ರಾಷ್ಟ್ರೀಯ ಸ್ವಯಂಸೇವಕ ಸಂಘ

ರಾಷ್ಟ್ರೀಯ ಸ್ವಯಂಸೇವಕ ಸಂಘ (ಸಂಕ್ಷಿಪ್ತವಾಗಿ: ಆರ್ ಎಸ್ ಎಸ್) ಭಾರತದ ಹಾಗು ವಿಶ್ವದ ಅತಿ ದೊಡ್ದ ಸ್ವಯಂಸೇವಿ ಸಂಘಟನೆ. ಸೆಪ್ಟೆಂಬರ್ ೨೭, ೧೯೨೫ವಿಜಯದಶಮಿಯ ದಿನ ಮಹಾರಾಷ್ಟ್ರ ರಾಜ್ಯದ ನಾಗಪುರದಲ್ಲಿ ಡಾ. ಕೇಶವ ಬಲಿರಾಂ ಹೆಡಗೆವಾರ್ ಈ ಸಂಘಟನೆಯನ್ನು ಹುಟ್ಟುಹಾಕಿದರು. ಹಿಂದೂ ರಾಷ್ಟ್ರೀಯವಾದ ಬಲಪಂಥೀಯ ಸಂಘಟನೆಯೆಂದು ಸಾಮಾನ್ಯವಾಗಿ ಪರಿಗಣಿಸಲ್ಪಡುವ ಈ ಸಂಸ್ಥೆ ಭಾರತದ ನಾಗಪುರದಲ್ಲಿ ತನ್ನ ಮುಖ್ಯ ಕಾರ್ಯಾಲಯ ಹೊಂದಿದೆ. ಹಿಂದೂ ಸಂಘಟನೆ ಮತ್ತು ಐಕ್ಯತೆಯನ್ನು ತನ್ನ ಗುರಿಯನ್ನಾಗಿ ಹೊಂದಿರುವ ಈ ಸಂಸ್ಥೆಗೆ ಹೊಂದಿಕೊಂಡಿರುವ ಇತರ ಸಂಸ್ಥೆಗಳನ್ನು ಒಟ್ಟಾಗಿ ಸೇರಿಸಿ ಸಾಮಾನ್ಯವಾಗಿ "ಸಂಘ ಪರಿವಾರ" ಎಂದು ಕರೆಯಲಾಗುತ್ತದೆ. ಸುಮಾರು ಆರು ವರ್ಷ ಭಾರತದ ಆಡಳಿತ ನೆಡಸಿದ ಭಾರತೀಯ ಜನತಾ ಪಕ್ಷ ಈ ಸಂಸ್ಥೆಯ ರಾಜಕೀಯ ಮುಖ ಎಂದು ಹಲವರು ಪರಿಗಣಿಸುತ್ತಾರೆ.

ಸಂಘಟನೆ

ಒಂದು ಅಂದಾಜಿನ ಪ್ರಕಾರ ರಾಷ್ಟ್ರೀಯ ಸ್ವಯಂಸೇವಕ ಸಂಘವು ಸದಸ್ಯರ ಸಂಖ್ಯೆಯು ೨೫ ರಿಂದ ೬೦ ಲಕ್ಷಗಳಸ್ಟಾಗಿರುತ್ತದೆ.[1]

ಸರಸಂಘಚಾಲಕರು

೧೯೩೯ರಲ್ಲಿ ತೆಗೆದ ಚಿತ್ರದಲ್ಲಿ ಡಾ ಹೆಡಗೆವಾರ, ಗುರುಜಿ ಗೊಲ್ವಲ್ಕರ ಸೇರಿದಂತೆ ಆಗಿನ ಸಂಘದ ಹಿರಿಯ ನಾಯಕರು

ಈ ಸಂಘಟನೆಯ ರಾಷ್ಟ್ರೀಯ ಮಟ್ಟದ ಮುಖ್ಯಸ್ಥರನ್ನು ಸರಸಂಘಚಾಲಕ ಎಂದು ಕರೆಯುತ್ತಾರೆ. ಸಂಸ್ಥಾಪನೆಯ ದಿನದಿಂದ ಈಗಿನವರೆಗಿನ ಸರಸಂಘಚಾಲಕರ ಪಟ್ಟಿಯನ್ನು ಈ ಕೆಳಗೆ ಕೊಡಲಾಗಿದೆ.

  • ಡಾ. ಕೇಶವ ಬಲಿರಾಂ ಹೆಡಗೆವಾರ್, ಸಂಸ್ಥಾಪಕರು, ೧೯೨೫-೧೯೩೦ ಮತ್ತು ೧೯೩೧-೧೯೪೦, ಇವರನ್ನು ಡಾಕ್ಟರ್ ಜೀ ಎಂತಲೂ ಕರೆಯಲಾಗುತ್ತದೆ.
  • ಡಾ. ಲಕ್ಷ್ಮಣ ವಾಮನ ಪರಾಂಜಪೆ, ೧೯೩೦-೧೯೩೧, ಈ ಸಂಧರ್ಭದಲ್ಲಿ ಡಾಕ್ಟರ್ ಜೀ ಅರಣ್ಯ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಜೈಲಿನಲ್ಲಿದ್ದರು.
  • ಶ್ರೀ ಮಾಧವ ಸದಾಶಿವ ಗೊಲ್ವಾಳ್ಕರ್, ೧೯೪೦-೧೯೭೩, ಇವರನ್ನು ಗುರೂಜಿ ಎಂತಲೂ ಕರೆಯಲಾಗುತ್ತದೆ.
  • ಶ್ರೀ ಮಧುಕರ್ ದತ್ತಾತ್ರೇಯ ದೇವರಸ್, ೧೯೭೩-೧೯೯೩, ಇವರನ್ನು ಬಾಳಾಸಾಹೇಬ್ ಎಂತಲೂ ಕರೆಯಲಾಗುತ್ತದೆ.
  • ಪ್ರೊ. ರಾಜೇಂದ್ರ ಸಿಂಘ್, ೧೯೯೩-೨೦೦೦, ಇವರನ್ನು ರಜ್ಜುಭೈಯ್ಯಾ ಎಂತಲೂ ಕರೆಯಲಾಗುತ್ತದೆ.
  • ಶ್ರೀ ಕುಪ್ಪಹಳ್ಳಿ ಸೀತಾರಾಮಯ್ಯ ಸುದರ್ಶನ್, ೨೦೦೦-೨೦೦೯.
  • ಡಾ. ಮೋಹನ ಮಧುಕರ ಭಾಗವತ, ೨೧ ಮಾರ್ಚ್ ೨೦೦೯ ರಿಂದ ಇಂದಿನವರೆಗೂ.

ಶಾಖಾ

ಈ ಶಬ್ದಕ್ಕೆ ಕನ್ನಡದಲ್ಲಿ ಶಾಖೆ ಎಂದು ಅರ್ಥ ಬರುತ್ತದೆ. ರಾಸ್ವಸಂನ ಸಂಘಟಾತ್ಮಕ ಕಾರ್ಯವು ಶಾಖೆಗಳ ಮೂಲಕವೇ ನಡೆಯುತ್ತದೆ. ಶಾಖೆಗಳು ಪ್ರತಿನಿತ್ಯ ಒಂದು ಘಂಟೆ ಕಾಲ ಸಾರ್ವಜನಿಕ ಬಯಲು ಸ್ಥಳಗಳಲ್ಲಿ ನಡೆಸಲ್ಪಡುತ್ತವೆ. ಒಂದು ಅಂಕಿಅಂಶದ ಪ್ರಕಾರ, ರಾಷ್ಟ್ರಾದ್ಯಂತ ಭಾರತದಲ್ಲಿ ೬೦,೦೦೦ಕ್ಕೂ ಹೆಚ್ಚು ಶಾಖೆಗಳು ನಡೆಯುತ್ತಿವೆ.[2].

ರಾಸ್ವಸಂನ ಶಾಖೆಗಳಲ್ಲಿ ಸ್ವಯಂ ಸೇವಕರ ವ್ಯಕ್ತಿತ್ವ ನಿರ್ಮಾಣ ಹಾಗು ವಿಕಸನ ದೃಷ್ಟಿಯಿಂದ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ದೈಹಿಕ ಸದೃಢತೆಗಾಗಿ ಯೋಗ ಮತ್ತು ವ್ಯಾಯಾಮ ಮಾಡುವದಲ್ಲದೆ ಆಟಗಳನ್ನು ಆಡಲಾಗುತ್ತದೆ. ನಾಗರಿಕ ಪ್ರಜ್ಞೆ, ಸಮಾಜ ಸೇವೆ, ಸಮುದಾಯ ಜೀವನ, ದೇಶಭಕ್ತಿ ಮೊದಲಾದ ಗುಣಗಳ ಬೆಳವಣಿಗೆಗಾಗಿ ಇನ್ನಿತರ ಚಟುವಟಿಕೆಗಳನ್ನೂ ನಡೆಸಲಾಗುತ್ತದೆ.[3] ಸ್ವಯಂಸೇವಕರಿಗೆ ಪ್ರಥಮ ಚಿಕಿತ್ಸೆ, ಅಪಾಯಕರ ಸನ್ನಿವೇಶಗಳಿಂದ ಜನರನ್ನು ರಕ್ಷಿಸುವದು ಮತ್ತು ಪುನರ್ವಸತಿಯಂತಹ ಚಟುವಟಿಕೆಗಳ ತರಭೇತಿ ನೀಡಲಾಗುತ್ತದೆ. ಶಾಖೆ ನಡೆಸಲ್ಪಡುವ ಗ್ರಾಮ ಅಥವಾ ಪ್ರದೇಶಗಳ ಸ್ವಚ್ಛತೆ ಹಾಗು ಅಭಿವೃದ್ಡಿ ಕೆಲಸಗಳಲ್ಲಿ ತೊಡಗುವಂತೆ ಸ್ವಯಂಸೇವಕರನ್ನು ಸಂಘವು ಪ್ರೋತ್ಸಾಹಿಸುತ್ತದೆ.[3][4]

ಬಾಹ್ಯ ಸಂಪರ್ಕಗಳು

ಹೆಚ್ಚಿನ ಓದಿಗೆ

ಆಕರ/ಉಲ್ಲೇಖಗಳು

  1. Bhatt, Chetan (2001). Hindu Nationalism: Origins, Ideologies and Modern Myths. New York: Berg Publishers. ISBN 1-85973-348-4.
  2. ರೀಡಿಫ್ ವಾರ್ತೆ - ಜುಲೈ ೨೩, ೨೦೦೪
  3. K. R. Malkani, The RSS story, Published by Impex India, 1980
  4. M. G. Chitkara, Rashtriya Swayamsevak Sangh: national upsurge, Published by APH Publishing, 2004, ISBN 8176484652, 9788176484657


This article is issued from Wikipedia. The text is licensed under Creative Commons - Attribution - Sharealike. Additional terms may apply for the media files.