಲಾಲ್ ಸಾರಾಭಾಯ್. ತಾಯಿ ಸರಳಾದೇವಿ. ಚಿಕ್ಕಂದಿನಿಂದಲೇ ಬುದ್ಧಿವಂತನಾಗಿದ್ದ ಬಾಲಕ ಸಾಹಸಪ್ರಿಯ ಕೂಡಾ. ಇವರ ಮನೆಗೆ ಬರುತ್ತಿದ್ದ ಮೋತಿಲಾಲ್ ನೆಹರು, ಜವಾಹರಲಾಲ್ ನೆಹರು, ಸಿ.ವಿ.ರಾಮನ್ ಮುಂತಾದ ಮಹನೀಯರುಗಳ ವ್ಯಕ್ತಿತ್ವ ಈ ಧೀಮಂತ ಬಾಲಕನ ಮೇಲೆ ಸಾಕಷ್ಟು ಪ್ರಭಾವ ಬೀರಿತು.
ವಿದ್ಯಾಭ್ಯಾಸ
ಭಾರತದಲ್ಲಿ ಕಾಲೇಜು ವಿದ್ಯಾಭ್ಯಾಸ ಮುಗಿಸಿದರು. ತಮ್ಮ ೨೦ನೇ ವಯಸ್ಸಿನಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಿಂದ 'ಪ್ರಕೃತಿವಿಜ್ಞಾನ'ದಲ್ಲಿ ಟ್ರೈಪಾಸ್ ಎಂಬ ಪರೀಕ್ಷೆಯಲ್ಲಿ ಉತ್ತೀರ್ಣರಾದರು.೧೯೪೭ರಲ್ಲಿ ಕೇಂಬ್ರಿದ್ಜ್ನಿಂದ ಪಿಹೆಚ್ಡಿ ಪದವಿ ಪಡೆದರು.
ಸಂಶೋಧನೆ
ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ ವಿಜ್ಞಾನಿ ಸಿ.ವಿ.ರಾಮನ್ರೊಂದಿಗೆ ಸಂಶೋಧನೆಯಲ್ಲಿ ತೊಡಗಿದರು. ವಿಶ್ವ ಕಿರಣಗಳ ತೀಕ್ಷ್ಣತೆಯಲ್ಲುಂಟಾಗುವ ಬದಲಾವಣೆಗಳ ಬಗ್ಗೆ ಸಂಶೋಧನೆ ನಡೆಸಿದರು ಹಾಗೂ ಅವುಗಳ ಕಾಲ ತೀಕ್ಷ್ಣತೆ ದಿನಕ್ಕೆ ೨ ಬಾರಿ ಬದಲಾಗುವುದನ್ನು ಕಂಡುಹಿಡಿದು,ಅದರ ಬಗ್ಗೆ ಪ್ರಬಂಧ ಬರೆದು ಪ್ರಕಟಿಸಿದರು.ಈ ವಿಚಾರ ಬಾಹ್ಯಾಕಾಶ ಸಂಶೋಧನೆಗಳಿಗೆ ಸಹಾಯಕವಾಯಿತು. (ವಸ್ತುಗಳನ್ನು ಒಡೆದಾಗ ದೊರೆಯುವ ಋಣ ವಿದ್ಯುತ್ಕಣ,ಧನ ವಿದ್ಯುತ್ಕಣ,ವಿದ್ಯುತ್ ಹೀನಕಣಗಳಲ್ಲದೆ, ಬೇರೆ ರೀತಿಯ ಬೇರೆ ತೂಕದ ಮೆಸಾನ್ ಕಣಗಳೂ ಇರುತ್ತವೆ. ಇವು ಕೂಡ ವಿಶ್ವಕಿರಣಗಳಿಂದ ಉತ್ಪತ್ತಿಯಾಗುತ್ತವೆ ಹಾಗೂ ನಿಮಿಷಕ್ಕೆ ೬೦ರಂತೆ ಪ್ರತಿಯೊಬ್ಬನ ದೇಹವನ್ನು ಹಾದು ಹೋಗುತ್ತವೆ.)
ಉದ್ಯೋಗ,ಸಾಧನೆ
- ೧೯೬೬ರಲ್ಲಿ ಅಣು ಶಕ್ತಿ ಆಯೋಗದ ಅಧ್ಯಕ್ಷರಾಗಿದ್ದ ಹೋಮಿ ಜಹಾಂಗೀರ್ ಭಾಭಾ ನಿಧನ ಹೊಂದಿದಾಗ, ಅವರ ಉತ್ತರಾಧಿಕಾರಿಯಾಗಿ ನೇಮಕಗೊಂಡವರು ವಿಕ್ರಮ್ ಸಾರಾಭಾಯಿ. ಈ ಸ್ಥಾನದಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ ಅವರು ಒಳ್ಳೆಯ ಆಡಳಿತಗಾರರೆಂದು ಹೆಸರು ಪಡೆದರು. ಅಧ್ಯಕ್ಷ ಸ್ಥಾನದಲ್ಲಿದ್ದು ಕೊಂಡೇ ಅಹರ್ನಿಶಿ ಸಂಶೋಧನೆಗಳನ್ನು ಮಾಡಿದರು.
- ಅಹ್ಮದಾಬಾದಿನಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸಿ,ಕೆಲಕಾಲ ಅದರ ನಿರ್ದೇಶಕರಾಗಿದ್ದರು. ೧೯೫೫ರಲ್ಲಿ ಕಾಶ್ಮೀರದ ಗುಲ್ಮಾರ್ಗ್ನಲ್ಲಿ ವಿಶ್ವಕಿರಣಗಳ ಸಂಶೋಧನಾ ಕೇಂದ್ರ ಸ್ಥಾಪಿಸಿದರು. ತಮ್ಮ ೪೦ನೇ ವಯಸ್ಸಿನಲ್ಲಿ ಭಾರತೀಯ ವಿಜ್ಞಾನ ಕಾಂಗ್ರೆಸ್ ನಡೆಸಿದ ಸಮ್ಮೇಳನವೊಂದರಲ್ಲಿ ಭೌತ ವಿಜ್ಞಾನ ವಿಭಾಗದ ಅಧ್ಯಕ್ಷತೆ ವಹಿಸಿದ್ದರು. ಇಷ್ಟೇ ಅಲ್ಲದೆ ಹಲವು ಸಂಘ,ಸಂಸ್ಥೆಗಳನ್ನು ಹುಟ್ಟು ಹಾಕಿದ್ದರು. ಅವು ಹೀಗಿವೆ:
- ಗ್ರೂಪ್ ಫಾರ್ ಇಂಪ್ರೂವ್ಮೆಂಟ್ ಆಫ್ ಸೈನ್ಸ್ ಎಜುಕೇಷನ್
- ನೆಹರೂ ಫೌಂಡೇಷನ್
- ಕಮ್ಯೂನಿಟಿ ಸೈನ್ಸ್ ಸೆಂಟರ್
- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್
- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ
ಪುರಸ್ಕಾರಗಳು
- ೧೯೬೨-ಭಾರತ ಸರ್ಕಾರದ ಭಾಟ್ನಾಗರ್ ಸ್ಮಾರಕ ಪಾರಿತೋಷಕ
- ೧೯೬೬-ಪದ್ಮಭೂಷಣ
- ೧೯೭೨-(ಮರಣೋತ್ತರ)ಪದ್ಮವಿಭೂಷಣ
ವ್ಯಕ್ತಿತ್ವ
ವಿಕ್ರಮ್ ಸಾರಾಭಾಯಿಯವರು ಎಲ್ಲಾ ಮನುಷ್ಯರನ್ನೂ ಸಮಾನವಾಗಿ ನೋಡುವ ವಿಶಾಲ ಮನೋಭಾವ ಹೊಂದಿದ್ದರು. ವ್ಯವಸಾಯ, ಕೈಗಾರಿಕೆ, ಹವಾಮಾನ ವೀಕ್ಷಣೆ, ಖನಿಜ ಶೋಧನೆ-ಹೀಗೆ ಎಲ್ಲಾವುದಕ್ಕೂ ಅಣುಶಕ್ತಿ ಕೇಂದ್ರಗಳು ಉಪಯೋಗವಾಗಬೇಕು ಎಂಬುದು ಇವರ ಅಭಿಪ್ರಾಯ ವಾಗಿತ್ತು. ಹೋಮಿಭಾಭಾ ಕಂಡ ಕನಸನ್ನು ನನಸಾಗಿಸುವಲ್ಲಿ ಅಪಾರ ಪರಿಶ್ರಮ ವಹಿಸಿದ್ದಾರೆ. ಒಟ್ಟಾರೆ ಅವರು ಭಾರತ ದೇಶದ ಒಬ್ಬ ದೊಡ್ಡ ವಿಜ್ಞಾನಿ.
ಉಲ್ಲೇಖಗಳು
- Vikram Sarabhai Biography mapsofindia.com
- , Vikram Sarabhai iloveindia.com
- https://www.prajavani.net/news/article/2017/08/12/513054.html. Retrieved 12 ಆಗಸ್ಟ್ 2019. Check date values in:
|accessdate=
(help); Missing or empty|title=
(help)