ಹೇಮಾ ಪಟ್ಟಣಶೆಟ್ಟಿ
ಡಾ.ಹೇಮಾ ಪಟ್ಟಣಶೆಟ್ಟಿ ಕನ್ನಡ ಸಾಹಿತ್ಯಲೋಕದಲ್ಲಿ ಹೆಸರಾಂತ ಲೇಖಕಿ.ಲೇಖನಗಳಲ್ಲದೆ ಅನುವಾದಕಿಯಾಗಿಯೂ, ರಂಗನಟಿಯಾಗಿಯೂ ಹಾಗು ಸಮಾಜ ಕಾರ್ಯಕರ್ತೆಯಾಗಿಯೂ ಪ್ರಸಿದ್ದರು. ಧಾರವಾಡದ ಹೊನ್ನಾಪುರಮಠದ ಮನೆತನದಲ್ಲಿ ದಿನಾಂಕ ೧೦-೦೨-೧೯೫೪ ರಂದು ಜನಿಸಿದ ಈಕೆಯ ತಂದೆ ಚಂದ್ರಶೇಖರ ಸ್ವಾಮಿ ಹೊನ್ನಾಪುರಮಠ ಮತ್ತು ತಾಯಿ ಗೌರಾಂಬಿಕಾದೇವಿ. ಕನ್ನಡ ಹಾಗೂ ಮನ:ಶಾಸ್ತ್ರ ವಿಷಯದಲ್ಲಿ ಎರಡು ಸ್ನಾತಕೋತ್ತರ ಪದವಿ ಪಡೆದಿದ್ದಾರೆ.ಕನ್ನಡದಲ್ಲಿ ಎಮ್.ಎ ಮತ್ತು ಎಮ್.ಫಿಲ್ ಪದವಿಯನ್ನೂ ಸಹ ಪಡೆದಿದ್ದಾರೆ. ಆರು ವರ್ಷ ಮನ:ಶಾಸ್ತ್ರದಲ್ಲೂ ನಾಲ್ಕು ವರ್ಷ ಕನ್ನಡಲ್ಲೂ ಉಪನ್ಯಾಸಕಿಯಾಗಿ ಕೆಲಸ ನಿರ್ವಹಿಸಿದ್ದಾರೆ. "ಕನ್ನಡ ನಾಟಕಗಳಲ್ಲಿ ಸ್ತ್ರೀ ಪಾತ್ರಗಳು -ಸ್ತ್ರೀವಾದಿ ದೃಷ್ಟಿಕೋನ" ಎಂಬುದು ಇವರ ಸಂಶೋದನಾ ಪ್ರಬಂಧ. ೧೯೭೯ ರಲ್ಲಿ 'ಅನನ್ಯ' ಪ್ರಕಾಶನವನ್ನು ಸ್ಥಾಪಿಸಿ ಕನ್ನಡ ಖ್ಯಾತ ಲೇಖಕರ ೮೫ ಕೃತಿಗಳನ್ನು ಪ್ರಕಟಿಸಿದ್ದಾರೆ.
ಕಾವ್ಯ ಸಂಗ್ರಹಗಳು
- ವಿರಹೋತ್ಸವ(೧೯೮೩)
- ಹೊಸ ಹಾಡು(೧೯೮೬)
- ಕಣ್ಣುಗಳಲಿ ಕನಸುತುಂಬಿ
ಕಥಾ ಸಂಕಲನ
- ಮುಸುಕಿದೀ ಮಬ್ಬಿನಲಿ(೧೯೭೮)
ವ್ಯಕ್ತಿಚಿತ್ರ
- ಪ್ರಸನ್ನ
ನಾಟಕಗಳು
- ಹೆಣ್ಣು
ಸಂಪಾದನೆ
- ಹೊನ್ನಾಪುರ (೧೯೮೧)
ಅನುವಾದ
- ಡಾ.ಲೋಹಿಯಾ (ಜೀವನ)(೧೯೭೮)
- ಅದೃಷ್ಯ ವ್ಯಕ್ತಿಯ ಆತ್ಮಹತ್ಯೆ (ನಾಟಕ)(೧೯೮೧)
- ವಾತ್ಸಲ್ಯ ವಿಷ (ನಾಟಕ)()೧೯೮೧)
- ಮಾಡು ಸಿಕ್ಕದಲ್ಲಾ (ಮರಾಠಿಯಿಂದ ಅನುವಾದ ಮಾಡಿದ ನಾಟಕ)(೧೯೮೩)
ಇತರೆ ವಿಷಯಗಳು
ನೊಂದ ಮಹಿಳೆಯರಿಗಾಗಿ "ಸಾಂತ್ವನ" ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಅದರ ನಿರ್ದೇಶಕಿಯೂ ಹೌದು. ಧಾರವಾಡ, ಬೆಳಗಾವಿ, ಅಥಣಿ ನ್ಯಾಯಾಲಯಗಳಲ್ಲಿ ಬಹುಕಾಲ ಉಳಿದುಹೋಗಿದ್ದ ಮಹಿಳಾ ಸಂಬಂದ ಪ್ರಕರಣಗಳನ್ನು ಮತ್ತೇ ಪುನರುಜ್ಜೀವನಗೊಳಿಸಿ ನೊಂದ ಮಹಿಳೆಯರಿಗೆ ನ್ಯಾಯ ಒದಗಿಸಿದ್ದಾರೆ. ದೇವದಾಸಿ ಸಮಸ್ಯೆ ಕುರಿತಾಗಿ ಅಧ್ಯಯನ ಮಾಡಿರುವ ಹೇಮಾ 'ವೇಶ್ಯೆಯರು, ಬಾಲವೇಶ್ಯೆಯರು ಮತ್ತು ವೇಶ್ಯಾ ಮಕ್ಕಳ ಅಧ್ಯಯನ'ಸಮಿತಿಯ ಸದಸ್ಯೆಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಸಾರ್ವಜನಿಕ ಸೇವೆಯನ್ನು ಗುರುತಿಸಿದ ಕರ್ನಾಟಕ ಸರಕಾರ 'ಜಲ ಸಂವರ್ಧನೆ ಯೋಜನಾ ಕೇಂದ್ರ' ದ ಆಡಳಿತ ಮಂಡಲಿಯ ಸದಸ್ಯೆಯನ್ನಾಗಿಸಿದೆ. ಇವರ ಹಲವಾರು ಕೃತಿಗಳು ಹಿಂದಿ, ತೆಲುಗು, ಉರ್ದು, ಇಂಗ್ಲೀಷ್ ಮತ್ತು ಗುಜರಾತಿ ಭಾಷೆಗಳಿಗೆ ಅನುವಾದಿತವಾಗಿವೆ. ಡಾ.ಲೋಹಿಯಾ ಎಂಬ ಇವರ ಅನುವಾದಿತ ಕೃತಿ ಕನ್ನಡದಲ್ಲಿ ರಾಂ ಮನೋಹರ್ ಲೋಹಿಯಾ ಅವರನ್ನು ಕುರಿತಾಗಿ ಪ್ರಕಟವಾದ ಮೊದಲ ಕೃತಿ.
ಪ್ರಶಸ್ತಿ-ಪುರಸ್ಕಾರಗಳು
ಹೇಮಾ ಅವರಿಗೆ ಎಂಟು ಸಾಹಿತ್ಯಿಕ ಪ್ರಶಸ್ತಿಗಳು ಲಭಿಸಿವೆ. ಅವುಗಳಲ್ಲಿ ಮುದ್ದಣ ಪ್ರಶಸ್ತಿ , ಮಲ್ಲಿಕಾ ಪ್ರಶಸ್ತಿ , ೨ ಸಲ ಅಂತರರಾಷ್ಟ್ರೀಯ ಮಹಿಳಾ ವರ್ಷದ ಪ್ರಶಸ್ತಿ , ೪ ಸಲ ರತ್ನಮ್ಮ ಹೆಗ್ಗಡೆ ಪ್ರಶಸ್ತಿಗಳು ದೊರೆತಿವೆ. ಹೊಸ ಹಾಡು ಕೃತಿಗೆ ೧೯೮೩ ರ ಕನ್ನಡ ಸಾಹಿತ್ಯ ಪರಿಷತ್ತಿನ ಪುರಸ್ಕಾರ ದೊರೆತಿದೆ.