ಎಸ್.ಎಲ್. ಭೈರಪ್ಪ

ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ಆಧುನಿಕ ಕನ್ನಡ ಸಾಹಿತ್ಯದ ಕಾದಂಬರಿಕಾರರು ಮತ್ತು ಲೇಖಕರು. ಕನ್ನಡ ಭಾಷೆಯಲ್ಲಿ ಪುಸ್ತಕಗಳನ್ನು ಬರೆದಿರುವ ಇವರ ಕೃತಿಗಳು ಇಂಗ್ಲೀಷ್ ಹಾಗೂ ಭಾರತೀಯ ಭಾಷೆಗಳಿಗೆ ಅನುವಾದಗೊಂಡು ಭಾರತದ ಸಾಹಿತ್ಯವಲಯದಲ್ಲಿ ಹೆಸರಾಗಿದ್ದಾರೆ. ಇವರ ಕಾದಂಬರಿಗಳು ಹಲವಾರು ಮರುಮುದ್ರಣಗಳನ್ನು ಕಂಡು ಕನ್ನಡದ ಜನಪ್ರಿಯ ಬರಹಗಾರರಾಗಿದ್ದಾರೆ.

ಎಸ್.ಎಲ್. ಭೈರಪ್ಪ
ಶ್ರೀ ಎಸ್.ಎಲ್. ಭೈರಪ್ಪ
ಜನನ೨೦-೦೮-೧೯೩೧
ಸಂತೇಶಿವರ, ಹಾಸನ ಜಿಲ್ಲೆ, ಕರ್ನಾಟಕ, ಭಾರತ
ವೃತ್ತಿಲೇಖಕ,ವಿಮರ್ಶಕ,ಅಧ್ಯಾಪಕ
ರಾಷ್ಟ್ರೀಯತೆಭಾರತೀಯ
ಪ್ರಕಾರ/ಶೈಲಿಕಥೆ, ಕಾದಂಬರಿ, ಇತಿಹಾಸ


slbhyrappa.in/kn/

ಜೀವನ

  • ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಸಂತೇಶಿವರದಲ್ಲಿ ೨೦-೮-೧೯೩೧ ರಂದು ಹುಟ್ಟಿದ ಭೈರಪ್ಪನವರು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲೇ ಪಡೆದರು. ಕಿತ್ತು ತಿನ್ನುವ ಬಡತನ, ಬೇಜವಾಬ್ದಾರಿ ತಂದೆ, ಪ್ಲೇಗ್ ಮಾರಿಯಿಂದ ತತ್ತರಗೊಂಡ ಪರಿಸರದಲ್ಲೂ ಅವರ ಸಣ್ಣ ವಯಸ್ಸಿನಲ್ಲೇ ಅವರ ತಾಯಿಯ ಧೀಮಂತಿಕೆಯನ್ನು ಮೈಗೂಡಿಸಿ ಕೊಂಡರು.
  • ಅವರ ೫ನೇ ವಯಸ್ಸಿನಲ್ಲಿ ಅವರ ತಾಯಿ ಬಡತನ - ಪ್ಲೇಗ್ ಗಳಿಗೆ ಜೀವವನ್ನು ತೆತ್ತಾಗ ಬದುಕಿನ ವಿಶ್ವ ವಿಶಾಲತೆಯ ರಂಗದಲ್ಲಿ ಸಾಹಸಮಯವಾದ ಬದುಕನ್ನು ತಾವೇ ನಿರ್ಮಿಸಿ ಕೊಳ್ಳ ತೊಡಗಿ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿದರು. ಗಾಂಧೀಜಿಯವರ ಮೌಲ್ಯಗಳಿಗೆ ಬೆಲೆ ಕೊಟ್ಟು ಸ್ವಾತಂತ್ರ ಚಳುವಳಿಗೆ ತೊಡಗಿಸಿಕೊಂಡಾಗ ಅವರಿಗೆ ಕೇವಲ ೧೩ ವರ್ಷ!
  • ಪ್ರೌಢ ಶಿಕ್ಷಣ ಹಾಗೂ ಕಾಲೇಜು ಓದು ಮೈಸೂರಿನಲ್ಲಿ ಮುಂದುವರೆಸಿದ ಭೈರಪ್ಪನವರು ಎಂ.ಎ.ನಲ್ಲಿ ಸುವರ್ಣ ಪದಕದೊಂದಿಗೆ ತೇರ್ಗಡೆಯಾದರು. ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಿಂದ "ಸತ್ಯ ಮತ್ತು ಸೌಂದರ್ಯ", ಎಂಬ ಇಂಗ್ಲಿಷ್‌ನಲ್ಲಿ ರಚಿಸಿದ ಮಹಾ ಪ್ರಬಂಧಕ್ಕಾಗಿ ಡಾಕ್ಟರೇಟ್ ಪದವಿ ಗಳಿಸಿದರು.
  • ಹುಬ್ಬಳ್ಳಿ, ಗುಜರಾತಿನ ಸರದಾರ್ ಪಟೇಲ್ ವಿಶ್ವ ವಿದ್ಯಾಲಯ, ದೆಹಲಿಗಳಲ್ಲಿ ತಮ್ಮ ಉಪನ್ಯಾಸಕ ವೃತ್ತಿ ಕೈಗೊಂಡ ಭೈರಪ್ಪನವರು, ಶಾಸ್ತ್ರಿಯ ಶಿಸ್ತಿನ ಓದಿನ ನಡುವೆ ಮಹತ್ವದ ಕಾದಂಬರಿಗಳನ್ನು ರಚಿಸಿದ್ದಾರೆ. ೧೯೬೧ ರಲ್ಲಿ `ಧರ್ಮಶ್ರೀ' ಕಾದಂಬರಿ ಪ್ರಕಟಿಸಿ ಇದುವರೆವಿಗೆ ನಾಲ್ಕು ದಶಕಗಳಲ್ಲಿ ೨೧ ಕಾದಂಬರಿಗಳನ್ನು ಬರೆದಿದ್ದಾರೆ.
  • ಆಯಾ ಕಾಲದಲ್ಲಿ ಬಂದ ಅವರ ಕಾದಂಬರಿಗಳೆಲ್ಲಾ ಚರ್ಚೆಗೆ ಒಳಗಾಗಿವೆ. ಇಂಗ್ಲಿಷ್ ಭಾಷೆಯೂ ಸೇರಿದಂತೆ ಭಾರತೀಯ ಹಲವು ಭಾಷೆಗಳಿಗೆ ಭೈರಪ್ಪನವರ ಕಾದಂಬರಿಗಳು ಅನುವಾದ ಗೊಂಡಿವೆ. ಗೃಹಭಂಗ ,ವಂಶವೃಕ್ಷ, ನೆಲೆ, ಸಾಕ್ಷಿ, ನಾಯಿನೆರಳು, ತಬ್ಬಲಿಯು ನೀನಾದೆ ಮಗನೆ, ದಾಟು, ಧರ್ಮಶ್ರೀ, ಪರ್ವ, ಭಿತ್ತಿ ಮುಂತಾದವು ಹಿಂದಿ, ಮರಾಠಿಯಲ್ಲಿ ಜನಪ್ರಿಯವಾಗಿವೆ.
  • ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಮತದಾನ ಕಾದಂಬರಿಗಳು ಚಲನಚಿತ್ರವಾಗಿ ಪ್ರಶಸ್ತಿ ಗಳಿಸಿವೆ. ವಂಶವೃಕ್ಷಕ್ಕೆ ೧೯೬೬ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೭೫ ರಲ್ಲಿ ದಾಟು ಕಾದಂಬರಿಗೆ ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.
  • `ಪರ್ವ' ಭೈರಪ್ಪನವರು ರಚಿಸಿದ ಕಾದಂಬರಿಗಳಲ್ಲೇ ಭಾರೀ ಚರ್ಚೆಗೆ ಒಳಗಾದದ್ದು. ಮಹಾಭಾರತ ಕಾಲದ ಭಾರತೀಯ ಸಮಾಜದ ರೀತಿ ನೀತಿಗಳನ್ನೂ, ಆ ಕಾಲದ ಜೀವನ ಮೌಲ್ಯಗಳನ್ನು, ಮೃತ್ಯುವಿನ ರಹಸ್ಯಾತ್ಮಕತೆಯನ್ನು ಕಾದಂಬರಿಯಲ್ಲಿ ಅರ್ಥಪೂರ್ಣವಾಗಿ ಬಿಂಬಿಸಲಾಗಿದೆ. ಲೈಂಗಿಕತೆ ಮತ್ತು ಸಾವುಗಳ ನೆಲೆಯಲ್ಲಿ ದ್ರೌಪದಿ, ಕುಂತಿ, ಮಾದ್ರಿ, ಗಾಂಧಾರಿ ಪಾತ್ರಗಳನ್ನು ವಿಶಿಷ್ಟವಾಗಿ ಮೂಡಿಸಿದ್ದಾರೆ.
  • ಕಾದಂಬರಿಗಳಲ್ಲದೆ ಸಾಹಿತ್ಯ ಮೀಮಾಂಸೆಗೆ ಸಂಬಂಧಿಸಿದ `ಸಾಹಿತ್ಯ ಮತ್ತು ಪ್ರತೀಕ', `ಕಥೆ ಮತ್ತು ಕಥಾವಸ್ತು', `ನಾನೇಕೆ ಬರೆಯುತ್ತೇನೆ' ಎಂಬ ಕೃತಿಗಳನ್ನೂ ಭೈರಪ್ಪ ರಚಿಸಿದ್ದಾರೆ. ಪ್ರಸ್ತುತ ಮೈಸೂರಿನ ಕುವೆಂಪು ನಗರದಲ್ಲಿ ವಾಸವಾಗಿದ್ದಾರೆ. ೧೯೯೯ರಲ್ಲಿ ಕನಕಪುರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಭೈರಪ್ಪ ಆಯ್ಕೆಯಾಗಿದ್ದರು.

(ಹೆಚ್ಚಿನ ಓದು : ಭೈರಪ್ಪನವರ ಬಾಲ್ಯ ಕಾಲದ ಹೃದಯಸ್ಪರ್ಶಿ ಚಿತ್ರಣಕ್ಕಾಗಿ ಬೆಳಗೆರೆ ಕೃಷ್ಣಶಾಸ್ತ್ರಿಗಳ "ಮರೆಯಲಾದೀತೇ" ವ್ಯಕ್ತಿ ಚಿತ್ರ ಸಂಗ್ರಹದಲ್ಲಿ ಭೈರಪ್ಪನವರ ಬಗೆಗಿನ ಅಧ್ಯಾಯವನ್ನು ಓದಿ. ಭೈರಪ್ಪನವರ ಜೀವನದ ಹೆಚ್ಚಿನ ಮಾಹಿತಿಗಾಗಿ ಅವರ ಆತ್ಮಚರಿತ್ರೆ ಭಿತ್ತಿಯನ್ನೂ ಓದಬಹುದಾಗಿದೆ.)

ವಿವಾದಗಳು

  • ಭೈರಪ್ಪನವರು ಅವರ ನಿಲುವುಗಳಿಂದ ಹಾಗೂ ತಮ್ಮ ಕಾದಂಬರಿಗಳನ್ನು ಬರೆಯಲು ಆಯ್ಕೆ ಮಾಡುವ ವಿಷಯಗಳಿಂದ ವಿವಾದಾತ್ಮಕ ವ್ಯಕ್ತಿಯಾಗಿದ್ದಾರೆ.
  • ಅವರ ಕೆಲವು ಪ್ರಮುಖ ಕೃತಿಗಳು (ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೇ, ಪರ್ವ, ಸಾರ್ಥ, ಆವರಣ) ಭಾರತದ ಪುರಾತನ ಸಂಸ್ಕೃತಿಯ ಸಾರವನ್ನು ಹೊಂದಿವೆ. ಆದ್ದರಿಂದ ಇವರು ಕೆಲವು ಸಾಹಿತಿಗಳಿಂದ, ವಿಶೇಷವಾಗಿ ನವ್ಯ ಸಾಹಿತಿಗಳಿಂದ ಟೀಕೆಗೆ ಗುರಿಯಾಗಬೇಕಾಯಿತು.
  • ರಾಷ್ಟ್ರಗೀತೆಯನ್ನು ವಾದ್ಯಗಳಲ್ಲಿ ನುಡಿಸಿದ ಪ್ರಸಂಗದಲ್ಲಿ ಎನ್ ಆರ್ ನಾರಾಯಣಮೂರ್ತಿಯವರನ್ನು ಭೈರಪ್ಪನವರು ಬೆಂಬಲಿಸಿದ್ದರು. ಕಾವೇರಿ ವಿವಾದ ಗಲಭೆಗಳಿಗೆ ಪ್ರತಿಭಟನೆಗಳಿಗೆ ತಿರುಗಿದ ಸಂದರ್ಭದಲ್ಲಿ ಗಲಭೆಗಳಿಂದ, ಪ್ರತಿಭಟನೆಗಳಿಂದ ವಿವಾದದ ಇತ್ಯರ್ಥ ಸಾಧ್ಯವಾಗುವುದಿಲ್ಲ ಎಂಬ ನಾರಾಯಣಮೂರ್ತಿಯವರ ವಾದವನ್ನು ಕೂಡ ಇವರು ಸಮರ್ಥಿಸಿದ್ದರು.
  • ಟಿಪ್ಪು ಸುಲ್ತಾನ್ ಧರ್ಮ ಸಹಿಷ್ಣುವೇ ಅಲ್ಲವೇ ಎಂಬ ವಿಚಾರದಲ್ಲಿ ಗಿರೀಶ್ ಕಾರ್ನಾಡ್‍ರೊಂದಿಗೆ ಭೈರಪ್ಪನವರು ವಿಜಯ ಕರ್ನಾಟಕ ಪತ್ರಿಕೆಯ ಮೂಲಕ ವಾದಿಸಿದ್ದರು. ಕಾರ್ನಾಡ್ ಟಿಪ್ಪು ಸುಲ್ತಾನ್ ಬಗ್ಗೆ ತಪ್ಪು ಕಲ್ಪನೆಗಳನ್ನು ಸಾರುತ್ತಾ ಅವನ ವ್ಯಕ್ತಿತ್ವವನ್ನು ಅನಗತ್ಯವಾಗಿ ಧರ್ಮಸಹಿಷ್ಣು ಎಂಬ ರೀತಿಯಲ್ಲಿ ವೈಭವೀಕರಿಸಿದ್ದಾರೆ ಎಂಬುದು ಭೈರಪ್ಪನವರ ಅನಿಸಿಕೆಯಾಗಿದೆ. ಟಿಪ್ಪು ಸುಲ್ತಾನ್ ಒಬ್ಬ ಧರ್ಮಾಂಧನಾಗಿದ್ದು ಹಿಂದೂಗಳನ್ನು ಸಹಿಸುತ್ತಿರಲಿಲ್ಲ ಎಂಬುದು ಅವರ ವಾದದ ಸಾರವಾಗಿತ್ತು.
  • ಯು.ಆರ್.ಅನಂತಮೂರ್ತಿಯವರು ಭೈರಪ್ಪನವರ ಕಾದಂಬರಿಗಳ ಪ್ರಮುಖ ಟೀಕಾಕಾರ. ಭೈರಪ್ಪನವರು ತಮ್ಮ ಹಾಗೂ ಅನಂತಮೂರ್ತಿಯವರ ನಡುವೆ ನಡೆದ ವಾದ ವಿವಾದಗಳನ್ನು ಭಿತ್ತಿ ಎಂಬ ತಮ್ಮ ಆತ್ಮಚರಿತ್ರೆಯಲ್ಲಿ ಹಾಗೂ ನಾನೇಕೆ ಬರೆಯುತ್ತೇನೆಯ ಕೆಲವು ಪ್ರಬಂಧ ಗಳಲ್ಲಿ ದಾಖಲಿಸಿದ್ದಾರೆ.
  • ಮುಸ್ಲೀಮ್ ಆಳ್ವಿಕೆಯು ಭಾರತದ ಸಂಸ್ಕೃತಿ ಹಾಗೂ ಸಾಮಾಜಿಕ ಬೆಳವಣಿಗೆಗಳ ಮೇಲೇ ಬೀರಿದ ಪರಿಣಾಮವನ್ನು ಬಿಂಬಿಸುವ, ಐತಿಹಾಸಿಕ ಸತ್ಯಗಳನ್ನೊಳಗೊಂಡ ಭೈರಪ್ಪನವರ ಇತ್ತೀಚಿನ ಕಾದಂಬರಿ ಆವರಣ ಕರ್ನಾಟಕದಲ್ಲಿ ವಿವಾದದ ಅಲೆಯನ್ನೆಬ್ಬಿಸಿದೆ.
  • ಭೈರಪ್ಪನವರು ಇತಿಹಾಸದ ಹೆಸರಲ್ಲಿ ಸಮಾಜವನ್ನ್ನು ಒಡೆದು ಆಳಲು ಬಯಸುವ ಮೂಲಭೂತವಾದಿ ಹಾಗೂ ಅವರಿಗೆ ಕಾದಂಬರಿ ಬರೆಯುವ ಜ್ಞಾನವಿಲ್ಲ ಎಂದು ಹೇಳಿಕೆ ಕೊಟ್ಟ ಅನಂತಮೂರ್ತಿಯವರು ಸಾಹಿತ್ಯ ಲೋಕದಲ್ಲಿ ಕಟು ಟೀಕೆಗೆ ಒಳಗಾದರು.
  • ಆದರೆ ಭೈರಪ್ಪನವರು ತಾವು ಯಾವುದರ ಬಗ್ಗೆಯೂ ಪೂರ್ವಾಗ್ರಹ ಪೀಡಿತರಾಗದೆ ಮಾಡಿದ ಸತ್ಯಾನ್ವೇಷಣೆಯ ಫಲವೇ ಆವರಣ ಎಂದು ಸಮರ್ಥಿಸಿಕೊಂಡಿದ್ದಾರೆ. ಟೀಕಾಕಾರರು ಯಾವುದೇ ತೀರ್ಮಾನಕ್ಕೆ ಬರುವ ಮುನ್ನ ಕಾದಂಬರಿಯಲ್ಲಿ ಸೂಚಿಸಿರುವ ಆಕರ ಗ್ರಂಥಗಳನ್ನು ಅಧ್ಯಯನ ಮಾಡಬೇಕು ಎಂದು ತಿಳಿಸಿದ್ದಾರೆ.
  • ಇತ್ತೀಚೆಗೆ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಮತಾಂತರ ಮತ್ತು ಕವಲು ಎಂಬ ಲೇಖನಗಳಿಗೆ ಬಹಳ ದಿನಗಳ ಕಾಲ ಪರ ಹಾಗೂ ವಿರೋಧಿ ವಿಮರ್ಶೆಗಳು ಪ್ರಕಟವಾಗಿದ್ದವು.
  • ಅವರ ಇತ್ತೀಚಿನ 'ಕವಲು' ಕಾದಂಬರಿ ಕೂಡಾ ಸಾಕಷ್ಟು ಚರ್ಚೆ-ವಿವಾದಗಳಿಗೆ ಗ್ರಾಸವಾಯಿತು. ಕಾದಂಬರಿಯಲ್ಲಿ 'ಆಧುನಿಕ ಮಹಿಳಾ ಸಿದ್ದಾಂತ' ದಲ್ಲಿನ ಪೊಳ್ಳುತನಗಳು ಹಾಗೂ ಅದರ ಸಾಮಾಜಿಕ ಪರಿಣಾಮವನ್ನೇ ವಸ್ತುವನ್ನಾಗಿರಿಸಿಕೊಂಡು ಬರೆಯಲಾಗಿದ್ದರಿಂದ ಅದಕ್ಕೆ 'ಮಹಿಳಾ ಪ್ರಗತಿ ವಿರೋಧಿ' ಎಂಬ ಹಣೆಪಟ್ಟಿಯನ್ನೂ ಕಟ್ಟಲಾಗಿತ್ತು. ಇದೇ ಕಾರಣಕ್ಕಾಗಿ ಖ್ಯಾತ ಕಥೆ, ಕಾದಂಬರಿಕಾರ್ತಿ ಸಾರಾ ಅಬೂಬಕ್ಕರ್ ರವರು ಆ ಕಾದಂಬರಿಯನ್ನು ಯಾರೂ ಓದಕೂಡದೆಂದು ಸಮಾರಂಭವೂಂದರಲ್ಲಿ ಹೇಳಿದ್ದರು, ಇದೂ ಕೂಡಾ ಸಾಕಷ್ಟು ಚರ್ಚೆ,ವಿವಾದಗಳಿಗೆ ನಾಂದಿ ಹಾಡಿತ್ತು. 'ಭೈರಪ್ಪನವರು ಬಲಪಂಥೀಯರು' ಎಂಬುದು ಅವರ ಮೇಲಿನ ಪುರಾತನ ಆರೋಪ!.

ಕೃತಿಗಳು

ಕಾದಂಬರಿಗಳು

  1. ಭೀಮಕಾಯ
  2. ಧರ್ಮಶ್ರೀ (೧೯೬೧)
  3. ದೂರ ಸರಿದರು- (೧೯೬೨)
  4. ಮತದಾನ- (೧೯೬೫)
  5. ವಂಶವೃಕ್ಷ- (೧೯೬೫)
  6. ಜಲಪಾತ- (೧೯೬೭)
  7. ನಾಯಿ ನೆರಳು- (೧೯೬೮)
  8. ತಬ್ಬಲಿಯು ನೀನಾದೆ ಮಗನೆ-(೧೯೬೮)
  9. ಗೃಹಭಂಗ-(೧೯೭೦)
  10. ನಿರಾಕರಣ-(೧೯೭೧)
  11. ಗ್ರಹಣ -(೧೯೭೨)
  12. ದಾಟು -(೧೯೭೩)
  13. ಅನ್ವೇಷಣ-(೧೯೭೬)
  14. ಪರ್ವ-(೧೯೭೯)
  15. ನೆಲೆ -(೧೯೮೩)
  16. ಸಾಕ್ಷಿ -(೧೯೮೬)
  17. ಅಂಚು-(೧೯೯೦)
  18. ತಂತು -(೧೯೯೩)
  19. ಸಾರ್ಥ-(೧೯೯೮)
  20. ಮಂದ್ರ-(೨೦೦೧)
  21. ಆವರಣ-(೨೦೦೭)
  22. ಕವಲು - (೨೦೧೦)
  23. ಯಾನ - (೨೦೧೪)
  24. ಉತ್ತರಕಾಂಡ-(೨೦೧೭)

ಜೀವನಚರಿತ್ರೆ

ತತ್ತ್ವಶಾಸ್ತ್ರ

  1. ಸತ್ಯ ಮತ್ತು ಸೌಂದರ್ಯ (೧೯೬೬) - ಪಿ.ಎಚ್.ಡಿ ಪ್ರಬಂಧ
  2. ಸಾಹಿತ್ಯ ಮತ್ತು ಪ್ರತೀಕ (೧೯೬೭)
  3. ಕಥೆ ಮತ್ತು ಕಥಾವಸ್ತು (೧೯೬೯)
  4. ಸಂದರ್ಭ:ಸಂವಾದ (೨೦೧೧)

ಇತರೆ

  • ನಾನೇಕೆ ಬರೆಯುತ್ತೇನೆ? (೧೯೮೦)

ಇತರ ಭಾಷೆಗಳಿಗೆ ಅನುವಾದವಾಗಿರುವ ಕಾದಂಬರಿಗಳು

  1. ಧರ್ಮಶ್ರೀ - ಸಂಸ್ಕೃತ, ಮರಾಠಿ
  2. ವಂಶವೃಕ್ಷ - ತೆಲುಗು, ಮರಾಠಿ, ಹಿಂದಿ, ಉರ್ದು, ಇಂಗ್ಲೀಷ್
  3. ನಾಯಿ ನೆರಳು - ಗುಜರಾತಿ, ಹಿಂದಿ
  4. ತಬ್ಬಲಿಯು ನೀನಾದೆ ಮಗನೆ - ಹಿಂದಿ
  5. ಗೃಹಭಂಗ - ಭಾರತದ ಹದಿನಾಲ್ಕು ಭಾಷೆಗಳಿಗೆ ಅನುವಾದವಾಗಿದೆ
  6. ನಿರಾಕರಣ -ಹಿಂದಿ
  7. ದಾಟು - ಇಂಗ್ಲೀಷ್, ಭಾರತದ ಹದಿನಾಲ್ಕು ಭಾಷೆಗಳಿಗೆ ಅನುವಾದವಾಗಿದೆ
  8. ಅನ್ವೇಷಣ -ಹಿಂದಿ,ಮರಾಠಿ
  9. ಪರ್ವ -ಹಿಂದಿ, ಮರಾಠಿ, ಇಂಗ್ಲೀಷ್, ತೆಲುಗು, ಬೆಂಗಾಲಿ, ತಮಿಳು
  10. ನೆಲೆ -ಹಿಂದಿ
  11. ಸಾಕ್ಷಿ - ಹಿಂದಿ, ಇಂಗ್ಲೀಷ್
  12. ಅಂಚು -ಹಿಂದಿ, ಮರಾಠಿ
  13. ತಂತು -ಹಿಂದಿ, ಮರಾಠಿ
  14. ಸಾರ್ಥ -ಹಿಂದಿ, ಮರಾಠಿ, ಇಂಗ್ಲೀಷ್, ಸಂಸ್ಕೃತ
  15. ನಾನೇಕೆ ಬರೆಯುತ್ತೇನೆ -ಮರಾಠಿ
  16. ಸತ್ಯ ಮತ್ತು ಸೌಂದರ್ಯ -ಇಂಗ್ಲೀಷ್
  17. ಭಿತ್ತಿ -ಹಿಂದಿ, ಮರಾಠಿ

ಚಲನಚಿತ್ರವಾಗಿರುವ ಕಾದಂಬರಿಗಳು

  1. ವಂಶವೃಕ್ಷ - ೧೯೭೨
  2. ತಬ್ಬಲಿಯು ನೀನಾದೆ ಮಗನೆ - ೧೯೭೭
  3. ಮತದಾನ - ೨೦೦೧
  4. ನಾಯಿ ನೆರಳು - ೨೦೦೬

ಟಿ.ವಿ. ಧಾರಾವಾಹಿಯಾಗಿರುವ ಕಾದಂಬರಿಗಳು

  1. ಗೃಹಭಂಗ
  2. ದಾಟು (ಹಿಂದಿ)

ಪ್ರಶಸ್ತಿ/ಗೌರವಗಳು

  • ‌ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ವಂಶವೃಕ್ಷ ಕಾದಂಬರಿಗೆ) -೧೯೬೬
  • ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ದಾಟು ಕಾದಂಬರಿಗೆ)- ೧೯೭೫
  • ಪಂಪ ಪ್ರಶಸ್ತಿ - ೨೦೦೫[1]
  • ಎನ್ ಟಿ ಆರ್‍ ರಾಷ್ಟ್ರೀಯ ಪ್ರಶಸ್ತಿ- ೨೦೦೭ [2]
  • ಗುಲಬರ್ಗಾ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟು- ೨೦೦೭
  • ಸರಸ್ವತಿ ಸಮ್ಮಾನ್ ಪ್ರಶಸ್ತಿ (ಮಂದ್ರ ಕಾದಂಬರಿಗೆ)- ೨೦೧೦
  • ನಾಡೋಜ ಪ್ರಶಸ್ತಿ - ೨೦೧೧
  • ವಾಗ್ವಿಲಾಸಿನಿ ಪುರಸ್ಕಾರ್ (ದೀನನಾಥ ಮಂಗೇಶ್ಕರ್ ಸ್ಮೃತಿ ಪ್ರತಿಷ್ಠಾನ)- ೨೦೧೨ (ಗಾನಕೋಗಿಲೆ ಭಾರತರತ್ನ ಲತಾ ಮಂಗೇಶ್ಕರ್ ಅವರು ತಮ್ಮ ತಂದೆ ದೀನನಾಥ ಮಂಗೇಶ್ಕರ್ ಹೆಸರಿನಲ್ಲಿ ಸ್ಥಾಪಿಸಲಾಗಿರುವ ಸ್ಮೃತಿ ಪ್ರತಿಷ್ಠಾನ ಈ ಪುರಸ್ಕಾರ ನೀಡುತ್ತಿತ್ತು. ಇದುವರೆಗೂ 20 ಲೇಖಕರಿಗೆ ಈ ಪುರಸ್ಕಾರ ನೀಡಲಾಗಿದ್ದು ಅವರಲ್ಲಿ 18 ಮರಾಠಿ ಲೇಖಕರು ಹಾಗೂ ಇಬ್ಬರು ಸಿನಿಮಾ ಸಾಹಿತ್ಯ ಕ್ಷೇತ್ರದ ಜಾವೆದ್ ಅಖ್ತರ್ ಮತ್ತು ಮಜರೂರ ಸುಲ್ತಾನಪುರಿ ಸೇರಿದ್ದಾರೆ. ಮಹಾರಾಷ್ಟ್ರದಾಚೆಗಿನ ಲೇಖಕರೊಬ್ಬರಿಗೆ ನೀಡುತ್ತಿರುವ ಮೊದಲ ಸಂದರ್ಭ ಇದಾಗಿದೆ)
  • ಡಾ.ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿ - ೨೦೧೪[3]
  • ರಾಷ್ಟ್ರೀಯ ಪ್ರಾಧ್ಯಾಪಕ (ನ್ಯಾಷನಲ್ ಪ್ರೊಫೆಸರ್)[4]
  • ಭೈರಪ್ಪಗೆ ಸಾಹಿತ್ಯ ಅಕಾಡೆಮಿ ಫೆಲೋ ಗೌರವ,[5]
  • ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ೨೦೧೫[6]
  • ಪದ್ಮಶ್ರೀ, ೨೦೧೬ [7]
  • Hindu news paper, January 26, 2016, 11 from Karnataka get 'Padmashri' awards,

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.