ಕೊ. ಚನ್ನಬಸಪ್ಪ

ಕೋ. ಚೆನ್ನಬಸಪ್ಪನವರು (೧೯೨೨ ಫೆಬ್ರುವರಿ ೨೧ರಂದು - ೨೩ ಫೆಬ್ರುವರಿ ೨೦೧೯ [1]) ಕನ್ನಡದ ಸಾಹಿತಿಯಾಗಿದ್ದರು.ಇವರು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಮಡುಗು ಸಮೀಪದ ಆಲೂರು ಗ್ರಾಮದಲ್ಲಿ ಜನಿಸಿದರು. ತಾಯಿ ಬಸಮ್ಮ ; ತಂದೆ ಕೋಣನ ವೀರಣ್ಣ.[2]

ಜೀವನ

ನಿವೃತ್ತ ನ್ಯಾಯಾಧಿಶರಾದ ಕೋ. ಚೆನ್ನಬಸಪ್ಪನವರು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಮಡುಗು ಸಮೀಪದ ಆಲೂರಿನಲ್ಲಿ. ತಂದೆ ವೀರಣ್ಣ. ತಾಯಿ ಬಸಮ್ಮ. ಕಾನಮಡುಗು ಹಳ್ಳಿಯಲ್ಲಿ ಪ್ರೈಮರಿ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸ . ನಂತರ ಪ್ರೌಢಶಾಲೆಗೆ ಬಳ್ಳಾರಿ, ನಂತರ ಕಾಲೇಜು ವಿದ್ಯಾಭ್ಯಾಸ ಅನಂತಪುರದಲ್ಲಿ ನಡೆಯಿತು. ಆಗ ದೇಶಕ್ಕೆ ಹಬ್ಬಿದ್ದ ಸ್ವಾತಂತ್ರ್ಯದ ಬಿಸಿ. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ವಿದ್ಯಾರ್ಥಿ ಮುಖಂಡರಾಗಿ ಭಾಗಿಯಾಗಿ ಬಂಧನ, ಸೆರೆಮನೆವಾಸ ಅನುಭವಿಸಿದರು. ಬಿಡುಗಡೆಯ ನಂತರ ಬಿ.ಎ. ಪದವಿ, ಬೆಳಗಾವಿ ಕಾಲೇಜಿನಿಂದ ಲಾ ಪದವಿ. ಚರಿತ್ರೆ ಮತ್ತು ರಾಜ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಕೂಡ ಪಡೆದರು.

೧೯೪೬ರಲ್ಲಿ ಮುಂಬಯಿ ಹೈಕೋರ್ಟಿನಲ್ಲಿ ವಕೀಲರಾಗಿ ನೋಂದಣಿಗೊಂಡು, ಬಳ್ಳಾರಿ ಡಿಸ್ಟ್ರಿಕ್ಟ್ ಕೋರ್ಟಿನಲ್ಲಿ ವಕೀಲಿ ವೃತ್ತಿ ಆರಂಭ. ೧೯೬೫ರಲ್ಲಿ ಡಿಸ್ಟ್ರಿಕ್ಟ್ ಸೆಷನ್ ಜಡ್ಜ್ ಆಗಿ ನೇಮಕವಾದರು. ನಿವೃತ್ತಿಯ ನಂತರ ಪುನಃ ಕರ್ನಾಟಕ ಹೈಕೋರ್ಟಿನಲ್ಲಿ ವಕೀಲಿ ವೃತ್ತಿ. ಹಲವಾರು ಕಾರ್ಮಿಕ ಸಂಘಗಳ, ಭ್ರಷ್ಟಾಚಾರ ನಿರ್ಮೂಲನಾ ಸಮಿತಿಯ ಅಧ್ಯಕ್ಷರ ಜವಾಬ್ದಾರಿ ನಿರ್ವಹಿಸಿದರು.

೧೯೭೧ರ ಸುಮಾರಿನಲ್ಲಿ ಅರವಿಂದಾಶ್ರಮದ ಒಡನಾಟ ಇರಿಸಿಕೊಂಡಿದ್ದರು. ಕರ್ನಾಟಕ ವಿಭಾಗದ ಅರವಿಂದಾಶ್ರಮ ಪ್ರಾರಂಭ ಮಾಡಿದರು. ಅಮೆರಿಕದಲ್ಲಿ ನಡೆದ ವೀರಶೈವ ವಾರ್ಷಿಕ ಅವೇಶನ, ಅರವಿಂದಾಶ್ರಮದ ಕಾರ‍್ಯಕ್ರಮಗಳಲ್ಲಿ ಪ್ರಮುಖ ಪಾತ್ರ. ಸಾಹಿತ್ಯದ ಗೀಳು ಹಚ್ಚಿಕೊಂಡ ಇವರು ನಾಡಿನ ಪ್ರಮುಖ ಪತ್ರಿಕೆಗಳಿಗೆಲ್ಲಾ ಬರೆದ ಅಪಾರ ಬರಹ. ಕನ್ನಡಪ್ರಭ ಪತ್ರಿಕೆಯಲ್ಲಿ ನ್ಯಾಯಾಧಿಶರ ನೆನಪುಗಳು ಮತ್ತು ಪ್ರಜಾಮತ ವಾರಪತ್ರಿಕೆಯಲ್ಲಿ ನ್ಯಾಯಾಲಯದಲ್ಲಿ ಸತ್ಯ ಕಥೆಗಳು ಪ್ರಕಟಿತ. ಪ್ರಕಟಿತ ಕೃತಿಗಳೇ ಸುಮಾರು ೮೦ಕ್ಕೂ ಹೆಚ್ಚು. ಸ್ವಾತಂತ್ರ್ಯ ಮಹೋತ್ಸವ, ಪ್ರಾಣಪಕ್ಷಿ, ಜೀವತೀರ್ಥ ಮೊದಲಾದ ೫ ಕವನ ಸಂಕಲನಗಳು. ಗಡಿಪಾರು, ನಮ್ಮೂರ ದೀಪ, ಗಾಯಕನಿಲ್ಲದ ಸಂಗೀತ ಮುಂತಾದ ೬ ಕಥಾ ಸಂಕಲನಗಳು. ಹಿಂದಿರುಗಿ ಬರಲಿಲ್ಲ, ನೊಗದ ನೇಣು, ರಕ್ತತರ್ಪಣ, ಬೇಡಿ ಕಳಚಿತು-ದೇಶ ಒಡೆಯಿತು ಮೊದಲಾದ ೯ ಕಾದಂಬರಿಗಳು. ಶ್ರೀ ಅರವಿಂದರು, ಶ್ರೀ ಮಾತಾಜಿ, ಶ್ರೀ ಮೃತ್ಯುಂಜಯಸ್ವಾಮಿಗಳು ಮೊದಲಾದ ೮ ಜೀವನಚರಿತ್ರೆಗಳು. ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ಸಮೀಕ್ಷೆ, ದೃಢಪ್ರತಿಜ್ಞೆ, ಕುವೆಂಪು ವೈಚಾರಿಕತೆ ಮೊದಲಾದ ವಿಮರ್ಶಾ ಗ್ರಂಥಗಳು. ರಕ್ಷಾಶತಕಂ, ಶ್ರೀ ಕುವೆಂಪು ಭಾಷಣಗಳು, ಬಿನ್ನವತ್ತಳೆಗಳು ಸಂಪಾದಿತ ಕೃತಿಗಳು.

ವೃತ್ತಿ

ನ್ಯಾಯವಾದಿಗಳಾಗಿ ವೃತ್ತಿ ಪ್ರಾರಂಭಿಸಿದ ಚನ್ನಬಸಪ್ಪನವರು ನ್ಯಾಯಮೂರ್ತಿಗಳಾಗಿ ನಿವೃತ್ತರಾದರು.

ಕೃತಿಗಳು

  • ಖಜಾನೆ
  • ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ಸಮೀಕ್ಷೆ
  • ರಕ್ತತರ್ಪಣ
  • ಹಿಂದಿರುಗಿ ಬರಲಿಲ್ಲ
  • ನ್ಯಾಯಾಲಯದ ಸತ್ಯಕಥೆಗಳು
  • ಪ್ರಾಣಪಕ್ಷಿ
  • ಹೃದಯ ನೈವೇದ್ಯ
  • ದಿವಾನ್ ಬಹಾದ್ದೂರ್
  • ಶ್ರೀ ಮೃತ್ಯುಂಜಯ ಸ್ವಾಮಿಗಳು
  • ಶ್ರೀ ಅರವಿಂದರು
  • ಶ್ರೀ ಅರವಿಂದರು ಮತ್ತು ಅವರ ಆಶ್ರಮ
  • ಶ್ರೀ ರಾಮಕೃಷ್ಣ ಲೀಲಾ ನಾಟಕ
  • ರಾಮಕೃಷ್ಣರ ದೃಷ್ಟಾಂತ ಕಥೆಗಳು
  • ಬೆಳಕಿನೆಡೆಗೆ
  • ನಮಗೆ ಬೇಕಾದ ಸಾಹಿತ್ಯ
  • ನನ್ನ ಮನಸ್ಸು
  • ನನ್ನ ನಂಬುಗೆ
  • ಆ ಮುಖ ಈ ಮುಖ
  • ಈ ರಾಜ್ಯದೊಡೆಯ ರೈತ

ಕಥಾ ಸಂಕಲನಗಳು

  • ಗಡಿಪಾರು
  • ನಮ್ಮೂರ ದೀಪ
  • ಗಾಯಕನಿಲ್ಲದ ಸಂಗೀತ

ಕವನ ಸಂಕಲನಗಳು

  • ಸ್ವಾತಂತ್ರ್ಯ ಮಹೋತ್ಸವ
  • ಪ್ರಾಣಪಕ್ಷಿ
  • ಜೀವತೀರ್ಥ


ಪುರಸ್ಕಾರ

  • “ಖಜಾನೆ”ಗೆ ಭಾರತ ಸರಕಾರದ ನೂತನ ಅಕ್ಷರಸ್ಥರ ಸಾಹಿತ್ಯಸ್ಪರ್ಧೆಯಲ್ಲಿ ಬಹುಮಾನ ದೊರಕಿದೆ
  • “ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ಸಮೀಕ್ಷೆ”ಗೆ ಕುವೆಂಪು ವಿದ್ಯಾವರ್ಧಕ ಟ್ರಸ್ಟಿನ ಪುರಸ್ಕಾರ ಲಭಿಸಿದೆ.
  • ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ
  • ಉಗ್ರಾಣ ಪ್ರಶಸ್ತಿ
  • ಸ.ಸ.ಮಾಳವಾಡ ಪ್ರಶಸ್ತಿ
  • ಚಿಂತನಶ್ರೀ ಪ್ರಶಸ್ತಿ
  • ಸಂ.ಶಿ. ಭೂಸನೂರ ಮಠ ಪ್ರಶಸ್ತಿ
  • ಕನ್ನಡಶ್ರೀ ಪ್ರಶಸ್ತಿ
  • ವಿಶ್ವಮಾನವ ಪ್ರಶಸ್ತಿ ಮುಂತಾದವು

yeshvanth

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.