ಇಂಡಿಯಾ ಗೇಟ್‌

ನಾನು ಎಲ ಇಂಡಿಯಾ ಗೇಟ್‌ ಎಂಬುದು ಭಾರತದ ರಾಷ್ಟ್ರೀಯ ಸ್ಮಾರಕವಾಗಿದೆ. ನವದೆಹಲಿಯ ಹೃದಯಭಾಗದಲ್ಲಿ ನೆಲೆಗೊಂಡಿರುವ ಇಂಡಿಯಾ ಗೇಟ್‌, ಸರ್‌ ಎಡ್ವಿನ್‌ ಲುಟ್ಯೆನ್ಸ್‌ ಎಂಬಾತನಿಂದ ವಿನ್ಯಾಸಗೊಳಿಸಲ್ಪಟ್ಟಿತು. ಮೂಲತಃ ಅಖಿಲ ಭಾರತ ಯುದ್ಧಸ್ಮಾರಕವಾಗಿ ಚಿರಪರಿಚಿತವಾಗಿರುವ ಇದು ದೆಹಲಿಯಲ್ಲಿನ ಒಂದು ಎದ್ದುಕಾಣುವ ಹೆಗ್ಗುರುತಾಗಿದೆ. ಅಷ್ಟೇ ಅಲ್ಲ, Iನೇ ಜಾಗತಿಕ ಸಮರ ಮತ್ತು ಮೂರನೇ ಆಂಗ್ಲೋ-ಆಫ್ಘನ್‌ ಯುದ್ಧದಲ್ಲಿ ಬ್ರಿಟಿಷ್‌ ಭಾರತದ ಸಾಮ್ರಾಜ್ಯದ ಪರವಾಗಿ ಅಥವಾ ಹೆಚ್ಚು ನಿಖರವಾಗಿ ಹೇಳುವುದಾದರೆ ಬ್ರಿಟಿಷ್‌ ಆಳ್ವಿಕೆಯ ಪರವಾಗಿ ಹೋರಾಡುವಾಗ ತಮ್ಮ ಪ್ರಾಣಗಳನ್ನು ತೆತ್ತ ಬ್ರಿಟಿಷ್‌ ಭಾರತದ ಸೇನೆಯ 90,000 ಯೋಧರನ್ನು ನೆನಪಿಗೆ ತರುತ್ತದೆ. ಕೆಮ್ಮರಳು ಶಿಲೆ ಮತ್ತು ಗ್ರಾನೈಟ್‌ನಿಂದ ಇದು ಮಾಡಲ್ಪಟ್ಟಿದೆ. ಮೂಲತಃ, ಇಂಡಿಯಾ ಗೇಟ್‌ನ ಮುಂಭಾಗದಲ್ಲಿ, ಈಗ-ಖಾಲಿಯಿರುವ ಮೇಲಾವರಣದ ಅಡಿಯಲ್ಲಿ ರಾಜ Vನೇ ಜಾರ್ಜ್‌‌ನ ಪ್ರತಿಮೆಯೊಂದನ್ನು ನಿಲ್ಲಿಸಲಾಗಿತ್ತು, ಮತ್ತು ಇತರ ಪ್ರತಿಮೆಗಳೊಂದಿಗೆ ಇದನ್ನು ತೆಗೆದು ಕಾರೊನೇಷನ್‌ ಉದ್ಯಾನವನ‌ಕ್ಕೆ ವರ್ಗಾಯಿಸಲಾಗಿತ್ತು. ಭಾರತಕ್ಕೆ ಸ್ವಾತಂತ್ರ್ಯ ದೊರೆತ ಮೇಲೆ, ಭಾರತದ ಸೇನೆಯ ಅಜ್ಞಾತ ಯೋಧನ ಸಮಾಧಿಯ ತಾಣವಾಗಿ ಇಂಡಿಯಾ ಗೇಟ್‌ ಮಾರ್ಪಟ್ಟು, ಅಮರ್ ಜವಾನ್‌ ಜ್ಯೋತಿ (ಅಮರ ಯೋಧನ ಜ್ವಾಲೆ) ಎಂಬುದಾಗಿ ಕರೆಯಲ್ಪಟ್ಟಿತು.

ತಾಣ

42-ಮೀಟರ್‌ ಎತ್ತರವಿರುವ ಇಂಡಿಯಾ ಗೇಟ್‌ ವಿಶಿಷ್ಟ ಸ್ಥಾನದಲ್ಲಿ ನೆಲೆಗೊಂಡಿದ್ದು ಅದರಿಂದ ಅನೇಕ ಮುಖ್ಯ ರಸ್ತೆಗಳು ಹರಡಿವೆ. ಭಯೋತ್ಪಾದಕರ ಬೆದರಿಕೆಗಳ ಕಾರಣದಿಂದಾಗಿ ಈ ರಸ್ತೆಗಳು ಸಾರ್ವಜನಿಕರಿಗಾಗಿ ಮುಚ್ಚಲ್ಪಡುವವರೆಗೂ, ಇಂಡಿಯಾ ಗೇಟ್‌ ಸುತ್ತಮುತ್ತ ಸಾಗುವ ಸಂಚಾರವು ನಿರಂತರವಾಗಿರುತ್ತಿತ್ತು. ಇಂಡಿಯಾ ಗೇಟ್‌ನಲ್ಲಿನ ದೀಪಗಳನ್ನು ಬೆಳಗಿಸಿದಾಗ ಸಾಯಂಕಾಲದ ಸಮಯಗಳಲ್ಲಿ ರಾಜ್‌ಪಥ್‌ ಸುತ್ತಮುತ್ತಲಿರುವ ಹುಲ್ಲುಹಾಸುಗಳು ಜನರಿಂದ ಕಿಕ್ಕಿರಿದು ತುಂಬಿರುತ್ತವೆ. ಈ ಸಂದರ್ಭದಲ್ಲಿ ಐಸ್‌ ಕ್ರೀಮ್‌ ಮತ್ತು ಬೀದಿಬದಿಯ ಆಹಾರಗಳ ಮಾರಾಟಗಾರರು ಹೊರಬರುತ್ತಾರೆ ಮತ್ತು ಕುಟುಂಬಗಳಿಗಾಗಿ ಇದೊಂದು ಜನಪ್ರಿಯವಾದ ವಿಹಾರ-ಪ್ರವಾಸ ತಾಣವಾಗಿ ಮಾರ್ಪಡುತ್ತದೆ. ಇಂಡಿಯಾ ಗೇಟ್‌ನ ಷಡ್ಭುಜಾಕೃತಿಯ ಸಂಕೀರ್ಣವು ಸರಿಸುಮಾರಾಗಿ 306000m²ನಷ್ಟು ವಿಸ್ತೀರ್ಣಕ್ಕೆ ಆವರಿಸಿಕೊಂಡಿದ್ದು, ಸುಮಾರು 625 ಮೀ.ನಷ್ಟು ವ್ಯಾಸವನ್ನು ಹೊಂದಿದೆ.

ಅಮರ್ ಜವಾನ್‌ ಜ್ಯೋತಿ

ಅಮರ್ ಜವಾನ್‌ ಜ್ಯೋತಿಯ ಸಂಪುಟ.

ಇಂಡಿಯಾ ಗೇಟ್‌ನ ತೋರಣ-ಕಮಾನಿನ ಅಡಿಯಲ್ಲಿರುವ ಸಂಪುಟವೊಂದರಲ್ಲಿ 1971ರಿಂದಲೂ ಉರಿಯುತ್ತಿರುವ ಅಮರ್ ಜವಾನ್‌ ಜ್ಯೋತಿಯು (ಅಮರ ಯೋಧರ ಜ್ವಾಲೆ) ಅಜ್ಞಾತ ಯೋಧನ ಸಮಾಧಿಯ ಗುರುತಾಗಿದೆ. ಸಂಪುಟವು ಸ್ವತಃ ಒಂದು ಕಪ್ಪು ಅಮೃತಶಿಲೆಯ ಸ್ಮಾರಕ ಸಮಾಧಿಯಾಗಿದ್ದು, ಅದರ ಕೊರಳಿನ ಭಾಗದಲ್ಲಿ ಒಂದು ಬಂದೂಕನ್ನು ಇರಿಸಿ, ಯೋಧನ ಶಿರಸ್ತ್ರಾಣವೊಂದನ್ನು ಅದರ ನೆತ್ತಿಗೇರಿಸಲಾಗಿದೆ. ಸ್ಮಾರಕ ಸಮಾಧಿಯ ಪ್ರತಿ ಮುಖವೂ ಬಂಗಾರದಲ್ಲಿ ಕೆತ್ತಲಾಗಿರುವ "ಅಮರ್‌ ಜವಾನ್‌" (ಅಮರ ಯೋಧ) ಎಂಬ ಪದಗಳನ್ನು ಹೊಂದಿದೆ. ಈ ಸ್ಮಾರಕ ಸಮಾಧಿಯು ಸ್ವತಃ ಒಂದು ಭವ್ಯಸೌಧದ ಮೇಲೆ ಇರಿಸಲ್ಪಟ್ಟಿದ್ದು, ಚಿರಂತನವಾಗಿ ಉರಿಯುತ್ತಿರುವಂತೆ ಇಡಲಾಗಿರುವ ನಾಲ್ಕು ದೀವಟಿಗೆಗಳನ್ನು ತನ್ನ ನಾಲ್ಕು ಮೂಲೆಗಳಲ್ಲಿ ಅದು ಹೊಂದಿದೆ. ಇದನ್ನು 1931ರಲ್ಲಿ ಅನಾವರಣಗೊಳಿಸಲಾಯಿತು. ಇಂದು, ನಾಗರಿಕ ಸರ್ಕಾರದ ಶಿಷ್ಟಾಚಾರಗಳ ಸಂದರ್ಭಗಳಂದು, ಮತ್ತು ಪ್ರತಿವರ್ಷದ ಜನವರಿ 26ರ ಗಣತಂತ್ರ ದಿವಸದಂದು ಈ ತಾಣದಲ್ಲಿ ಗೌರವಾರ್ಪಣ ಮಾಡುವುದು ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಗಳಿಗೆ ಸಂಬಂಧಿಸಿದಂತೆ, ಅಷ್ಟೇ ಏಕೆ, ಸಂದರ್ಶಕರಾಗಿ ಬರುವ ನಾಗರಿಕ ಸರ್ಕಾರದ ಅತಿಥಿಗಳಿಗೆ ಸಂಬಂಧಿಸಿದಂತೆ ಇರುವ ಸಂಪ್ರದಾಯ-ಸಂಹಿತೆಯಾಗಿದೆ; ರಾಜ್‌ಪಥ್‌‌ನಲ್ಲಿ ನಡೆಯುವ ವಾರ್ಷಿಕ ಸೈನಿಕ ಮೆರವಣಿಗೆಯ ಸಮ್ಮುಖದಲ್ಲಿ ಸೇರಿಕೊಳ್ಳುವುದಕ್ಕೆ ಮುಂಚಿತವಾಗಿ ಪ್ರಧಾನಮಂತ್ರಿಯವರು ಸಶಸ್ತ್ರ ಪಡೆಗಳ ಮುಖ್ಯಸ್ಥರೊಂದಿಗೆ ಯೋಧರಿಗೆ ಗೌರವಾರ್ಪಣ ಮಾಡುವುದು ವಾಡಿಕೆಯಾಗಿದೆ. ಇಲ್ಲಿರುವ ಧ್ವಜಗಳು ಭಾರತದ 3 ಸೇನಾ ಪಡೆಗಳನ್ನು (ಭೂಸೇನೆ, ನೌಕಾಪಡೆ, ಮತ್ತು ವಾಯು ಪಡೆ) ಪ್ರತಿನಿಧಿಸುತ್ತವೆ; ಒಂದಾದ ಮೇಲೊಂದರಂತೆ ಪಡೆಗಳು ವರಸೆಯಾಗಿ ಬರುವ ರೀತಿಯಲ್ಲಿ, ಪ್ರತಿ ಪಡೆಗೆ ಸೇರಿದ ಓರ್ವ ಯೋಧನು ಪ್ರತಿದಿನವೂ ದ್ವಾರ ಮತ್ತು ಸಮಾಧಿಯನ್ನು ಕಾವಲು ಕಾಯುತ್ತಾನೆ.

ಮೇಲಾವರಣ

ದ್ವಾರಕ್ಕೆ ಸರಿಯಾಗಿ ಹಿಂಭಾಗದಲ್ಲಿ ನಿಂತಿರುವಂತಿರುವ ಒಂದು ಖಾಲಿ ಮೇಲಾವರಣವು ಮರಳುಗಲ್ಲಿನಿಂದ ಮಾಡಲ್ಪಟ್ಟಿದ್ದು, ಇದೂ ಕೂಡ ಲುಟ್ಯೆನ್ಸ್‌ನಿಂದ ವಿನ್ಯಾಸಗೊಳಿಸಲ್ಪಟ್ಟಿದೆ, ಮತ್ತು 18ನೇ ಶತಮಾನಕ್ಕೆ ಸೇರಿದ ಮಹಾಬಲಿಪುರಂನ ಚಾಚುಭಾಗವೊಂದರಿಂದ ಇದು ಪ್ರೇರೇಪಿಸಲ್ಪಟ್ಟಿದೆ; 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಗುವವರೆಗೂ, ಇದು ರಾಜ Vನೇ ಜಾರ್ಜ್‌ನ ಪ್ರತಿಮೆಯನ್ನು ಹೊಂದಿತ್ತು. ಈ ಪ್ರತಿಮೆಯು ಈಗ ದೆಹಲಿಯ ಕಾರೊನೇಷನ್‌ ಉದ್ಯಾನವನದಲ್ಲಿ ನಿಂತಿದೆ. ಕುಳಿತಿರುವ ಅಥವಾ ನಿಂತಿರುವ ಭಂಗಿಯಲ್ಲಿರುವ ಮಹಾತ್ಮ ಗಾಂಧಿಯವರ ಪ್ರತಿಮೆಯೊಂದು ಇಲ್ಲಿ ಪ್ರತಿಷ್ಠಾಪಿಸಲ್ಪಡಬೇಕು ಎಂಬುದರ ಕುರಿತು ಅನೇಕ ಯೋಜನೆಗಳು ಮತ್ತು ಕರೆಗಳು ಪ್ರಸ್ತಾವಿಸಲ್ಪಟ್ಟಿದ್ದವು; ಇವೆಲ್ಲಾ ಚರ್ಚಾವಿಷಯಗಳಾಗಿ ಮಾರ್ಪಟ್ಟಿದ್ದವು ಮತ್ತು ಈ ಕುರಿತಾದ ಯಾವುದೇ ಸಮ್ಮತಿಯು ಹೊರಬೀಳಲಿಲ್ಲ.

ಚಿತ್ರಸಂಪುಟ

ಇವನ್ನೂ ನೋಡಿ

  • ಗೇಟ್‌ವೇ ಆಫ್ ಇಂಡಿಯಾ

ಬಾಹ್ಯ ಕೊಂಡಿಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.