ಪಿಲಿಪಂಜಿ ಕುಣಿತ

ತುಳುವಿನಲ್ಲಿ ಸುಗ್ಗಿ ತಿಂಗಳಲ್ಲಿ ಕುಣಿಯುವ ಕುಣಿತ ಪಿಲಿಪಂಜಿ ಕುಣಿತ. ಪಿಲಿ ಅಂದರೆ ಹುಲಿ, ಪಂಜಿ ಅಂದರೆ ಹಂದಿ. ಈ ಕುಣಿತವು ಆರಾಧನ ಕುಣಿತವಾಗಿದೆ.

ಪ್ರದೇಶಗಳು

ಪುತ್ತೂರು, ಸುಳ್ಯ,ಬೆಳ್ತಂಗಡಿ ತಾಲೂಕಿನ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದ ಕೆಲವು ಗ್ರಾಮಗಳಲ್ಲಿ ಮುಖ್ಯವಾಗಿ ಪುದುವೆಟ್ಟು, ನಿಡ್ಲೆ, ಕಳೆಂಜ, ಕೊಕ್ಕಡ, ಬೆಳಾಲು, ಉಜಿರೆ, ಮುಂಡಾಜೆ, ಕಡಿರುದ್ಯಾವರ ಮುಂತಾದ ಕಡೆಗಳಲ್ಲಿ ಈ ಕುಣಿತ ಪ್ರಚಲಿತದಲ್ಲಿದೆ. ಹುಲಿ ಮತ್ತು ಹಂದಿಗಳೇ ಪ್ರಧಾನ ವೇಷಗಳಾಗಿರುವುದರಿಂದ ಇದಕ್ಕೆ ಪಿಲಿಪಂಜಿ ಕುಣಿತ ಎಂಬ ಹೆಸರು ಔಚಿತ್ಯಪೂರ್ಣವಾಗಿದೆ. ದಕ್ಷಿಣ ಕನ್ನಡದ ಮೊಗೇರರು ವರ್ಷಕ್ಕೆ ಒಂದಾವರ್ತಿ ಸುಗ್ಗಿ ಹುಣ್ಣಿಮೆಯಿಂದ ಒಂದು ವಾರದ ಕಾಲೀ ಕುಣಿತವನ್ನು ನಡೆಸುತ್ತಾರೆ.

ಭಾಗವಹಿಸುವ ಸಮುದಾಯ

ಮುಗೇರ ಸಮುದಾಯವು ಮಾತ್ರ ಈ ಕುಣಿತದಲ್ಲಿ ಕುಣಿಯುವ ಕುಣಿತ ಇದಾಗಿದೆ.

ಅಶಯ

ಕಾಡುಪ್ರಾಣಿಗಳ ಉಪದ್ರವ ಕೊಡುವ ಪ್ರಾಣಿಗಳನ್ನು ಕೊಲ್ಲುತ್ತಿದ್ದರು.ಕೆಡ್ವಾಸದ ಮೂರು ದಿನ ಇಢೀ ಊರಿನ ಜನರು ಸೇರಿ ಬೇಟೆಯಾಡುತ್ತಿದ್ದರು, ಉಪದ್ರವ ಕೊಡುವ ಪ್ರಾಣಿಗಳನ್ನು ಕೊಲ್ಲುತ್ತಿದ್ದರು. ಸುಗ್ಗಿ ತಿಂಗಳಲ್ಲಿ ರಾತ್ರಿ ಸಮಯದಲ್ಲಿ ನಡೆಸಲಾಗುತ್ತದೆ.

ಬಳಸುವ ವಾದ್ಯಗಳು

  • ದುಡಿ

ವೇಷ ಮತ್ತು ವಸ್ತು

ತಂಡದಲ್ಲಿ ಮುಖ್ಯವಾಗಿ ಒಂದು ಹುಲಿ ವೇಷ ಒಂದು ಹಂದಿ ವೇಷ, ಎರಡು ಜಿಂಕೆಗಳ ವೇಷಗಳು ಹಾಗೂ ಒಬ್ಬ ಬೇಟೆಗಾನಿರುತ್ತಾನೆ. ಒಬ್ಬ ದುಡಿ ಬಾರಿಸುತ್ತಾ ಹಾಡು ಹೇಳಿದರೆ ಇನ್ನೊಬ್ಬ ಇದಕ್ಕೆ ಧ್ವನಿಗೂಡಿಸುತ್ತಾನೆ. ಹೀಗೆ ತಂಡದಲ್ಲಿ ಒಟ್ಟು ಏಳು ಮಂದಿ ಇರುತ್ತಾರೆ. ಆಯಾ ವೇಷಧಾರಿಗಳು ಆಯಾ ಪ್ರಾಣಿಗಳ ಸಾಂಕೇತಿಕ ಮುಖವಾಡವನ್ನು ತಲೆಗೆ ಕಟ್ಟಿಕೊಂಡಿರುತ್ತಾರೆ. ದುಂಡಾಗಿರುವ ಮುಖ, ತೆರೆದಬಾಯಿ, ಚೂಪುಹಲ್ಲು ಹಾಗೂ ಹೊರಚಾಚಿದ ನಾಲಿಗೆಯ ಹುಲಿಯ ಮುಖವಾಡವಿರುತ್ತದೆ. ಹಂದಿಯ ಮುಖವಾಡ ಹಾಳೆಯನ್ನು ಶಂಕು ಆಕಾರದಲ್ಲಿ ಬಗ್ಗಿಸಿ ಉದ್ದ ಮೂತಿಯಂತೆ ಮಾಡಿ ಅದಕ್ಕೆರಡು ಕಣ್ಣುಗಳನ್ನು ಬಿಡಿಸಿರುವುದು. ಹಂದಿಯ ಮುಖವಾಡ ಜಿಂಕೆಮುಖವಾಡಗಳಲ್ಲಿ ಎರಡು ಕೊಂಬುಗಳು ಉದ್ದವಾಗಿರುತ್ತವೆ. ಈ ಮುಖವಾಡಗಳನ್ನು ಅಡಿಕೆ ಹಾಳೆಗೆ ಮಸಿ, ಅರಶಿಣ ಹಾಗೂ ಜೇಡಿ ಮಣ್ಣಿನ ಮಿಶ್ರಣವನ್ನು ಬಳಿದು ತಯಾರಿಸುತ್ತಾರೆ. ಭತ್ತದ ಹುಲ್ಲಿಗೆ ಒಣಗಿದ ಬಾಳೆನಾರನ್ನು ಸುತ್ತಿ ತಯಾರಿಸಿದ ಬಾಲವನ್ನು ಸೊಂಟಕ್ಕೆ ಕಟ್ಟಿಕೊಂಡಿರುತ್ತಾರೆ. ಹಂದಿ ಮತ್ತು ಜಿಂಕೆಯ ಬಾಲ ಚಿಕ್ಕದಾಗಿದ್ದರೆ ಹುಲಿಯಬಾಲ ಉದ್ದವಾಗಿರುತ್ತದೆ. ಎಲ್ಲ ವೇಷಧಾರಿಗಳೂ ಬಿಳಿಪಂಚೆಯನ್ನು ಮೊಣಕಾಲಿನಿಂದ ಮೇಲಕ್ಕೆ ಕಚ್ಚೆಕಟ್ಟಿಕೊಂಡಿರುತ್ತಾರೆ. ಅರಶಿಣ, ಮಸಿ, ಜೇಡಿಮಣ್ಣನ್ನು ಮುಖಕ್ಕೆ ಹಚ್ಚಿಕೊಂಡಿರುತ್ತಾರೆ. ಹುಲಿಯ ಮೈಮೇಲೆ ಗುಣಿಸು ಗುರುತುಗಳನ್ನು ಹಾಕಿಕೊಳ್ಳುತ್ತಾರೆ. ಜಿಂಕೆಯ ಮೈಮೇಲೆ ಚುಕ್ಕೆಗಳಿರುತ್ತವೆ.ಹಂದಿ ವೇಷಕ್ಕೆ ಕಪ್ಪು ಬಣ್ಣವನ್ನು ಹೆಚ್ಚು ಬಳಸಿದರೆ ಹುಲಿಯ ವೇಷಕ್ಕೆ ಹಳದಿ ಬಣ್ಣವನ್ನು ಉಪಯೋಗಿಸುತ್ತಾರೆ. ಜಿಂಕೆಗಳ ವೇಷಕ್ಕೆ ಹೆಚ್ಚಾಗಿ ಬಿಳಿ ಬಣ್ಣಗಳು ಉಪಯೋಗವಾಗುತ್ತವೆ. ಬೇಟೆಗಾರ ಮುಖಕ್ಕೆ ಮಾತ್ರ ಬಣ್ಣದ ಚುಕ್ಕಿಗಳನ್ನು ಹಾಕಿಕೊಂಡು ಕಪ್ಪು ಕನ್ನಡಕ ಧರಿಸುತ್ತಾನೆ. ಪ್ಯಾಂಟು, ಅಂಗಿ ಹಾಗೂ ತಲೆಗೆ ಹ್ಯಾಟು ಇರುತ್ತದೆ. ಕೈಯಲ್ಲಿ ಕೋವಿ ಹಿಡಿದುಕೊಂಡು ಇರುತ್ತಾನೆ. ಈತನನ್ನು ‘ದೊರೆ’ ಎಂದು ಕರೆಯುತ್ತಾರೆ. ಹಾಡುಗಾರರು ದೈನಂದಿನ ಉಡುಗೆಗಳಲ್ಲಿರುತ್ತಾರೆ. ಹೀಗೆ ವೇಷ ಹಾಕಿದ ಅನಂತರ ಗುರಿಕಾರನ ಆರಣಭದ ಕುಣಿತ ನಡೆಯುತ್ತದೆ. ಒಬ್ಬ ದುಡಿ ಬಾರಿಸುತ್ತಾ ಪಿಲಿಪಂಜಿ ಪಾಡ್ದನ ಹೇಳುತ್ತಾನೆ. ಇನ್ನೊಬ್ಬ ಅದನ್ನು ಪುನರಾವರ್ತಿಸುತ್ತಾರೆ. ಕುಣಿತದಲ್ಲಿ ಹಾಡು ನಿಧಾನಗತಿಯಿಂದ ಸಾಗುತ್ತದೆ. ಜಿಂಕೆ ವೇಷದವರು ಕೈಕಾಲುಗಳನ್ನೂರಿ ಕುಪ್ಪಳಿಸುತ್ತಾರೆ. ಹುಲಿ ಮತ್ತು ಹಂದಿ ಎದುರುಬದುರಾಗಿ ನಿಂತು ಬೆನ್ನನ್ನು ಪೂರ್ತಿ ಬಗ್ಗಿಸಿ ಕೈಕಾಲುಗಳನ್ನು ಸಮಾನಾಂತರವಾಗಿ ಬೀಸಿ ಮುಂದಕ್ಕೆ ಹಿಂದಕ್ಕೆ ಕುಣಿಯುತ್ತಿರುತ್ತಾರೆ. ಹಾಡುಗಾರರು ದೈನಂದಿನ ಉಡುಗೆಗಳಲ್ಲಿರುತ್ತಾರೆ. ಹೀಗೆ ವೇಷ ಹಾಕಿದ ಅನಂತರ ಗುರಿಕಾರನ ಮನೆಯಲ್ಲಿ ಆರಂಭವಾದ ಕುಣಿತ ನಡೆಯುತ್ತದೆ. ಒಬ್ಬ ದುಡಿ ಬಾರಿಸುತ್ತಾ ಪಿಲಿಪಂಜಿ ಪಾಡ್ದನ ಹೇಳುತ್ತಾನೆ. ಇನ್ನೊಬ್ಬ ಅದನ್ನು ಪುನರಾವರ್ತಿಸುತ್ತಾರೆ. ಕುಣಿತದಲ್ಲಿ ಹಾಡು ನಿಧಾನಗತಿಯಿಂದ ಸಾಗುತ್ತದೆ. ಜಿಂಕೆ ವೇಷದವರು ಕೈಕಾಲುಗಳನ್ನೂರಿ ಕುಪ್ಪಳಿಸುತ್ತಾರೆ. ಹುಲಿ ಮತ್ತು ಹಂದಿ ಎದುರುಬದುರಾಗಿ ನಿಂತು ಬೆನ್ನನ್ನು ಪೂರ್ತಿ ಬಗ್ಗಿಸಿ ಕೈಕಾಲುಗಳನ್ನು ಸಮಾನಾಂತರವಾಗಿ ಬೀಸಿ ಮುಂದಕ್ಕೆ ಹಿಂದಕ್ಕೆ ಕುಣಿಯುತ್ತಿರುತ್ತಾರೆ. ಬೇಟೆಗಾರ ಹುಲಿ, ಹಂದಿಗಳಿಗೆ ಆಗಾಗ ಗುರಿ ಇಡುತ್ತಾನೆ. ಪ್ರಾಣಿಗಳು ತಪ್ಪಿಸಿಕೊಳ್ಳುತ್ತವೆ. ಕುಣಿತದ ಸಂದರ್ಭದಲ್ಲಿ ಆಯಾ ಪ್ರಾಣಿಗಳು ತಮ್ಮ ತಮ್ಮ ದ್ವನಿಯಲ್ಲಿ ಅರಚುತ್ತಿರುತ್ತವೆ. ‘ಪಿಲಿಪೋವು ಪಾಂಜರೊಡಾಂಡ್, ಪಂಜಿಪೋದು ಚೀಮುಳ್ಳುಡಾಂಡೆ’ ಎನ್ನುವಲ್ಲಿಗೆ ಹಾಡಿನ ಹಾಗೂ ಕುಣಿತಗಳು ಮುಕ್ತಾಯವಾಗುತ್ತದೆ. ಹೀಗೆ ಗ್ರಾಮದಲ್ಲಿ ಮನೆ ಮನೆಗೆ ಹೋಗುತ್ತಾರೆ. ಮನೆಗೆ ಹೋದ ಕೂಡಲೆ ಪಿಲಿಪಂಜಿಲು ಬೆತ್ತೆರ್ ಎಂದು ಹೇಳುತ್ತಾರೆ. ಮನೆಯವರು ಕುಣಿತಕ್ಕೆ ಅನುಮತಿ ಕೊಡುತ್ತಾರೆ. ಕುಣಿತ ಆರಂಭವಾಗುತ್ತದೆ. ಮನೆ ಮನೆಗೆ ಹೋಗಿ ಕುಣಿಯುವ ಕುಣಿತವಾದುದರಿಂದ ಹೆಚ್ಚಾಗಿ ರಾತ್ರಿ ಪೂರ್ತಿ ನಡೆಯುತ್ತದೆ. ಸಂಭಾವನೆಯಾಗಿ ಪ್ರತಿ ಮನೆಯಲ್ಲಿಯೂ ಅಕ್ಕಿ ತೆಂಗಿನಕಾಯಿ ಹಾಗೂ ಹಣ ದೊರೆಯುತ್ತದೆ. ಪಿಲಿಪಂಜಿ ಕುಣಿತದ ಕೊನೆಯ ದಿನ ಪಿಲಿಪಂಜಿ ಪೂಜೆಯು ನಡೆಯುತ್ತದೆ. ಇದು ಗುರಿಕ್ಕಾರನ ಮನೆಯಲ್ಲಿಯೇ ನೆರವೇರುತ್ತದೆ. ಪಿಲಿ ಚಾಮುಂಡಿ ದೈವಕ್ಕೆ ಅವಲಕ್ಕಿ, ಎಳನೀರು, ಅಗೆಲು ಬಡಿಸಿ ಪ್ರಾರ್ಥನೆ ಮಾಡುತ್ತಾರೆ. ಸೂರ್ಯೋದಯ ಆದ ಕೂಡಲೇ ಕಾಸರಕನ ಮರದ ಬುಡಕ್ಕೆ ಹೋಗಿ ‘ಬಿರಿಯುವ’ ಕ್ರಮ ಇದೆ. ಮುಖವಾಡಗಳನ್ನು ಆ ಮರದ ಬುಡದಲ್ಲಿಟ್ಟು ಕಾಯಿ ಒಡೆದು ಸ್ನಾನ ಮಾಡಿ ಅವರವರ ಮನೆಗೆ ತೆರಳುತ್ತಾರೆ. ಹೀಗೆ ಒಂದು ವಾರಗಳ ಕಾಲ ಈ ಕುಣಿತ ನಡೆಯುತ್ತದೆ. ಮುಖವಾಡಗಳನ್ನು ತೆಂಗು ಇಲ್ಲವೇ ಹಲಸಿನ ಮರಗಳಿಗೆ ನೇತು ಹಾಕುತ್ತಾರೆ. ಇದನ್ನು ಯಾರೂ ಮುಟ್ಟಬಾರದೆಂಬ ನಂಬಿಕೆ.[1]

ಪೂಜೆ

ಪಿಲಿಪಂಜಿ[2] ಕುಣಿತ ಸುಗ್ಗಿ ತಿಂಗಳ ರಾತ್ರಿ ಹೊತ್ತು ಕಾಪಾಡನ ಮನೆಯ ಆಂಗಳದಲ್ಲಿ ಬಣ್ಣ ಹಾಕಿ ಕುಣಿಯಲಾಗುತ್ತದೆ. ಕುಣಿತದ ಕೊನೆಯ ದಿನ ಕಾಪಾಡನ ಮನೆಯ ಅಂಗಳದಲ್ಲಿ ಅವಲಕ್ಕಿ ಬೆಲ್ಲ ಬೆರೆಸಿ ಬಾಳೆಹಣ್ಣು ಉದುಕಡ್ಡಿ ಹಚ್ಚಿ ಆರತಿ ಮಾಡುತ್ತಾರೆ. ನಂತರ ಗುರಿಕಾರ ಪ್ರಾರ್ಥನೆಯನ್ನು ಮಾಡುತ್ತಾನೆ.

ಉಲ್ಲೇಖ

  1. https://www.udayavani.com/kannada/news/art-culture/211831/folklore-spells-of-life-love
  2. ಡಾ. ಕೊಯಿರಾ ಬಾಳೆಪುಣಿ (2010). ಮುಗೇರರ ದುಡಿ ಕುಣಿತಗಳು ಸ್ವರೂಪ ಮತ್ತು ಸಂಸ್ಕೃತಿ. ಬಾಳೆಪುಣಿ ಬಂಟ್ವಾಳ: ದುಡಿ ಪ್ರಕಾಶನ ಬಾಲೆಪುಣಿ ದಕ್ಷಿಣ ಕನ್ನಡ. p. 92.
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.