ಪಾರ್ವತಮ್ಮ ರಾಜ್‌ಕುಮಾರ್

ಪಾರ್ವತಮ್ಮ ರಾಜ್‌ಕುಮಾರ್(6 December 1939 - 31 May 2017)[1] ಹೆಸರಾಂತ ಕನ್ನಡ ಚಲನಚಿತ್ರ ನಿರ್ಮಾಪಕಿ. ಇವರು ಕನ್ನಡದ ನಾಯಕನಟರಾದ ಪದ್ಮಭೂಷಣ ಡಾ.ರಾಜ್‍ಕುಮಾರ್ ಅವರ ಪತ್ನಿ. ರಾಜ್‍ಕುಮಾರ್ ನಟಿಸಿರುವ ಹಲವಾರು ಸಿನಿಮಾಗಳನ್ನು ವಜ್ರೇಶ್ವರಿ ಮೂವೀಸ್ ನಿರ್ಮಾಣ ಸಂಸ್ಥೆಯ ಮೂಲಕ ಪಾರ್ವತಮ್ಮ ರಾಜ್‍ಕುಮಾರ್ ನಿರ್ಮಿಸಿ, ವಿತರಿಸಿದ್ದಾರೆ.

ಪಾರ್ವತಮ್ಮ ರಾಜ್‌ಕುಮಾರ್
ಜನನ
ಪಾರ್ವತಮ್ಮ

೦೬-೧೨- ೧೯೩೯
ಸಾಲಿಗ್ರಾಮ, ಕೆ.ಆರ್. ನಗರ ತಾಲ್ಲೂಕು, ಮೈಸೂರು ಜಿಲ್ಲೆ, ಕರ್ನಾಟಕ
ನಿಧನ31 ಮೇ 2017(2017-05-31) (ವಯಸ್ಸು 77)
ಬೆಂಗಳೂರು
Resting placeಕಂಠೀರವ ಸ್ಟುಡಿಯೋ, ಬೆಂಗಳೂರು
ವೃತ್ತಿನಿರ್ಮಾಪಕಿ
ಸಂಗಾತಿ(ಗಳು)ಡಾ.ರಾಜ್‌ಕುಮಾರ್
ಮಕ್ಕಳುಶಿವರಾಜ್‍ಕುಮಾರ್
ಪುನೀತ್_ರಾಜ್‍ಕುಮಾರ್
ರಾಘವೇಂದ್ರ_ರಾಜ್‍ಕುಮಾರ್
ಪೂರ್ಣಿಮ
ಲಕ್ಷ್ಮಿ
Relativesರಾಮ್ ಕುಮಾರ್
ಪ್ರಶಸ್ತಿಗಳುರಾಜ್ಯೋತ್ಸವ ಪ್ರಶಸ್ತಿ

ಕನ್ನಡದ ಪ್ರಮುಖ ನಟರುಗಳಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‍ಕುಮಾರ್, ಮತ್ತು ಪುನೀತ್ ರಾಜ್‍ಕುಮಾರ್ ಪಾರ್ವತಮ್ಮನವರ ಮಕ್ಕಳು. ಕನ್ನಡದ ಮತ್ತೊಬ್ಬ ನಾಯಕ ನಟ ರಾಮ್ ಕುಮಾರ್ ಪಾರ್ವತಮ್ಮನವರ ಅಳಿಯ.

ಜೀವನ

ಬಾಲ್ಯ

1939 ಡಿಸೆಂಬರ್ 6 ರಂದು ಮೈಸೂರಿನ ಕೆಆರ್ ನಗರದ ಸಾಲಿಗ್ರಾಮದಲ್ಲಿ ಜನಿಸಿದ್ದ ಪಾರ್ವತಮ್ಮ ರಾಜ್ ಕುಮಾರ್ ಅವರು ಹೈಸ್ಕೂಲ್ ವಿದ್ಯಾಭ್ಯಾಸ ಮಾಡಿದ್ದಾರೆ. ಇವರ ತಂದೆ ಅಪ್ಪಾಜಿ ಗೌಡ ಮತ್ತು ತಾಯಿ ಲಕ್ಷ್ಮಮ್ಮ. ರಾಜ್ ಕುಮಾರ್ ಅವರ ಅತ್ತೆಯ ಹೆಸರೂ ಕೂಡ ಲಕ್ಷ್ಮಮ್ಮ ಎಂದೇ. ಪಾರ್ವತಮ್ಮ ಅವರ ತಂದೆ ಅಪ್ಪಾಜಿ ಗೌಡ ಅವರು ಸಂಗೀತ ಶಿಕ್ಷಕರಾಗಿದ್ದು, ಇವರ ಬಳಿಯಲ್ಲೇ ರಾಜ್ ಕುಮಾರ್ ಅವರೂ ಕೂಡ ಸಂಗೀತ ಅಭ್ಯಾಸ ಮಾಡಿದ್ದರು.

ವಿವಾಹ

ಪಾರ್ವತಮ್ಮ ಅವರು ತಮ್ಮ 13ನೇ ವಯಸ್ಸಿನಲ್ಲೇ ರಾಜ್ ಕುಮಾರ್ ಅವರನ್ನು ಮದುವೆಯಾದರು. 25-06-1953 ರಂದು ಪಾರ್ವತಮ್ಮ ಹಾಗೂ ರಾಜ್ ಕುಮಾರ್ ಅವರ ವಿವಾಹ ನೆರವೇರಿತ್ತು. ನಂಜನಗೂಡಿನ ರಾಣಪ್ಪ ಛತ್ರದಲ್ಲಿ ರಾಜ್ ಕುಮಾರ್ ಹಾಗೂ ಪಾರ್ವತಮ್ಮ ಅವರ ವಿವಾಹ ಕಾರ್ಯಕ್ರಮ ನೆರವೇರಿತ್ತು.

ನಿಧನ

ವರನಟ ಡಾ.ರಾಜ್ ಕುಮಾರ್ ಅವರ ಪತ್ನಿ, ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ (78) 2017 ಮೇ.31 ರಂದು ನಿಧನರಾದರು. ಕಳೆದ 16 ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅನಾರೋಗ್ಯಕ್ಕೊಳಗಾಗಿದ್ದ ಪಾರ್ವತಮ್ಮ ರಾಜ್ ಕುಮಾರ್ ಬೆಂಗಳೂರಿನ ಎಂ ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಪಾರ್ವತಮ್ಮ ರಾಜ್ ಕುಮಾರ್ ಮೇ.31 ಬೆಳಿಗ್ಗೆ 4:40 ಕ್ಕೆ ನಿಧನರಾದರು.[2]

ನಿರ್ಮಾಪಕಿ

ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ರಾಜ್ ಕುಮಾರ್ ಅವರು ಆರಂಭಿಕ ದಿನಗಳಲ್ಲಿ ಚಿತ್ರರಂಗದಲ್ಲಿ ನೆಲೆಯೂರಲು ಸಾಕಷ್ಟು ಕಷ್ಟ ಅನುಭವಿಸಿದ್ದರು. ಈ ಹಂತದಲ್ಲಿ ಪಾರ್ವತಮ್ಮ ಅವರು ರಾಜ್ ಕುಮಾರ್ ಅವರ ಬೆನ್ನೆಲುಬಾಗಿದ್ದರು. ಆದರೆ ಕ್ರಮೇಣ ರಾಜ್ ಕುಮಾರ್ ಅವರು ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟರಾದರು. 70ರ ದಶಕದಲ್ಲಿ ವೃತ್ತಿ ಜೀವನದ ಅತ್ಯಂತ ಉತ್ತುಂಗ ಸ್ಥಿತಿಗೆ ರಾಜ್ ಕುಮಾರ್ ತಲುಪಿದ್ದರು. ಈ ಸಮಯದಲ್ಲಿ ರಾಜ್ ಕುಮಾರ್ ಅವರಿಗೆ ಸಾಕಷ್ಟು ಬೇಡಿಕೆ ಇತ್ತಾದರೂ ನಿರ್ಮಾಪಕರು ಮಾತ್ರ ಕಡಿಮೆ ಸಂಭಾವನೆ ನೀಡುತ್ತಿದ್ದರು.

ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆ

ಈ ಹಂತದಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಅವರು ತಮ್ಮದೇ ನಿರ್ಮಾಣ ಸಂಸ್ಥೆ ಹುಟ್ಟುಹಾಕಲು ಮುಂದಾದರು. ಆಗ ತಲೆ ಎತ್ತಿದ್ದೇ ಪೂರ್ಣಿಮಾ ಎಂಟರ್ ಪ್ರೈಸಸ್ ಅಥವಾ ವಜ್ರೇಶ್ವರಿ ಕಂಬೈನ್ಸ್. 1975ರಲ್ಲಿ ತಲೆ ಎತ್ತಿದ ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿತು. ಆಕೆ ನೀಡಿದ ಮೊದಲ ಚಿತ್ರ ಒಂದು ಪ್ರಮುಖ ಪಾತ್ರದಲ್ಲಿ ರಾಜ್‍ಕುಮಾರ್‍ರಿದ್ದ 'ತ್ರಿಮೂರ್ತಿ' ಆಗಿತ್ತು; 1975ರಲ್ಲಿ ಈ ಸಂಸ್ಥೆ ನಿರ್ಮಿಸಿದ್ದ ಮೊದಲ ಚಿತ್ರ ತ್ರಿಮೂರ್ತಿ ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ತಾನು ನಿರ್ಮಿಸಿದ್ದ ಪ್ರಮುಖ ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ರಾಜ್‍ಕುಮಾರ್‍‍ರನ್ನು ಒಳಗೊಂಡು ತ್ರಿಮೂರ್ತಿ , ಹಾಲು ಜೇನು, ಕವಿರತ್ನ ಕಾಳಿದಾಸ ಮತ್ತು ಜೀವನ ಚೈತ್ರ ಮುಂತಾದ ಯಶಸ್ವಿ ಚಿತ್ರಗಳನ್ನು ನೀಡಿದರು.

ಪಾರ್ವತಮ್ಮ ಅವರು ತಮ್ಮ ಮೂರು ಗಂಡು ಮಕ್ಕಳ ಚಿತ್ರ ವ್ರತ್ತಿಜೀವನವನ್ನು ಪ್ರಾರಂಭಿಸಿದರು. ತಮ್ಮ ಹಿರಿಯ ಮಗ ಶಿವರಾಜ್‍ಕುಮಾರ್‍ರನ್ನು ಪ್ರಮುಖ ಪಾತ್ರದಲ್ಲಿ ಜೊತೆ ಆನಂದ್, ಓಂ, ಜನುಮದ ಜೋಡಿ, ಮತ್ತು ಹಲವಾರು ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ.

ಈ ವರೆಗೂ ಈ ಸಂಸ್ಥೆಯಿಂದ ಸುಮಾರು 80 ಚಿತ್ರಗಳು ಮೂಡಿಬಂದಿವೆ. ಕೇವಲ ಯಶಸ್ವಿ ಚಿತ್ರಗಳನ್ನಷ್ಟೇ ಅಲ್ಲದೆ ಕನ್ನಡ ಚಿತ್ರರಂಗಕ್ಕೆ ಅನೇಕ ಖ್ಯಾತ ನಟಿಯರನ್ನು ಈ ಸಂಸ್ಥೆ ಪರಿಚಯಿಸಿದೆ. ಕನ್ನಡ ಚಿತ್ರರಂಗದ ಪ್ರಮುಖ ತಾರೆಯರಾದ ಸುಧಾರಾಣಿ, ಮಾಲಾಶ್ರೀ, ಪ್ರೇಮಾ, ಅನು ಪ್ರಭಾಕರ್, ರಕ್ಷಿತಾ, ರಮ್ಯ ಅವರು ಕೂಡ ಇದೇ ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆಯಿಂದ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು.

ಕೇವಲ ನಿರ್ಮಾಪಕಿಯಾಗಿ ಮಾತ್ರವಲ್ಲದೇ ಹಂಚಿಕೆದಾರರಾಗಿಯೂ ಪಾರ್ವತಮ್ಮ ಅವರು ಸೇವೆಸಲ್ಲಿಸಿದ್ದಾರೆ. ಚಿತ್ರರಂಗಕ್ಕೆ ಇವರು ನೀಡಿರುವ ಸೇವೆಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳಿಗೆ ಇವರು ಭಾಜನರಾಗಿದ್ದಾರೆ. ಅಂತೆಯೇ ಜೀವಮಾನ ಸಾಧನೆಗಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೂ ಕೂಡ ಪಾರ್ವತಮ್ಮ ರಾಜ್ ಕುಮಾರ್ ಭಾಜನರಾಗಿದ್ದರು.[3]

ಪ್ರಶಸ್ತಿ ಪುರಸ್ಕಾರಗಳು

  1. ಕನ್ನಡ ರಾಜ್ಯೋತ್ಸವ ಪ್ರಶಸ್ತಿ
  2. ಜೀವಮಾನ ಸಾಧನೆಗೆ - ಕರ್ನಾಟಕ ಸರ್ಕಾರದಿಂದ ಪ್ರಶಸ್ತಿ
  3. ಸುವರ್ಣ ವಾಹಿನಿಯಿಂದ ಪ್ರಶಸ್ತಿ ಕನ್ನಡ ಸಿನಿಮಾಗೆ ಕೊಡುಗೆಗಾಗಿ.

ಉಲ್ಲೇಖಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.